ಕೇರಳದಲ್ಲಿ 'ನೊರೊವೈರಸ್' ಪತ್ತೆ: ಆತಂಕ ಬೇಡ ಎಂದ ಸರ್ಕಾರ
ತಿರುವನಂತಪುರ, ಜೂನ್ 6: ದೇಶದಲ್ಲಿ ದಿನೇ ದಿನೇ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು 4ನೇ ಅಲೆಯ ಭೀತಿ ಎದುರಾಗಿದೆ. ವಿಶ್ವದ ಹಲವು ಭಾಗಗಳಲ್ಲಿ ಹರಡಿರುವ ಮಂಕಿಪಾಕ್ಸ್ ಕೂಡ ಭಾರತಕ್ಕೆ ಯಾವಾಗ ಬರುತ್ತೋ ಎನ್ನುವ ಭಯ ಕಾಡುತ್ತಿದೆ, ಈ ನಡುವೆ ನೆರೆಯ ಕೇರಳದಲ್ಲಿ ಮತ್ತೊಂದು ಬಗೆಯ ವೈರಸ್ ಪತ್ತೆಯಾಗಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಕೇರಳ ರಾಜಧಾನಿ ತಿರುವನಂತಪುರದಲ್ಲಿ ಎರಡು 'ನೊರೊ ವೈರಸ್' ಪ್ರಕರಣಗಳ ದೃಢಪಟ್ಟಿವೆ ಎಂದು ವರದಿಯಾಗಿದೆ. ಅದರಲ್ಲೂ ಇಬ್ಬರು ಮಕ್ಕಳಲ್ಲಿ ವೈರಸ್ ಪತ್ತೆಯಾಗಿರುವುದಾಗಿ ವರದಿಯಾಗಿದೆ. ಇಬ್ಬರು ಮಕ್ಕಳ ಆರೋಗ್ಯ ಸ್ಥಿರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ.
ದೇಶದಲ್ಲಿ ಮತ್ತೆ ಕೊರೊನಾ: 5 ರಾಜ್ಯಗಳಿಗೆ ಕೇಂದ್ರ ಸರ್ಕಾರ ಪತ್ರ
ಕೇರಳದ ಆಲಪ್ಪುಳ ಜಿಲ್ಲೆಯ ಕಾಯಂಕುಲಂನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಂಟು ವಿದ್ಯಾರ್ಥಿಗಳು ವಿಷಪೂರಿತ ಆಹಾರ ಸೇವನೆಯಿಂದ ಅಸ್ವಸ್ಥಗೊಂಡಿದ್ದಾರೆ ಎಂದು ಶನಿವಾರ ಆಸ್ಪತ್ರೆಗೆ ದಾಖಲಾದ ನಂತರ ಸೋಂಕು ಪತ್ತೆಯಾಗಿದೆ. ವಿದ್ಯಾರ್ಥಿಗಳ ರಕ್ತದ ಮಾದರಿಗಳನ್ನು ಸರ್ಕಾರಿ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ಕೊರೊನಾಗೆ ಕೊರ್ಬೊವ್ಯಾಕ್ಸ್ ಅನ್ನು ಬೂಸ್ಟರ್ ಡೋಸ್ ಆಗಿ ನೀಡಲು ಡಿಸಿಜಿಐ ಅನುಮೋದನೆ
ರಾಜ್ಯ ಆರೋಗ್ಯ ಇಲಾಖೆ ಪ್ರಕಾರ, ಕಲುಷಿತ ನೀರು ಮತ್ತು ಆಹಾರದ ಮೂಲಕ ವೈರಸ್ ಹರಡುವ ಸಾಧ್ಯತೆಯಿರುವುದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸೋಂಕಿತರ ಪ್ರದೇಶದ ಜನರಿಂದ ಮಾದರಿಗಳನ್ನು ಸಂಗ್ರಹಿಸುತ್ತಿದ್ದು ಪರೀಕ್ಷೆ ಮಾಡಲಾಗುತ್ತಿದೆ.
ವೈರಸ್ ಹರಡದಂತೆ ಕ್ರಮ
ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಜನರು ನೈರ್ಮಲ್ಯವನ್ನು ಕಾಪಾಡಿಕೊಳ್ಳುವಂತೆ ಜನರಲ್ಲಿ ಮನವಿ ಮಾಡಿದ್ದಾರೆ, "ಇಬ್ಬರು ಮಕ್ಕಳಲ್ಲಿ ನೊರೊವೈರಸ್ ಸೋಂಕು ಪತ್ತೆಯಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಸದ್ಯಕ್ಕೆ ಆತಂಕಪಡುವ ಅಗತ್ಯವಿಲ್ಲ ಆದರೆ ಎಲ್ಲರೂ ಜಾಗರೂಕರಾಗಿರಬೇಕು ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು" ಎಂದು ಅವರು ತಿಳಿಸಿದ್ದಾರೆ.
ಹೊಸ ವೈರಸ್ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಆರೋಗ್ಯ ಇಲಾಖೆ ಪರಿಸ್ಥಿತಿ ಅವಲೋಕಿಸಿದೆ. ಸೋಂಕು ಪತ್ತೆಯಾದ ಪ್ರದೇಶದಿಂದ ಮಾದರಿಗಳನ್ನು ತೆಗೆದುಕೊಂಡು ಪರೀಕ್ಷೆ ನಡೆಸಲಾಗಿದ್ದು, ರಕ್ಷಣೆಗೆ ಅಗತ್ಯ ಕ್ರಮವನ್ನು ತೀವ್ರಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ನೊರೊ ವೈರಸ್ ಬಗ್ಗೆ ಮಾಹಿತಿ
ನೊರೊ ವೈರಸ್ ಜಠರಗರುಳಿನ ಕಾಯಿಲೆಯನ್ನು ಉಂಟುಮಾಡುತ್ತದೆ, ಇದು ಹೊಟ್ಟೆ ಮತ್ತು ಕರುಳಿನ ಒಳಪದರದ ಉರಿಯೂತಕ್ಕೆ ಕಾರಣವಾಗುತ್ತದೆ, ತೀವ್ರವಾದ ವಾಂತಿ ಮತ್ತು ಅತಿಸಾರ ಇದರ ಪ್ರಮುಖ ರೋಗ ಲಕ್ಷಣ.
ಆರೋಗ್ಯವಂತ ಜನರ ಮೇಲೆ ನೊರೊ ವೈರಸ್ ಗಮನಾರ್ಹವಾಗಿ ಪರಿಣಾಮ ಬೀರದಿದ್ದರು, ಚಿಕ್ಕ ಮಕ್ಕಳು, ವೃದ್ಧರು ಮತ್ತು ರೋಗ ಲಕ್ಷಣ ಹೊಂದಿರುವ ಜನರ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ.
ವೈರಸ್ ದಾಳಿಯ 12 ರಿಂದ 48 ಗಂಟೆಗಳ ನಂತರ ರೋಗಲಕ್ಷಣ ಕಾಣಿಸುತ್ತವೆ, ಆದರೆ ಸೋಂಕಿತ ವ್ಯಕ್ತಿಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಪ್ರಾರಂಭಿಸಿದರೆ 3 ದಿನಗಳಲ್ಲಿ ಚೇತರಿಸಿಕೊಳ್ಳಬಹುದು.
ಸೋಂಕು ಹರಡುವ ವಿಧಾನ, ಲಕ್ಷಣ
ಸೋಂಕಿಗೆ ಒಳಗಾದ ಜನರೊಂದಿಗೆ ನಿಕಟ ಸಂಪರ್ಕದ ಮೂಲಕ ಅಥವಾ ಕಲುಷಿತ ಮೇಲ್ಮೈಗಳನ್ನು ಸ್ಪರ್ಶಿಸುವ ಮೂಲಕ ವೈರಸ್ ಸುಲಭವಾಗಿ ಹರಡುತ್ತದೆ. ಹೊಟ್ಟೆಯ ದೋಷವಿರುವ ಯಾರಾದರೂ ತಯಾರಿಸಿದ ಅಥವಾ ನಿರ್ವಹಿಸಿದ ಆಹಾರವನ್ನು ತಿನ್ನುವ ಮೂಲಕವೂ ಇದು ಹರಡಬಹುದು.
ಅತಿಸಾರ, ಹೊಟ್ಟೆ ನೋವು, ವಾಂತಿ, ವಾಕರಿಕೆ, ಅಧಿಕ ತಾಪಮಾನ, ತಲೆನೋವು ಮತ್ತು ದೇಹದ ನೋವು ನೊರೊವೈರಸ್ನ ಲಕ್ಷಣಗಳಾಗಿವೆ. ಇದು ಸೋಂಕಿತ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹರಡಬಹುದು. ಇದು ಮಾತ್ರವಲ್ಲದೆ, ಒಬ್ಬ ವ್ಯಕ್ತಿಯು ಹಲವಾರು ಬಾರಿ ನೊರೊವೈರಸ್ ಸೋಂಕಿಗೆ ಒಳಗಾಗಬಹುದು, ಏಕೆಂದರೆ ಅದರಲ್ಲಿ ಹಲವಾರು ವಿಧಗಳಿವೆ ಎಂದು ಹೇಳಲಾಗುತ್ತದೆ.
ವೈರಸ್ ಹರಡಂತೆ ಮುನ್ನೆಚ್ಚರಿಕೆ
ಪ್ರಾಥಮಿಕ ವರದಿಯಲ್ಲಿ ನೊರೊ ವೈರಸ್ ಮಾರಣಾಂತಿಕ ಅಲ್ಲ ಎಂದು ತಿಳಿದಿದ್ದರೂ, ಇದಕ್ಕೆ ಸೂಕ್ತ ಚಿಕಿತ್ಸೆಗೆ ಔಷಧಿ ಲಭ್ಯವಿಲ್ಲ. ಆದ್ದರಿಂದ ಸೋಂಕು ಹರಡದಂತೆ ಮುಂಜಾಗ್ರತೆ ವಹಿಸುವುದು ಅಗತ್ಯವಾಗಿದೆ.
ಸಾಧ್ಯವಾದಷ್ಟು ತಾಜಾ ಆಹಾರ ಸೇವಿಸುವುದು, ಕಾಯಿಸಿ ಆರಿಸಿದ ನೀರು ಕುಡಿಯುವುದು, ಸುತ್ತಮುತ್ತಲಿನ ಪ್ರದೇಶಗಳು ಮಲಿನವಾಗದಂತೆ ಎಚ್ಚರಿಕೆ ವಹಿಸುವುದರಿಂದ ನೊರೊ ವೈರಸ್ಗೆ ತುತ್ತಾಗುವುದನ್ನು ತಪ್ಪಿಸಬಹುದು.
ಆಗಾಗ್ಗೆ ಕೈಗಳನ್ನು ಸಾಬೂನು ಮತ್ತು ಉಗುರುಬೆಚ್ಚನೆಯ ನೀರಿನಿಂದ ಚೆನ್ನಾಗಿ ತೊಳೆಯಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ. ಮುಖ್ಯವಾಗಿ ಹ್ಯಾಂಡ್ ಸ್ಯಾನಿಟೈಸರ್ ನೊರೊವೈರಸ್ ಸಾಯುವುದಿಲ್ಲ, ಆದ್ದರಿಂದ ಹ್ಯಾಂಡ್ ಸ್ಯಾನಿಟೈಸರ್ ಬಳಸುವುದು ಪ್ರಯೋಜನಕಾರಿಯಲ್ಲ.