ಕೇರಳ ಚುನಾವಣೆ; ವರ್ಷಕ್ಕೆ 6 ಉಚಿತ ಸಿಲಿಂಡರ್ ಭರವಸೆ ನೀಡಿದ ಬಿಜೆಪಿ
ತಿರುವನಂತಪುರಂ, ಮಾರ್ಚ್ 24: ಕೇರಳ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ತಿರುವನಂತಪುರಂನಲ್ಲಿ ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಹಲವು ಭರವಸೆಗಳನ್ನು ಜನರ ಮುಂದಿಟ್ಟಿದೆ. ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಹಲವು ಪ್ರಮುಖ ಘೋಷಣೆಗಳನ್ನು ಮಾಡಿದ್ದಾರೆ.
"ಮೋದಿ ಜೊತೆ ಹೊಸ ಕೇರಳ" ಎಂಬ ಘೋಷಣೆಯೊಂದಿಗೆ ಜಾವಡೇಕರ್ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಶಬರಿಮಲೆ ಆಚರಣೆಯನ್ನು ರಕ್ಷಿಸುವ ಭರವಸೆ ನೀಡಿದ್ದು, ಎನ್ಡಿಎ ಸರ್ಕಾರ ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನು ತರಲಿದೆ ಎಂದು ಹೇಳಿದ್ದಾರೆ. ಜೊತೆಗೆ ಕಲ್ಯಾಣ ಪಿಂಚಿಣಿಯನ್ನು 3,500 ರೂಗೆ ಏರಿಸುವುದಾಗಿ ತಿಳಿಸಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೇರಳದಲ್ಲಿ "ನ್ಯಾಯ್" ಯೋಜನೆ ಶುರು; ರಾಹುಲ್
ಬಿಪಿಎಲ್ ಕುಟುಂಬಕ್ಕೆ ವರ್ಷಕ್ಕೆ ಆರು ಗ್ಯಾಸ್ ಸಿಲಿಂಡರ್ಗಳನ್ನು ಉಚಿತವಾಗಿ ನೀಡಲಾಗುತ್ತದೆ. ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್, ಕುಟುಂಬದ ಒಬ್ಬರಿಗೆ ಉದ್ಯೋಗ ಭರವಸೆ ನೀಡಲಾಗುವುದು ಎಂದಿದ್ದಾರೆ. ಕುಟುಂಬಕ್ಕೆ ಆದಾಯವಾಗಿದ್ದವರು ಅನಾರೋಗ್ಯಕ್ಕೆ ತುತ್ತಾದರೆ ಅಂಥ ಕುಟುಂಬಕ್ಕೆ 5000 ರೂ ನೀಡಲಾಗುತ್ತದೆ ಎಂದು ಉಲ್ಲೇಖಿಸಲಾಗಿದೆ. ಪ್ರಣಾಳಿಕೆಯಲ್ಲಿ ಮುಖ್ಯವಾಗಿ ಭೂಮಿ ಇರದ ಪರಿಶಿಷ್ಟ ಜಾತಿ, ಪಂಗಡದ ಕುಟುಂಬಗಳಿಗೆ ಭೂಮಿ ನೀಡುವ ಭರವಸೆ ನೀಡಲಾಗಿದೆ.
"ಕೇರಳ ಅಭಿವೃದ್ಧಿಯನ್ನು ಎನ್ಡಿಎ ಗುರಿಯಾಗಿಸಿಕೊಂಡಿದೆ. ಐದು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಪಿಣರಾಯಿ ಸರ್ಕಾರ ಕೇಂದ್ರದ ಯೋಜನೆಗಳನ್ನೇ ಮರುನಾಮಕರಣ ಮಾಡಿ ಕೇರಳದಲ್ಲಿ ಅಳವಡಿಸಿಕೊಳ್ಳುವುದಾಗಿ ತಿಳಿಸುತ್ತಿದೆ" ಎಂದು ಜಾವಡೇಕರ್ ಆಡಳಿತ ಸರ್ಕಾರಕ್ಕೆ ತಿರುಗೇಟು ನೀಡಿದ್ದಾರೆ.
ಕೇರಳದಲ್ಲಿ ಏಪ್ರಿಲ್ 6ರಂದು ಚುನಾವಣೆ ನಡೆಯಲಿದ್ದು, ಮೇ 2ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.