ಭಾರಿ ಮಳೆ ಎಚ್ಚರಿಕೆ: ಕೇರಳದಲ್ಲಿ ನಿಗದಿಗೂ ಮೊದಲೇ ಮಾನ್ಸೂನ್ ಶುರು
ನವದೆಹಲಿ, ಮೇ 27: ಕೇರಳ ಮತ್ತು ಕರಾವಳಿ ಪ್ರದೇಶದಲ್ಲಿ ಮಾನ್ಸೂನ್ ಮಳೆಯು ನಿಗದಿಗಿಂತ ಮೊದಲೇ ಪ್ರಾರಂಭವಾಗುವ ಲಕ್ಷಣಗಳು ಹೆಚ್ಚಾಗಿ ಗೋಚರಿಸುತ್ತಿವೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಾಲ್ಡೀವ್ಸ್-ಕೊಮೊರಿನ್ ಪ್ರದೇಶದ ಕೆಲವು ಭಾಗಗಳಲ್ಲಿ ಮಾನ್ಸೂನ್ ಈಗಾಗಲೇ ಪ್ರವೇಶಿಸಿದೆ. ಪಶ್ಚಿಮ ಬಂಗಾಳದ ನೈಋತ್ಯ ಮತ್ತು ಪೂರ್ವ ಕೇಂದ್ರ, ಆಗ್ನೇಯ ಕೊಲ್ಲಿಯ ಹೆಚ್ಚಿನ ಭಾಗ ಹಾಗೂ ಪಶ್ಚಿಮ ಕೇಂದ್ರ ಕೊಲ್ಲಿಯ ಕೆಲವು ಭಾಗಗಳಿಗೆ ಗುರುವಾರದ ವೇಳೆಗೆ ಮಾನ್ಸೂನ್ ಪ್ರವೇಶಿಸಿದೆ.
ಬಂಗಾಳ, ಒಡಿಶಾದಲ್ಲಿ ಯಾಸ್ ಅಬ್ಬರ, ಮಧ್ಯರಾತ್ರಿ ಜಾರ್ಖಂಡ್ಗೆ ಭೀತಿ
ಒಡಿಶಾದ ಹಲವು ಪ್ರದೇಶಗಳಲ್ಲಿ ಬುಧವಾರ ಭಾರಿ ಮಳೆಯಾಗಿದೆ. ಚಾಂದಬಲಿ 29 ಸೆಂ.ಮೀ, ಗರದಪುರ್ ಮತ್ತು ರಾಜಕನಿಕಾದಲ್ಲಿ 25 ಸೆಂ.ಮೀ, ಬಲಿಕುಡಾ 19 ಸೆಂ.ಮೀ, ತಿರ್ತೊಲ್ ಮತ್ತು ಬಿಂಜಾರ್ ಪುರ್ 21 ಸೆಂ.ಮೀ ಮತ್ತು ಪಾರಾದೀಪ್ ಪ್ರದೇಶದಲ್ಲಿ 20 ಸೆಂಟಿ ಮೀಟರ್ ಮಳೆಯಾಗಿದೆ. ತಮಿಳುನಾಡಿನ ಕನ್ಯಾಕುಮಾರಿಯಲ್ಲಿ 24 ಸೆಂಟಿ ಮೀಟರ್ ಮಳೆ ಸುರಿದಿದೆ. ಕೇರಳದ ಇಡುಕ್ಕಿ ಪ್ರದೇಶದಲ್ಲಿ 19 ಸೆಂಟಿ ಮೀಟರ್ ಮಳೆಯಾಗಿದೆ. ತಿರುವನಂತಪುರಂನಲ್ಲಿ 17 ಸೆಂ.ಮೀ ಮಳೆಯಾಗಿದೆ.
ಯಾಸ್ ಚಂಡಮಾರುತದಿಂದ ಹೆಚ್ಚಿದ ತೀವ್ರತೆ
ಯಾಸ್ ಚಂಡ ಮಾರುತದಿಂದ ಪಶ್ಚಿಮ ಬಂಗಾಳ ಮತ್ತು ಒಡಿಶಾ ಕರಾವಳಿ ಪ್ರದೇಶದಲ್ಲಿ ಮಾನ್ಸೂನ್ ಗಾಳಿಯ ತೀವ್ರತೆ ಹೆಚ್ಚಾಗಿದೆ. ಮುಂದಿನ ವಾರ ಕೇರಳದಲ್ಲಿ ಮಾನ್ಸೂನ್ ಪ್ರವೇಶಿಸಲಿದ್ದು, ಭಾರಿ ಮೆಳಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಗುರುವಾರ ಕೇರಳದ ಕಾಯಂಕುಳಂ ಮತ್ತು ಅಲಪ್ಪುಜದಲ್ಲಿ 9 ಸೆಂಟಿ ಮೀಟರ್ ಮಳೆಯಾಗಿದೆ. ನೆಡುಮಂಗದ್ ಮತ್ತು ಥಿರುವಿಲ್ಲಾದಲ್ಲಿ 8 ಸೆಂ.ಮೀ ಮಳೆ, ಪೀರ್ಮಡೆ ಮತ್ತು ಕುಮಾರಕಮ್ ಪ್ರದೇಶದಲ್ಲಿ 8 ಸೆಂ.ಮೀ ಮಳೆ ಸುರಿದಿದೆ. ಒಡಿಶಾದ ಮಾಯೂರ್ ಬಂಜ್ 28 ಸೆಂ.ಮೀ, ಕಿಯೊಂಜಿಘರ್ 27 ಸೆಂ.ಮೀ, ಸುಂದರ್ ಘರ್ 21 ಸೆಂ.ಮೀ, ಮಳೆಯಾಗಿದೆ. ಜಾರ್ಖಂಡ ಪಶ್ಚಿಮ ಸಿಂಘುಮ್ 21 ಸೆಂ.ಮೀ ಮತ್ತು ರಾಂಚಿಯಲ್ಲಿ 18 ಸೆಂಟಿ ಮೀಟರ್ ಮಳೆ ಸುರಿದಿದೆ.
ಯಾಸ್ ಹೋಯ್ತು, ಮಾನ್ಸೂನ್ ಬಂತು!
ಭಾರತದ ಕಡಿಮೆ ಒತ್ತಡ ಪ್ರದೇಶದಲ್ಲಿ ಪರಿಸ್ಥಿತಿ ತಕ್ಷಣಕ್ಕೆ ಸುಧಾರಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಯಾಸ್ ಚಂಡಮಾರುತದ ಪ್ರಭಾವವೇನೋ ಕಡಿಮೆಯಾಗಿದೆ. ಆದರೆ, ಮಾನ್ಸೂನ್ ಕ್ರಮೇಣ ಹೆಚ್ಚಳವಾಗುತ್ತಿದೆ ಎಂದು ಹವಾಮಾನ ಇಲಾಖೆಯ ಚಂಡಮಾರುತ ವಿಭಾಗದ ಉಸ್ತುವಾರಿ ಸುನೀತಾ ದೇವಿ ತಿಳಿಸಿದ್ದಾರೆ.
ಕೇರಳದಲ್ಲಿ ಅತಿಹೆಚ್ಚು ಮಳೆ ಸುರಿಯುವ ಅಪಾಯ
ಅರಬ್ಬಿ ಸಮುದ್ರದಲ್ಲಿ ಮಾನ್ಸೂನ್ ಪ್ರವಾಹವನ್ನು ಮುಂದಕ್ಕೆ ತಳ್ಳುವಲ್ಲಿ ಯಾಸ್ ಚಂಡಮಾರುತದ ಪ್ರಭಾವ ಹೆಚ್ಚಾಗಿದೆ. ಈ ಹಿನ್ನೆಲೆ ಕೇರಳದ ಹಲವು ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳವರೆಗೂ ಅಧಿಕ ಮತ್ತು ಅತ್ಯಧಿಕ ಮಳೆಯಾಗುವ ಸಾಧ್ಯತೆಯಿದೆ. ಕೇರಳ ಕರಾವಳಿಗೆ ಮಾನ್ಸೂನ್ ನಿಗದಿಗಿಂತಲೂ ಮೊದಲೇ ಪ್ರವೇಶಿಸುವ ಸಾಧ್ಯತೆ ಈ ಕಾರಣಕ್ಕಾಗಿ ಹೆಚ್ಚಾಗಿದೆ ಎಂದು ಸ್ಕೈ ಮೇಟ್ ವೆದರ್ ಉಪಾಧ್ಯಕ್ಷ ಮಹೇಶ್ ಪಲಾವತ್ ತಿಳಿಸಿದ್ದಾರೆ.
ಕೇರಳದಲ್ಲಿ ಮೇ 31ರಿಂದ ಮಾನ್ಸೂನ್ ಮಳೆ ಆರಂಭ
"ಅರಬ್ಬಿ ಸಮುದ್ರದ ಮೇಲ್ಭಾಗದಲ್ಲಿ ಅಡ್ಡ ಸಮಭಾಜಕದ ಹರಿವು ತೀವ್ರಗೊಂಡಿದ್ದು, ಕೇರಳದಲ್ಲಿ ಭಾರೀ ಮಳೆಯಾಗಿದೆ. ಆದರೆ ಇದು ಮಾನ್ಸೂನ್ ಮಳೆಯಲ್ಲ. ಮೇ 31ರಂದು ಮಾನ್ಸೂನ್ ಬರಲಿದೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ "ಎಂದು ಹವಾಮಾನ ಮಾನಿಟರಿಂಗ್ ಮತ್ತು ಪ್ರಿಡಿಕ್ಷನ್ ಗ್ರೂಪ್ (ಸಿಎಂಪಿಜಿ) ಮುಖ್ಯಸ್ಥ ಒಪಿ ಶ್ರೀಜಿತ್ ಹೇಳಿದ್ದಾರೆ. ಸಾಮಾನ್ಯವಾಗಿ ಕೇರಳದಲ್ಲಿ ಜೂನ್ 1ರಿಂದ ಮಾನ್ಸೂನ್ ಮಳೆ ಆರಂಭವಾಗಲಿದ್ದು, ಈ ಬಾರಿ ಒಂದು ದಿನ ಮುಂಚಿತವಾಗಿ ಮಳೆ ಶುರುವಾಗಲಿದೆ ಎಂದು ತಿಳಿಸಿದ್ದಾರೆ.
ದೇಶದಲ್ಲಿ ಮಾನ್ಸೂನ್ ಮಳೆಯ ಮಹತ್ವವೇನು?
ಭಾರತೀಯ ರೈತರ ಬದುಕನ್ನು ಮಾನ್ಸೂನ್ ಮಳೆಯ ಜೊತೆಗೆ ಆಡುವ ಜೂಜಾಟ ಎಂದು ಕರೆಯಲಾಗುತ್ತದೆ. ಅಂದರೆ ದೇಶದಲ್ಲಿ ಸುರಿಯುವ ಒಟ್ಟು ಮಳೆಯಲ್ಲಿ ಶೇ.70ರಷ್ಟು ಮಳೆ ಮಾನ್ಸೂನ್ ಮಾರುತಗಳಿಂದಲೇ ಬೀಳುತ್ತದೆ. ಮಳೆಯನ್ನೇ ನೆಚ್ಚಿಕೊಂಡು ಕೃಷಿ ಮಾಡುವ ಬಹುಪಾಲು ರೈತರು ಈ ಮಾನ್ಸೂನ್ ಮಳೆಯನ್ನೇ ಅವಲಂಬಿತರಾಗಿದ್ದಾರೆ. ಬೇಸಿಗೆಯ ಬೆಳೆಗಳಿಗೆ ಈ ಮಾನ್ಸೂನ್ ಮಳೆಯೇ ನಿರ್ಣಾಯಕವಾಗಿರುತ್ತದೆ. ಅಷ್ಟೇ ಅಲ್ಲದೇ ದೇಶದ ಆರ್ಥಿಕತೆ, ಕೃಷಿ, ಉದ್ಯೋಗ, ಕೈಗಾರಿಕೆಗಳು ಹೀಗೆ ಪ್ರತಿಯೊಂದು ರಂಗದ ಮೇಲೂ ಈ ಮಾನ್ಸೂನ್ ಮಳೆಯು ಪರಿಣಾಮ ಬೀರಲಿದೆ.