ಸಂಪೂರ್ಣ ಲಾಕ್ಡೌನ್ ಬೇಡ ಎಂದ ಕೇರಳ ಕ್ಯಾಬಿನೆಟ್
ತಿರುವನಂತಪುರಂ, ಜುಲೈ 27: ದಕ್ಷಿಣ ಭಾರತದ ಪೈಕಿ ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ ಹಾಗು ಕೇರಳದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಉಲ್ಬಣವಾಗಿದೆ. ಕೇರಳದಲ್ಲಿ ಸೋಂಕು ಹೆಚ್ಚುತ್ತಿದ್ದಂತೆ ಮತ್ತೊಂದು ಸುತ್ತಿನ ಲಾಕ್ಡೌನ್ ಕೂಗು ಕೇಳಿ ಬಂದಿದೆ.
ಸೋಮವಾರ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಸಂಪೂರ್ಣ ಲಾಕ್ಡೌನ್ ಬೇಡ ಎಂದು ನಿರ್ಧರಿಸಲಾಗಿದೆ. ಆದ್ರೆ, ಸೋಂಕು ಹೆಚ್ಚಿರುವ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಕ್ಯಾಬಿನೆಟ್ನಲ್ಲಿ ತೀರ್ಮಾನ ಮಾಡಲಾಗಿದೆ.
ತಿರುವನಂತಪುರಂನಲ್ಲಿ ಏಳು ಜನ ಕೌನ್ಸಿಲರ್ಗೆ ಕೊರೊನಾ ಪಾಸಿಟಿವ್
ಸೋಮವಾರ ವಿಡಿಯೋ ಕಾನ್ಫೆರೆನ್ಸ್ ಮೂಲಕ ಕ್ಯಾಬಿನೆಟ್ ಸಚಿವರು ಸಭೆ ಮಾಡಲಾಗಿತ್ತು. ಈ ಸಭೆಯಲ್ಲಿ ಸಂಪೂರ್ಣ ಲಾಕ್ಡೌನ್ ವಿರೋಧ ವ್ಯಕ್ತವಾಗಿದೆ. ಇದಕ್ಕೂ ಮುಂಚೆ ಶುಕ್ರವಾರ ನಡೆದ ಸರ್ವಪಕ್ಷ ಸಭೆಯಲ್ಲೂ ಸಂಪೂರ್ಣ ಲಾಕ್ಡೌನ್ ವಿರೋಧಿಸಿದ್ದರು.
ರಾಜ್ಯದಲ್ಲಿ ಕೊವಿಡ್ ಪರಿಸ್ಥಿತಿ ನಿಯಂತ್ರಿಸಲು ತಜ್ಞರು ಎರಡು ರೀತಿ ವರದಿ ನೀಡಿದ್ದರು. ಒಂದು ಸಂಪೂರ್ಣವಾಗಿ ಲಾಕ್ಡೌನ್ ಮಾಡುವುದು ಅಥವಾ ಪ್ರಸ್ತುತ ಜಾರಿಯಲ್ಲಿರುವ ನಿಯಮಗಳನ್ನು ಬಲಪಡಿಸುವುದು. ಇದೇ ಅಂಶವನ್ನು ಸರ್ವಪಕ್ಷ ಸಭೆಯಲ್ಲಿ ಚರ್ಚಿಸಲಾಯಿತು. ಆದರೆ, ಸಭೆಯಲ್ಲಿ ಸಂಪೂರ್ಣ ಲಾಕ್ಡೌನ್ ಬೇಡ ಎಂಬ ತೀರ್ಮಾನಕ್ಕೆ ಬರಲಾಯಿತು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶುಕ್ರವಾರ ತಿಳಿಸಿದ್ದರು.
ಪ್ರತಿಪಕ್ಷ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸಹ ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಮಾಡುವುದು ಸೂಕ್ತವಲ್ಲ ಎಂದು ಸರ್ಕಾರವನ್ನು ತಿಳಿಸಿತ್ತು. ಲಾಕ್ಡೌನ್ ಮಾಡುವುದರಿಂದ ಜನರಿಗೆ ಮತ್ತಷ್ಟು ಸಂಕಷ್ಟ ಎದುರಾಗುವುದು ಎಂದು ಸಿಪಿಎಂ ಅಭಿಪ್ರಾಯ ಪಟ್ಟಿತ್ತು.