ಮೋದಿಯ ದೊಡ್ಡ ಲಾಭವೇನೆಂದರೆ ಅವರು ರಾಹುಲ್ ಗಾಂಧಿ ಅಲ್ಲ: ರಾಮಚಂದ್ರ ಗುಹಾ
ಕೋಯಿಕ್ಕೋಡ್, ಜನವರಿ 18: ಕಠಿಣ ಪರಿಶ್ರಮಿ ಮತ್ತು ಸ್ವಯಂ ರೂಪಿತ ಪ್ರಧಾನಿ ನರೇಂದ್ರ ಮೋದಿ ಎದುರು ಭಾರತದ ವಂಶ ರಾಜಕಾರಣದ ಐದನೇ ತಲೆಮಾರಿನ ರಾಹುಲ್ ಗಾಂಧಿ ಅವರಿಗೆ ಅವಕಾಶವೇ ಇಲ್ಲ. ರಾಹುಲ್ ಗಾಂಧಿ ಅವರನ್ನು ಸಂಸತ್ಗೆ ಆಯ್ಕೆ ಮಾಡುವ ಮೂಲಕ ಕೇರಳ ಘೋರವಾದ ಕೆಲಸ ಮಾಡಿದೆ ಎಂದು ಇತಿಹಾಸಕಾರ ರಾಮಚಂದ್ರ ಗುಹಾ ಹೇಳಿದರು.
ಕೇರಳದ ಕೋಯಿಕ್ಕೋಡ್ನಲ್ಲಿ ಶುಕ್ರವಾರ ಕೇರಳ ಸಾಹಿತ್ಯ ಉತ್ಸವದ ಎರಡನೆಯ ದಿನ 'ದೇಶಪ್ರೇಮ ಮತ್ತು ತೀವ್ರಗಾಮಿ ದೇಶಭಕ್ತಿ' ವಿಷಯದ ಕುರಿತು ಅವರು ಮಾತನಾಡಿದರು.
ಬೆಂಗಳೂರಿನಲ್ಲಿ ಉರಿಯುವ 'ಪೌರತ್ವ'ದ ಬೆಂಕಿಗೆ 'ನಿಷೇಧಾಜ್ಞೆ'ಯ ತುಪ್ಪ
ಸ್ವಾತಂತ್ರ್ಯ ಚಳಿವಳಿಯ ಸಂದರ್ಭದಲ್ಲಿ ಮಹಾನ್ ಪಕ್ಷವಾಗಿದ್ದ ಕಾಂಗ್ರೆಸ್ ಈಗ 'ಶೋಚನೀಯ ಕೌಟುಂಬಿಕ ಸಂಸ್ಥೆ'ಯಾಗಿ ತನ್ನ ಮೌಲ್ಯ ಕಳೆದುಕೊಂಡಿರುವುದು ಇಂದು ಭಾರತದಲ್ಲಿ ಹಿಂದುತ್ವ ಮತ್ತು ಅತಿರೇಕದ ರಾಷ್ಟ್ರಪ್ರೇಮವು ಅಧಿಕಾರಕ್ಕೆ ಬರಲು ಕಾರಣಗಳಲ್ಲಿ ಒಂದು ಎಂದು ಅಭಿಪ್ರಾಯಪಟ್ಟರು.
ಮತ್ತೆ ಆಯ್ಕೆ ಮಾಡಿದರೆ ಮೋದಿಗೆ ಲಾಭ
'ವೈಯಕ್ತಿಕವಾಗಿ ನನಗೆ ರಾಹುಲ್ ಗಾಂಧಿ ಕುರಿತು ಯಾವುದೇ ವಿರೋಧವಿಲ್ಲ. ಅವರೊಬ್ಬ ಸಾತ್ವಿಕ ಮತ್ತು ಉತ್ತಮ ನಡತೆಯ ವ್ಯಕ್ತಿ. ಆದರೆ ಯುವ ಭಾರತವು ವಂಶ ಪಾರಂಪರ್ಯದ ಐದನೇ ತಲೆಮಾರನ್ನು ಬಯಸುತ್ತಿಲ್ಲ. ನೀವು ಮಲೆಯಾಳಿಗಳು 2024ರಲ್ಲಿಯೂ ರಾಹುಲ್ ಗಾಂಧಿಯನ್ನು ಮರು ಆಯ್ಕೆ ಮಾಡುವ ಮೂಲಕ ತಪ್ಪು ಮಾಡಿದರೆ ನೀವು ನರೇಂದ್ರ ಮೋದಿ ಅವರಿಗೆ ಲಾಭ ಕೊಟ್ಟಂತೆ ಆಗಲಿದೆ' ಎಂದರು.
ಮೋದಿಯ ಅನುಕೂಲವೆಂದರೆ ಅವರು ರಾಹುಲ್ ಅಲ್ಲ
'ನರೇಂದ್ರ ಮೋದಿ ಅವರ ದೊಡ್ಡ ಅನುಕೂಲವೆಂದರೆ ಅವರು ರಾಹುಲ್ ಗಾಂಧಿ ಅಲ್ಲ. ಅವರು ಸ್ವಯಂ ವರ್ಚಸ್ಸು ರೂಪಿಸಿಕೊಂಡವರು. ಅವರು ಒಂದು ರಾಜ್ಯವನ್ನು 15 ವರ್ಷ ಆಳಿದ್ದಾರೆ. ಅವರಿಗೆ ಆಡಳಿತಾತ್ಮಕ ಅನುಭವವಿದೆ. ಅವರು ಅಸಾಧ್ಯ ಕಠಿಣ ಪರಿಶ್ರಮಿ. ಅವರು ರಜೆ ಪಡೆದು ಯುರೋಪ್ಗೆ ಹೋಗುವುದಿಲ್ಲ. ನನ್ನನ್ನು ನಂಬಿ. ಇದೆಲ್ಲವನ್ನೂ ನಾನು ಬಹಳ ಗಂಭೀರವಾಗಿಯೇ ಹೇಳುತ್ತಿದ್ದೇನೆ' ಎಂದರು.
ಭಾರತ ರತ್ನಕ್ಕೆ ಪ್ರಣಬ್ ಗಿಂತ ಸ್ವಾಮಿನಾಥನ್ ಹೆಚ್ಚು ಅರ್ಹ : ಗುಹಾ ವಿವಾದ
ಬುದ್ಧಿವಂತರಾಗಿದ್ದರೂ ಬೆಳೆಯುತ್ತಿರಲಿಲ್ಲ
'ರಾಹುಲ್ ಗಾಂಧಿ ಕೂಡ ಹೆಚ್ಚು ಬುದ್ಧಿವಂತರಾಗಿದ್ದರೆ, ಹೆಚ್ಚು ಕಠಿಣ ಪರಿಶ್ರಮಿಯಾಗಿದ್ದರೆ, ರಜೆ ಕಳೆಯಲು ಯುರೋಪ್ಗೆ ಹೋಗದೆ ಇರುತ್ತಿದ್ದರೂ ವಂಶ ರಾಜಕಾರಣದ ಐದನೇ ತಲೆಮಾರಿನವರಾಗಿರುವುದರಿಂದ ಅವರು ಸ್ವಯಂ ವರ್ಚಸ್ಸಿನ ವ್ಯಕ್ತಿಯಾಗಿ ರೂಪಗೊಳ್ಳುವುದು ಸಾಧ್ಯವಾಗುತ್ತಿರಲಿಲ್ಲ' ಎಂದು ಹೇಳಿದರು.
'ಕೇರಳಿಗರಾದ ನೀವು ಭಾರತಕ್ಕಾಗಿ ಅನೇಕ ಅದ್ಭುತ ಕೆಲಸಗಳನ್ನು ಮಾಡಿದ್ದೀರಿ. ಆದರೆ ರಾಹುಲ್ ಗಾಂಧಿ ಅವರನ್ನು ಸಂಸತ್ಗೆ ಆಯ್ಕೆ ಮಾಡಿರುವುದು ನೀವು ಮಾಡಿದ ಹಾನಿಕಾರಕ ಕೆಲಸಗಳಲ್ಲಿ ಒಂದು' ಎಂದರು.
2019ರ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಉತ್ತರ ಪ್ರದೇಶದ ಅಮೇಥಿ ಮತ್ತು ಕೇರಳದ ವಯನಾಡು ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಅಮೇಥಿಯಲ್ಲಿ ಸೋಲು ಅನುಭವಿಸಿದ್ದರೆ, ವಯನಾಡಿನಲ್ಲಿ ಜಯಗಳಿಸಿದ್ದರು.
ಈಗಲೂ ಬಾದ್ಶಾ ಎಂದು ನಂಬಿದ್ದೀರಿ
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧವೂ ರಾಮಚಂದ್ರ ಗುಹಾ ವಾಗ್ದಾಳಿ ನಡೆಸಿದರು. ಈ ಕುಟುಂಬವು ಹಿಂದಿನ ಮೊಘಲ್ ವಂಶವನ್ನು ನೆನಪಿಸುತ್ತದೆ ಎಂದು ಟೀಕಿಸಿದರು.
'ಭಾರತವು ಹೆಚ್ಚು ಪ್ರಜಾಸತ್ತಾತ್ಮಕವಾಗುತ್ತಿದ್ದು, ಊಳಿಗಮಾನ್ಯ ವ್ಯವಸ್ಥೆ ತಗ್ಗುತ್ತಿದೆ. ಆದರೆ ಇದನ್ನು ಗಾಂಧಿಗಳು ಅರ್ಥಮಾಡಿಕೊಳ್ಳುತ್ತಿಲ್ಲ. ನೀವು (ಸೋನಿಯಾ) ದೆಹಲಿಯಲ್ಲಿದ್ದೀರಿ. ನಿಮ್ಮ ಸಾಮ್ರಾಜ್ಯ ಮತ್ತಷ್ಟು, ಇನ್ನಷ್ಟು ಮುಳುಗುತ್ತಿದೆ. ಆದರೆ ನಿಮ್ಮ ಚಮಚಾಗಳು ಈಗಲೂ ನೀವೇ ಬಾದ್ಶಾಗಳಾಗಿದ್ದೀರಿ ಎಂದು ನಿಮ್ಮನ್ನು ಹೊಗಳುತ್ತಲೇ ಇದ್ದಾರೆ' ಎಂದು ವ್ಯಂಗ್ಯವಾಡಿದರು.
ಎಲ್ಲದಕ್ಕೂ ನೆಹರೂ ಏಕೆ?
ನೆಹರು-ಗಾಂಧಿಯ ಕುಟುಂಬವು ಪ್ರಸಿದ್ಧ ಬೈಬಲ್ನ ಉಲ್ಲೇಖಗಳನ್ನು ತಲೆಕೆಳಗೆ ಮಾಡಿದಂತೆ. ತಂದೆಯ ಪಾಪಗಳು ಸತತ ಏಳು ತಲೆಮಾರಿಗೂ ವ್ಯಾಪಿಸುತ್ತದೆ ಎಂಬ ತಮ್ಮ ಶಿಕ್ಷಕರಾದ ಆಂಡ್ರೆ ಬೆಟೀಲ್ಲೆ ಹೇಳುತ್ತಿದ್ದ ಕಥೆಯನ್ನು ಅನ್ವಯಿಸಿದರು.
'ನೆಹರೂ ವಿಚಾರದಲ್ಲಿ ಸತತ ಏಳು ತಲೆಮಾರುಗಳು ಮಾಡಿದ ಪಾಪಗಳು ನೆಹರೂ ಅವರಿಗೆ ತಟ್ಟಿದೆ. ಇಂದು ನಡೆಯುತ್ತಿರುವ ರಾಷ್ಟ್ರೀಯ ಚರ್ಚೆಗಳನ್ನು ಮಾಡಿ. ಪ್ರತಿಬಾರಿಯೂ ನೆಹರೂ ಅವರನ್ನು ಏಕೆ ಎಳೆದು ತರಲಾಗುತ್ತಿದೆ? ಪ್ರತಿ ಬಾರಿಯೂ ಮೋದಿ ಅವರು, ಕಾಶ್ಮೀರದಲ್ಲಿ ನೆಹರು ಇದನ್ನು ಮಾಡಿದರು, ಚೀನಾದಲ್ಲಿ ಅದನ್ನು ಮಾಡಿದರು, ತ್ರಿವಳಿ ತಲಾಕ್ನಲ್ಲಿ ಹೀಗೆ ಮಾಡಿದರು ಎಂದು ಏಕೆ ಹೇಳುತ್ತಾರೆ? ಏಕೆಂದರೆ ಅಲ್ಲಿ ರಾಹುಲ್ ಗಾಂಧಿ ಇದ್ದಾರೆ. ಈಗ ರಾಹುಲ್ ಗಾಂಧಿ ಅಲ್ಲಿಂದ ಕಣ್ಮರೆಯಾದರೆ ಮೋದಿ ತಮ್ಮದೇ ನೀತಿಗಳ ಬಗ್ಗೆ ಮಾತನಾಡುತ್ತಾರೆ, ಅವು ಏಕೆ ವಿಫಲವಾದವು ಎಂದು ಹೇಳುತ್ತಾರೆ' ಎಂದು ಮೋದಿ ಅವರನ್ನು ಪರೋಕ್ಷವಾಗಿ ಟೀಕಿಸಿದರು.
ಗುಹಾ ಬೀಫ್ ಟ್ವೀಟ್ ಡಿಲೀಟ್ ಮಾಡಿದ್ದು ಮತ್ತಷ್ಟು ಚರ್ಚೆಗೆ ಗ್ರಾಸ
ಎಡಪಕ್ಷಗಳು ಬೇರೆ ದೇಶಗಳನ್ನು ಪ್ರೀತಿಸುತ್ತವೆ
'ಬೂಟಾಟಿಕೆಯು ಭಾರತದ ಎಡಪಕ್ಷಗಳಲ್ಲಿ ತುಂಬಿಕೊಂಡಿದೆ. ಅವರು ಭಾರತಕ್ಕಿಂತಲೂ ಬೇರೆ ದೇಶಗಳನ್ನು ಪ್ರೀತಿಸುತ್ತಾರೆ ಎನ್ನುವುದು ಸತ್ಯ. ಜಗತ್ತಿನಾದ್ಯಂತ ಆಕ್ರಮಣಕಾರಿ ರಾಷ್ಟ್ರೀಯತೆ ಬೆಳೆದಿರುವುದು ಮತ್ತು ನೆರೆಯ ದೇಶಗಳಲ್ಲಿ ಮುಸ್ಲಿಂ ಮೂಲಭೂತವಾದ ತಲೆ ಎತ್ತಿರುವುದು ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಹಿಂದುತ್ವದ ಸಂಗತಿ ಏಕಾಏಕಿ ಬೆಳೆಯಲು ಕಾರಣಗಳಲ್ಲಿ ಸೇರಿವೆ' ಎಂದರು.