ಜನಸಾಮಾನ್ಯರಿಗೆ ತೊಂದರೆ ಮಾಡುವ ವಿಷಯಗಳಲ್ಲಿ ರಾಜಿ ಇಲ್ಲ: ಮಲ್ಲಿಕಾರ್ಜುನ ಖರ್ಗೆ
ತಿರುವನಂತಪುರಂ, ಫೆಬ್ರವರಿ 20: ವಿರೋಧಪಕ್ಷದಲ್ಲಿದ್ದು ವಿರೋಧಿಸಬೇಕೆಂಬ ಕಾರಣಕ್ಕಾಗಿಯೇ ಸರ್ಕಾರವನ್ನು ವಿರೋಧಿಸುವುದು ತಮ್ಮ ಕಾರ್ಯ ಶೈಲಿ ಅಲ್ಲ ಎಂದು ರಾಜ್ಯಸಭೆಯ ನೂತನ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
'ನಾವು ವಿರೋಧಪಕ್ಷದಲ್ಲಿರುವ ಕಾರಣಕ್ಕೆ ಸರ್ಕಾರವನ್ನು ವಿರೋಧ ಮಾಡುತ್ತಿಲ್ಲ. ಸಾಮಾನ್ಯ ಜನರಿಗೆ ತೊಂದರೆ ನೀಡುತ್ತಿರುವ ಸರ್ಕಾರದ ನೀತಿಗಳನ್ನು ನಾವು ವಿರೋಧಿಸುತ್ತೇವೆ. ಈ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ' ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿಥಲ ಆಯೋಜಿಸಿರುವ ಯುಡಿಎಫ್ನ ಐಶ್ವರ್ಯಾ ಕೇರಳ ಯಾತ್ರಾದಲ್ಲಿ ಪಾಲ್ಗೊಳ್ಳಲು ಕೇರಳದ ಕೊಲ್ಲಂಗೆ ಭೇಟಿ ನೀಡಿದ ಸಂದರ್ಭದಲ್ಲಿ ಶುಕ್ರವಾರ ಅವರು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಕಳೆದ ವರ್ಷ ಸಂಸತ್ನಲ್ಲಿ ಅಂಗೀಕರಿಸಿದ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿದ ಖರ್ಗೆ, ಸರ್ಕಾರವು ಈ ವಿವಾದಾತ್ಮಕ ಕಾಯ್ದೆಗಳನ್ನು ಹಿಂದಕ್ಕೆ ಪಡೆದುಕೊಂಡು ಹೊಸ ಪ್ರಸ್ತಾಪಗಳೊಂದಿಗೆ ಬರಬೇಕು. ಅದನ್ನು ಸಂಸದೀಯ ಸ್ಥಾಯಿ ಸಮಿತಿಯ ಪರಿಶೀಲನೆಗೆ ನೀಡಬೇಕು ಎಂದು ಸಲಹೆ ನೀಡಿದರು.
ಬಡ ಜನರ ಸಮಸ್ಯೆಗಳನ್ನು ರಾಜ್ಯಸಭೆಯಲ್ಲಿ ಮುಖ್ಯವಾಗಿ ಪ್ರಸ್ತಾಪಿಸುವಂತೆ ಪಕ್ಷದ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ತಮಗೆ ಸೂಚಿಸಿದ್ದಾರೆ ಎಂದು ತಿಳಿಸಿದರು. 'ನಾವು ಸಂಸತ್ನಲ್ಲಿ ಸಮಸ್ಯೆಗಳ ಕುರಿತು ಧ್ವನಿ ಎತ್ತುವುದು ಜನಪ್ರಿಯರಾಗುವ ಸಲುವಾಗಿ ಅಲ್ಲ. ಬಡವರಿಗೆ ಕಷ್ಟವಾಗುವ ವಿಚಾರಗಳನ್ನು ನಾವು ತೆಗೆದುಕೊಳ್ಳುತ್ತೇವೆ. ಯಾರಾದರೂ ಮಾತನಾಡಲೇಬೇಕು' ಎಂದರು.
'ಕಳೆದ ಕೆಲವು ತಿಂಗಳಿನಿಂದ ಕೃಷಿ ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಅದು ಎಂಎಸ್ಪಿ ಮತ್ತು ಮಂಡಿ ವ್ಯವಸ್ಥೆಯನ್ನು ರದ್ದುಗೊಳಿಸುತ್ತದೆ ಎಂಬ ಕಾರಣಕ್ಕೆ ಹಿಂದಕ್ಕೆ ಪಡೆಯುವಂತೆ ಒತ್ತಾಯಿಸುತ್ತಿದ್ದಾರೆ. ಅವರ ಬೇಡಿಕೆಯನ್ನು ನಾವು ಬೆಂಬಲಿಸುತ್ತೇವೆ. ಈ ಕಾಯ್ದೆಗಳನ್ನು ತರುವ ಮೂಲಕ ರೈತರು, ವ್ಯಾಪಾರಿಗಳಿಗೆ ತೃಪ್ತಿ ಉಂಟುಮಾಡಲು ಸರ್ಕಾರ ವಿಫಲವಾಗಿದೆ' ಎಂದು ಹೇಳಿದರು.