ಬಾಲಭಾಸ್ಕರ್ ಅಕಾಲಿಕ ನಿಧನಕ್ಕೆ ಕಂಬನಿ ಮಿಡಿದ ಸಂಗೀತ ಪ್ರೇಮಿಗಳು
ತಿರುವನಂತಪುರಂ, ಅಕ್ಟೋಬರ್ 02: ಅಪಘಾತದಲ್ಲಿ ಗಾಯಗೊಂಡಿದ್ದ ಸಂಗೀತಗಾರ ಬಾಲಭಾಸ್ಕರ್ ಇನ್ನಿಲ್ಲ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಚಿತ್ರರಂಗದ ಗಣ್ಯರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಜಲ ಪ್ರಳಯದಿಂದ ತತ್ತರಿಸಿರುವ ಕೇರಳ ಹಾಗೂ ಕೊಡಗು ಸಂತ್ರಸ್ತರಿಗೆ ನೆರವಾಗಲು ಮುಂದಾಗಿದ್ದ ಬಾಲಭಾಸ್ಕರ್ ಇನ್ನು ನೆನಪು ಮಾತ್ರ
ಸತತ 7 ದಿನಗಳ ಜೀವನ್ಮರಣ ಹೋರಾಟ ನಡೆಸಿದ್ದ ಗಾಯಕ, ಪಿಟೀಲುವಾದಕ, ಸಂಗೀತಗಾರ ಬಾಲಭಾಸ್ಕರ್(40) ಅವರು ಸೋಮವಾರ ತಡರಾತ್ರಿ 1 ಗಂಟೆ ವೇಳೆಗೆ ಕೊನೆಯುಸಿರೆಳೆದಿದ್ದಾರೆ.
ಅಪಘಾತದಲ್ಲಿ ಗಾಯಗೊಂಡಿದ್ದ ಸಂಗೀತಗಾರ ಬಾಲಭಾಸ್ಕರ್ ಇನ್ನಿಲ್ಲ
ಬಾಲಭಾಸ್ಕರ್ ನಿಧನಕ್ಕೆ ಮಲಯಾಳಂ ಚಿತ್ರರಂಗದ ದಿಗ್ಗಜ ಮೋಹನ್ ಲಾಲ್, ಸಂಗೀತ ದಿಗ್ಗಜ ಶಂಕರ್ ಮಹಾದೇವನ್ ಸೇರಿದಂತೆ ಹಲವಾರು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಕಳೆದ ಮಂಗಳವಾರ(ಸೆಪ್ಟೆಂಬರ್ 25) ಮುಂಜಾನೆ ತಿರುವನಂತಪುರಂ ಹೆದ್ದಾರಿಯ ಪಕ್ಕದಲ್ಲಿದ್ದ ಮರವೊಂದಕ್ಕೆ ಬಾಲಭಾಸ್ಕರ್ ಅವರ ಕುಟುಂಬವಿದ್ದ ಕಾರು ಅಪ್ಪಳಿಸಿತ್ತು. ಈ ದುರ್ಘಟನೆಯಲ್ಲಿ ಬಾಲಭಾಸ್ಕರ್, ಬಾಲಭಾಸ್ಕರ್ ಅವರ ಪತ್ನಿ ಲಕ್ಷ್ಮಿ, ಕಾರು ಚಾಲಕ ಅರ್ಜುನ್ ಅವರಿಗೆ ತೀವ್ರ ಗಾಯಗಳಾಗಿತ್ತು. ದಂಪತಿಯ ಎರಡು ವರ್ಷ ವಯಸ್ಸಿನ ಮಗು ತೇಜಸ್ವಿನಿ ಮೃತಪಟ್ಟಿದ್ದಳು.
ಬಾಲಪ್ರತಿಭೆ ಬಾಲಭಾಸ್ಕರ್
17ನೇ ವಯಸ್ಸಿಗೆ ಸ್ವತಂತ್ರವಾಗಿ ಸಿನಿಮಾವೊಂದಕ್ಕೆ ಸಂಗೀತ ನಿರ್ದೇಶನ ಮಾಡಿದ ಬಾಲಭಾಸ್ಕರ್ ಅವರು ಬಾಲಪ್ರತಿಭೆಯಾಗಿ ಬೆಳಕಿಗೆ ಬಂದವರು. ಡಾ. ಕೆ.ಜೆ ಯೇಸುದಾಸ್, ಹರಿಹರನ್, ಸುರೇಶ್ ವಾಡ್ಕರ್, ಕೆಎಸ್ ಚಿತ್ರಾ, ಸುಜಾತಾ, ಶ್ರೀನಿವಾಸ್, ಕಾರ್ತಿಕ್, ವಿಜಯ್ ಪ್ರಕಾಶ್ ಸೇರಿದಂತೆ ಹತ್ತು ಹಲವು ಸಂಗೀತ ದಿಗ್ಗಜರು, ಸಂಗೀತಗಾರರ ಜತೆ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದರು.
ಕೇರಳ ಕೊಡಗು ಸಂತ್ರಸ್ತರ ನೆರವಿಗೆ ಮಿಡಿದಿದ್ದರು
ಜಲ ಪ್ರಳಯದಿಂದ ತತ್ತರಿಸಿರುವ ಕೇರಳ ಕೊಡಗು ಸಂತ್ರಸ್ತರ ನೆರವಿಗೆ ಸ್ಪಂದಿಸಿದ್ದ ಬಾಲಭಾಸ್ಕರ್ ಅವರು ವಿವಿಧೆಡೆ ಸಂಗೀತ ಕಾರ್ಯಕ್ರಮ ಆಯೋಜನೆಗೆ ಮುಂದಾಗಿದ್ದರು. ಅಕ್ಟೋಬರ್ 7ರಂದು ವಿಸ್ಮಯಂ ಎಂಬ ಹೆಸರಿನಲ್ಲಿ ಮ್ಯೂಸಿಕ್ ಫ್ಯೂಷನ್ ಕಾರಕ್ರಮವನ್ನು ವಿಕೆ ಕನ್ವೆಂನ್ಷನ್ ಹಾಲ್ ನಲ್ಲಿ ಆಯೋಜಿಸಲಾಗಿದೆ. ಸಂತ್ರಸ್ತ ನೆರವಿಗಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದರು.
ಬಾಲಭಾಸ್ಕರ್ ಅವರ ಫ್ಯೂಷನ್ ಸಂಗೀತ
ಬಾಲ ಪ್ರತಿಭೆ ಬಾಲಭಾಸ್ಕರ್ ಅವರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿಯಿಂದ ಪಿಟೀಲು ವಾದನಕ್ಕಾಗಿ ಬಿಸ್ಮಿಲ್ಲಾ ಖಾನ್ ಯುವ ಸಂಗೀತಗಾರ ಪುರಸ್ಕಾರ ಲಭಿಸಿತ್ತು.
ಗಾಯಕ, ಪೀಟಲು ವಾದಕ, ಸಂಗೀತ ಸಂಯೋಜಕರಾಗಿ ಫ್ಯೂಷನ್ ಸಂಗೀತವನ್ನು ಹೆಚ್ಚೆಚ್ಚು ಜನಪ್ರಿಯಗೊಳಿಸಲು ಮನಸ್ಸು ಮಾಡಿದರು.
ಅನೇಕ ಕೀರ್ತನೆಗಳು, ಸಂಸ್ಕೃತ ಭಾಷಾ ಪ್ರಚಾರ, ರಾಕ್, ಜಾಜ್, ಹಿಪ್ ಹಾಪ್ ಸಂಗೀತ ಹೀಗೆ ವೈವಿಧ್ಯಮಯ ಆಲ್ಬಂಗಳನ್ನು ಹೊರತಂದಿದ್ದರು.
|
ಚಿತ್ರರಂಗದ ಗಣ್ಯರಿಂದ ಕಂಬನಿ
ಮಲೆಯಾಳಂ ಚಿತ್ರರಂಗದ ದಿಗ್ಗಜ ಮೋಹನ್ ಲಾಲ್ ಸೇರಿದಂತೆ ಅನೇಕ ಗಣ್ಯಾತಿಗಣ್ಯರು ಬಾಲಭಾಸ್ಕರ್ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಶಂಕರ್ ಮಹಾದೇವನ್ ಅವರು ಟ್ವೀಟ್ ಮಾಡಿ ಈ ಸುದ್ದಿ ಆಘಾತಕಾರಿ ಎಂದಿದ್ದಾರೆ. ಅನೇಕ ಅಭಿಮಾನಿಗಳು, ಬಾಲಭಾಸ್ಕರ್ ಅವರ ಸಂಗೀತ ಕಾರ್ಯಕ್ರಮವನ್ನು ಮೆಲುಕು ಹಾಕಿದ್ದಾರೆ.
ದುರಂತ ಅಂತ್ಯ ಕಂಡ ಅಪ್ಪ-ಮಗಳು
ಸಿಕೆ ಉನ್ನಿ ಹಾಗೂ ಶಾಂತಕುಮಾರಿ ಅವರ ಪುತ್ರನಾಗಿ ಜನಿಸಿದ ಬಾಲಭಾಸ್ಕರ್ ಅವರು ತಮ್ಮ ಬಹುಕಾಲದ ಗೆಳತಿ ಲಕ್ಷ್ಮಿಯನ್ನು 2000ರಲ್ಲಿ ಮದುವೆಯಾಗಿದ್ದರು. ದೀರ್ಘಕಾಲದ ನಂತರ 2016ರಲ್ಲಿ ಹೆಣ್ಣು ಮಗು ಜನಿಸಿತ್ತು. ಆದರೆ, ಸೆಪ್ಟೆಂಬರ್ 25, 2018ರ ದುರಂತದಲ್ಲಿ ಅಪ್ಪ-ಮಗಳು ಮೃತರಾಗಿದ್ದು, ಲಕ್ಷ್ಮಿ ಸೇರಿದಂತೆ ಕುಟುಂಬವರ್ಗ, ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಬಾಲಭಾಸ್ಕರ್ ಅವರು ತ್ರಿಸ್ಸೂರ್ ದೇಗುಲಕ್ಕೆ ಭೇಟಿ ನೀಡಿ, ವಾಪಸ್ ಬರುವಾಗ ಈ ದುರ್ಘಟನೆ ನಡೆದಿತ್ತು. ಮುಂಜಾನೆ ನಿದ್ರೆ ರಹಿತ ಪಯಣದಿಂದ ಚಾಲಕನ ನಿಯಂತ್ರಣ ತಪ್ಪಿ ಈ ಅನಾಹುತ ಸಂಭವಿಸಿರುವ ಸಾಧ್ಯತೆಯಿದೆ ಎಂದು ಮಂಗಳಾಪುರಂ ಪೊಲೀಸರು ಹೇಳಿದ್ದಾರೆ.