ಐಎಸ್ ಉಗ್ರ ಸಂಘಟನೆಯಿಂದ ಭಾರೀ ಕೃತ್ಯಕ್ಕೆ ಸಂಚು, ಆರು ಮಂದಿ ಬಂಧನ
ಕೊಚ್ಚಿ, ಜೂನ್ 12: ತಮಿಳುನಾಡು, ಕೇರಳದಲ್ಲಿ ಭಯೋತ್ಪಾದನಾ ದಾಳಿಗೆ ಸಂಚು ರೂಪಿಸಿದ್ದ ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ಆರು ಮಂದಿ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ಪ್ರಕರಣ ದಾಖಲಿಸಿದೆ. ಇವರು ಶ್ರೀಲಂಕಾದ ಈಸ್ಟರ್ ದಾಳಿಯ ರೂವಾರಿ ಝಹ್ರಾನ್ ಹಶೀಂ ಜತೆಗೆ ಇವರ ನಂಟಿತ್ತು ಎನ್ನಲಾಗುತ್ತಿದೆ.
ಈಗ ಬಂಧಿತರಾಗಿರುವವರು ಝಹ್ರಾನ್ ಹಶೀಮ್ ನ ಫೇಸ್ ಬುಕ್ ಸ್ನೇಹಿತರು. ಆತನ ಉಪನ್ಯಾಸಗಳನ್ನು ಕಳೆದ ಎರಡು ವರ್ಷಗಳಿಂದ ಆನ್ ಲೈನ್ ನಲ್ಲಿ ಕೇಳುತ್ತಿದ್ದರು. ತನಿಖೆಯ ಭಾಗವಾಗಿ ಎನ್ ಐಎ ಕೊಯಮತ್ತೂರಿನ ಏಳು ಸ್ಥಳಗಳಲ್ಲಿ ಬುಧವಾರ ದಾಳಿ ನಡೆಸಿದೆ. ಕೊಚ್ಚಿಯ ಎನ್ ಐಎ ಕೋರ್ಟ್ ನಲ್ಲಿ ಈಚೆಗೆ ಎಫ್ ಐಆರ್ ಆಗಿತ್ತು.
ಕೇರಳದ ಮೂವರ ಹೆಸರನ್ನು ಮತ್ತೆ ಐಸಿಸ್ ಪಟ್ಟಿಯಲ್ಲಿ ಸೇರಿಸಿದ ಎನ್ಐಎ
ಮೊಹ್ಮದ್ ಅಜರುದ್ದೀನ್ ಕೊಯಮತ್ತೂರು, ನಂಜುಂಡಪುರಂನ ಟಿ ಅಜರುದ್ದೀನ್, ಶೇಖ್ ಹಿದಾಯತ್ ಉಲ್ಲಾ, ಅಬೂಬಕರ್, ಸದ್ದಾಂ ಹುಸೇನ್ ಹಾಗೂ ಇಬ್ರಾಹಿಂ ಶಾಹೀನ್ ಬಂಧಿತರು. ಆರೋಪಿಗಳನ್ನು ವಿಚಾರಣೆ ಮಾಡಲಾಗಿದ್ದು, ಕೆಲವು ಶಂಕಿತರಿಗೆ ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಶ್ರೀಲಂಕಾ ಸ್ಫೋಟಕ್ಕೆ ಇರುವ ಭಾರತೀಯರ ನಂಟಿನ ಬಗ್ಗೆ ತನಿಖೆ ನಡೆಸುವ ವೇಳೆ ಕೊಯಮತ್ತೂರಿನಲ್ಲಿ ಇಸ್ಲಾಮಿಕ್ ಸ್ಟೇಟ್ ಕಡೆಯಿಂದ ಯುವಕರನ್ನು ನೇಮಕ ಮಾಡಿಕೊಂಡು, ತಮಿಳುನಾಡು ಮತ್ತು ಕೇರಳದಲ್ಲಿ ದಾಳಿ ನಡೆಸಲು ಯೋಜನೆ ರೂಪಿಸಿರುವುದು ಗೊತ್ತಾಯಿತು.
ಮೊಹ್ಮದ್ ಅಜರುದ್ದೀನ್ ಜತೆಗೆ ನಂಟು ಹೊಂದಿರುವ ಕೇರಳದ ಯುವಕನಿಗಾಗಿ ಎನ್ ಐಎಯಿಂದ ಶೋಧ ನಡೆಯುತ್ತಿದೆ. ಕೇರಳ ಹಾಗೂ ತಮಿಳುನಾಡಿನಲ್ಲಿ ಆನ್ ಲೈನ್ ಮೂಲಕವೇ ನೇಮಕಾತಿ ನಡೆಸುತ್ತಿದ್ದರು. ದಕ್ಷಿಣ ಭಾರತದಲ್ಲಿ ಇಸ್ಲಾಮಿಕ್ ಸ್ಟೇಟ್ ನ ಚಟುವಟಿಕೆ ನಡೆಸಲು ಸಮಾನ ಮನಸ್ಕರ ಹುಡುಕಾಟದಲ್ಲಿದ್ದರು ಎಂದು ತಿಳಿದುಬಂದಿದೆ.
ಇದಕ್ಕೂ ಮುನ್ನ ಎನ್ ಐಎಯಿಂದ ಪಾಲಕ್ಕಾಡ್ ಮೂಲದ ರಿಯಾಸ್ ಅಬೂಬಕರ್ ನನ್ನು ಬಂಧಿಸಿದರು. ಆತನು ಝಹ್ರಾನ್ ಹಶೀಂನನ್ನು ಅನುಸರಿಸುತ್ತಿದ್ದ. ಆತ್ಮಹತ್ಯಾ ದಾಳಿ ನಡೆಸಲು ಚಿಂತಿಸಿದ್ದ. ರಿಯಾಸ್ ನನ್ನು ಈಗ ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ. ಅಫ್ಘಾನಿಸ್ತಾನ ಹಾಗೂ ಸಿರಿಯಾದಲ್ಲಿ ಐಎಸ್ ಸೇರಲು ತೆರಳಿದ್ದ ಕೇರಳಿಗರಿಂದ ರಿಯಾಸ್ ಸ್ಫೂರ್ತಿ ಪಡೆದಿದ್ದ. ಪವಿತ್ರ ಹುತಾತ್ಮನಾಗಲು ಆತನನ್ನು ಸಿದ್ಧಗೊಳಿಸಲಾಗುತ್ತಿತ್ತು.