ಪಿಟೀಲುವಾದಕ ಬಾಲಭಾಸ್ಕರ್ ಸಾವು ಕೇಸ್: ಆರೋಪಿಗಳಿಗೆ ಪಾಲಿಗ್ರಾಫ್ ಟೆಸ್ಟ್
ತಿರುವನಂತಪುರಂ, ಸೆ. 18: ಒಂದು ವಾರ ಜೀವನ್ಮರಣ ಹೋರಾಟ ನಡೆಸಿ ಮೃತಪಟ್ಟಿದ್ದ ಗಾಯಕ, ಪಿಟೀಲುವಾದಕ, ಸಂಗೀತಗಾರ ಬಾಲಭಾಸ್ಕರ್(40) ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐ ಚುರುಕುಗೊಳಿಸಿದೆ. ನಾಲ್ವರು ಆರೋಪಿಗಳಿಗೆ ಪಾಲಿಗ್ರಾಪ್(ಸುಳ್ಳು ಪತ್ತೆ) ಪರೀಕ್ಷೆ ನಡೆಸಲು ಅನುಮತಿ ಕೋರಿ ಸಿಬಿಐ ಸಲ್ಲಿಸಿದ್ದ ಅರ್ಜಿಗೆ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಿಂದ ಒಪ್ಪಿಗೆ ಸಿಕ್ಕಿದೆ.
2018ರ ಈ ಅಪಘಾತ ಪ್ರಕರಣದ ಬಗ್ಗೆ ಅನೇಕ ಸಂಶಯಗಳು ಕೇಳಿ ಬಂದಿತ್ತು. ಅಭಿಮಾನಿಗಳು ಹಲವು ಸಂಘಟನೆಗಳು ಈ ಪ್ರಕರಣದ ತನಿಖೆಯನ್ನು ಕೇಂದ್ರ ತನಿಖಾ ತಂಡಕ್ಕೆ ವಹಿಸುವಂತೆ ಕೇರಳ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಅದರಂತೆ, ಈ ಪ್ರಕರಣವನ್ನು ಸಿಬಿಐಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ವಹಿಸಿದ್ದರು.
ಬಾಲಭಾಸ್ಕರ್ ಅಕಾಲಿಕ ನಿಧನಕ್ಕೆ ಕಂಬನಿ ಮಿಡಿದ ಸಂಗೀತ ಪ್ರೇಮಿಗಳು
ಸೆಪ್ಟೆಂಬರ್ 25, 2018ರಂದು ತಿರುವನಂತಪುರಂ ಹೆದ್ದಾರಿಯ ಪಕ್ಕದಲ್ಲಿದ್ದ ಮರವೊಂದಕ್ಕೆ ಬಾಲಭಾಸ್ಕರ್ ಅವರ ಕುಟುಂಬವಿದ್ದ ಕಾರು ಅಪ್ಪಳಿಸಿತ್ತು. ಈ ದುರ್ಘಟನೆಯಲ್ಲಿ ಬಾಲಭಾಸ್ಕರ್, ಬಾಲಭಾಸ್ಕರ್ ಅವರ ಪತ್ನಿ ಲಕ್ಷ್ಮಿ, ಕಾರು ಚಾಲಕ ಅರ್ಜುನ್ ಅವರಿಗೆ ತೀವ್ರ ಗಾಯಗಳಾಗಿತ್ತು. ದಂಪತಿಯ ಎರಡು ವರ್ಷ ವಯಸ್ಸಿನ ಮಗು ತೇಜಸ್ವಿನಿ ಮೃತಪಟ್ಟಿದ್ದಳು.
ಅಪಾರ ಅಭಿಮಾನಿಗಳನ್ನು ಹೊಂದಿರುವ ಬಾಲಭಾಸ್ಕರ್
ಸಿಕೆ ಉನ್ನಿ ಹಾಗೂ ಶಾಂತಕುಮಾರಿ ಅವರ ಪುತ್ರನಾಗಿ ಜನಿಸಿದ ಬಾಲಭಾಸ್ಕರ್ ಅವರು ತಮ್ಮ ಬಹುಕಾಲದ ಗೆಳತಿ ಲಕ್ಷ್ಮಿಯನ್ನು 2000ರಲ್ಲಿ ಮದುವೆಯಾಗಿದ್ದರು. ದೀರ್ಘಕಾಲದ ನಂತರ 2016ರಲ್ಲಿ ಹೆಣ್ಣು ಮಗು ಜನಿಸಿತ್ತು. ಆದರೆ, ಸೆಪ್ಟೆಂಬರ್ 25, 2018ರ ದುರಂತದಲ್ಲಿ ಅಪ್ಪ-ಮಗಳು ಮೃತರಾಗಿದ್ದು, ಲಕ್ಷ್ಮಿ ಸೇರಿದಂತೆ ಕುಟುಂಬವರ್ಗ, ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಬಾಲಭಾಸ್ಕರ್ ಸ್ನೇಹಿತರಾದ ಪ್ರಕಾಶಂ ತಂಬಿ, ವಿಷ್ಣು ಸೋಮಸುಂದರಂ, ಚಾಲಕ ಅರ್ಜುನ್, ಕಲಾಭವನ್ ಸೋಬಿ ಅವರ ಪಾಲಿಗ್ರಾಫ್ ಟೆಸ್ಟ್ ನಡೆಸಲು ಅನುಮತಿ ಸಿಕ್ಕಿದೆ. ಜನಪ್ರಿಯ ಸಂಗೀತಗಾರ ಸ್ಟೀಫನ್ ದೆವಸ್ಸಿ ಅವರನ್ನು ವಿಚಾರಣೆ ನಡೆಸಲು ಸಿಬಿಐ ಸಮನ್ಸ್ ಕಳಿಸಿದೆ.
ತ್ರಿಸ್ಸೂರ್ ದೇಗುಲದಿಂದ ಹಿಂತಿರುಗುವಾಗ ನಡೆದ ಅಪಘಾತ
ಬಾಲಭಾಸ್ಕರ್ ಅವರು ತ್ರಿಸ್ಸೂರ್ ದೇಗುಲಕ್ಕೆ ಭೇಟಿ ನೀಡಿ, ವಾಪಸ್ ಬರುವಾಗ ಕಾರು ಅಪಘಾತಕ್ಕೀಡಾಗಿತ್ತು. ಮುಂಜಾನೆ ನಿದ್ರೆ ರಹಿತ ಪಯಣದಿಂದ ಚಾಲಕನ ನಿಯಂತ್ರಣ ತಪ್ಪಿ ಈ ಅನಾಹುತ ಸಂಭವಿಸಿರುವ ಸಾಧ್ಯತೆಯಿದೆ ಎಂದು ಮಂಗಳಾಪುರಂ ಪೊಲೀಸರು ಹೇಳಿದ್ದರು. ಆದರೆ, ಪ್ರಕರಣ ಅನೇಕ ತಿರುವು ಪಡೆದು ಸಿಬಿಐ ತನಿಖೆಗೆ ಬಂದು ನಿಂತಿದೆ.
12 ವರ್ಷ ವಯಸ್ಸಿನಿಂದಲೇ ಸಂಗೀತ ಕ್ಷೇತ್ರದಲ್ಲಿ ಮಿಂಚಿದ್ದ ಬಾಲ ಭಾಸ್ಕರ್ ಅವರು, ಮಾಂಗಲ್ಯ ಪಲ್ಲಕ್ಕು ಎಂಬ ಮಲಯಾಳಂ ಸಿನಿಮಾಕ್ಕೆ ತಮ್ಮ 17ನೇ ವಯಸ್ಸಿನಲ್ಲೆ ಸಂಗೀತ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದರು. ಬಾಲಭಾಸ್ಕರ್ ಅವರ ಫ್ಯೂಷನ್ ಸಂಗೀತಕ್ಕೆ ಸಾಕಷ್ಟು ಅಭಿಮಾನಿಗಳು ಹುಟ್ಟುಕೊಂಡಿದ್ದರು.
ಬಾಲಪ್ರತಿಭೆಯಾಗಿ ಬೆಳಕಿಗೆ ಬಂದವರು
17ನೇ ವಯಸ್ಸಿಗೆ ಸ್ವತಂತ್ರವಾಗಿ ಸಿನಿಮಾವೊಂದಕ್ಕೆ ಸಂಗೀತ ನಿರ್ದೇಶನ ಮಾಡಿದ ಬಾಲಭಾಸ್ಕರ್ ಅವರು ಬಾಲಪ್ರತಿಭೆಯಾಗಿ ಬೆಳಕಿಗೆ ಬಂದವರು. ಡಾ. ಕೆ.ಜೆ ಯೇಸುದಾಸ್, ಹರಿಹರನ್, ಸುರೇಶ್ ವಾಡ್ಕರ್, ಕೆಎಸ್ ಚಿತ್ರಾ, ಸುಜಾತಾ, ಶ್ರೀನಿವಾಸ್, ಕಾರ್ತಿಕ್, ವಿಜಯ್ ಪ್ರಕಾಶ್ ಸೇರಿದಂತೆ ಹತ್ತು ಹಲವು ಸಂಗೀತ ದಿಗ್ಗಜರು, ಸಂಗೀತಗಾರರ ಜತೆ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದರು.
ಕೊಡಗು ಸಂತ್ರಸ್ತರ ನೆರವಿಗೆ ಸ್ಪಂದಿಸಿದ್ದರು
ಬಾಲಭಾಸ್ಕರ್ ಕೊಡಗು ಸಂತ್ರಸ್ತರ ನೆರವಿಗೆ ಸ್ಪಂದಿಸಿದ್ದರು ಜಲ ಪ್ರಳಯದಿಂದ ತತ್ತರಿಸಿರುವ ಕೇರಳ ಕೊಡಗು ಸಂತ್ರಸ್ತರ ನೆರವಿಗೆ ಸ್ಪಂದಿಸಿದ್ದ ಬಾಲಭಾಸ್ಕರ್ ಅವರು ವಿವಿಧೆಡೆ ಸಂಗೀತ ಕಾರ್ಯಕ್ರಮ ಆಯೋಜನೆಗೆ ಮುಂದಾಗಿದ್ದರು. ವಿಸ್ಮಯಂ ಎಂಬ ಹೆಸರಿನಲ್ಲಿ ಮ್ಯೂಸಿಕ್ ಫ್ಯೂಷನ್ ಕಾರ್ಯಕ್ರಮವನ್ನು ವಿಕೆ ಕನ್ವೆಂನ್ಷನ್ ಹಾಲ್ ನಲ್ಲಿ ಆಯೋಜಿಸಲಾಗಿತ್ತು. ಸಂತ್ರಸ್ತ ನೆರವಿಗಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದರು.
ಉನ್ನತ ಪ್ರಶಸ್ತಿ ಪುರಸ್ಕಾರಗಳು ಲಭಿಸಿತ್ತು
ಬಾಲ ಪ್ರತಿಭೆ ಬಾಲಭಾಸ್ಕರ್ ಅವರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿಯಿಂದ ಪಿಟೀಲು ವಾದನಕ್ಕಾಗಿ ಬಿಸ್ಮಿಲ್ಲಾ ಖಾನ್ ಯುವ ಸಂಗೀತಗಾರ ಪುರಸ್ಕಾರ ಲಭಿಸಿತ್ತು. ಗಾಯಕ, ಪೀಟಲು ವಾದಕ, ಸಂಗೀತ ಸಂಯೋಜಕರಾಗಿ ಫ್ಯೂಷನ್ ಸಂಗೀತವನ್ನು ಹೆಚ್ಚೆಚ್ಚು ಜನಪ್ರಿಯಗೊಳಿಸಲು ಮನಸ್ಸು ಮಾಡಿದರು. ಅನೇಕ ಕೀರ್ತನೆಗಳು, ಸಂಸ್ಕೃತ ಭಾಷಾ ಪ್ರಚಾರ, ರಾಕ್, ಜಾಜ್, ಹಿಪ್ ಹಾಪ್ ಸಂಗೀತ ಹೀಗೆ ವೈವಿಧ್ಯಮಯ ಆಲ್ಬಂಗಳನ್ನು ಹೊರತಂದಿದ್ದರು.