ನರೇಂದ್ರ ಮೋದಿ ದ್ವೇಷದ ವಿಷ ಬಿತ್ತುತ್ತಿದ್ದಾರೆ : ವಯನಾಡಿನಲ್ಲಿ ಸಿಟ್ಟು ಕಾರಿದ ರಾಹುಲ್ ಗಾಂಧಿ
ಕಲ್ಪೆಟ್ಟ (ಕೇರಳ), ಜೂನ್ 08 : ಮುಂಗಾರು ಮಳೆಯ ಸಿಂಚನ ಆರಂಭವಾಗುವ ಶುಭಸಂದರ್ಭದಲ್ಲಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ಕ್ಷೇತ್ರಕ್ಕೆ ಪ್ರಥಮ ಬಾರಿ ಶನಿವಾರ ಭೇಟಿ ನೀಡಿದ್ದಾರೆ.
ಕಾರ್ಮೋಡ ಕವಿದ ವಾತಾವರಣದಲ್ಲಿ, ಸಹಸ್ರಾರು ಅಭಿಮಾನಿಗಳ ಸಮ್ಮುಖದಲ್ಲಿ ಭರ್ಜರಿ ರೋಡ್ ಶೋ ನಡೆಸಿದ ರಾಹುಲ್ ಗಾಂಧಿ ಅವರು, ಅತ್ಯಂತ ಕಟುವಾದ ಪದಗಳಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಟೀಕಾ ಪ್ರಹಾರ ಮಾಡಿದರು.
ನಾನು ಪ್ರತಿದಿನ ಬಿಜೆಪಿ ವಿರುದ್ಧ ಹೋರಾಡುತ್ತೇನೆ : ರಾಹುಲ್ ಗಾಂಧಿ
"ರಾಷ್ಟ್ರಮಟ್ಟದಲ್ಲಿ ನಾವು ವಿಷದ ವಿರುದ್ಧ ಹೋರಾಟ ಮಾಡಬೇಕಿದೆ. ಮಿ. ನರೇಂದ್ರ ಮೋದಿ ಅವರು ವಿಷವನ್ನು ಬಳಸುತ್ತಾರೆ. ನಾನು ಅತ್ಯಂತ ಕಟುವಾದ ಪದವನ್ನು ಬಳಸುತ್ತಿದ್ದೇನೆ, ಆದರೆ, ನರೇಂದ್ರ ಮೋದಿಯವರು ರಾಷ್ಟ್ರವನ್ನು ಇಬ್ಭಾಗಿಸಲು ದ್ವೇಷದ ವಿಷವನ್ನು ಬಳಸುತ್ತಾರೆ. ಸಿಟ್ಟು ಮತ್ತು ದ್ವೇಷದಿಂದ ಭಾರತವನ್ನು ಅವರು ಇಬ್ಭಾಗಿಸುತ್ತಿದ್ದಾರೆ. ಅವರು ಸುಳ್ಳನ್ನು ಹೇಳಿಯೇ ಚುನಾವಣೆ ಗೆಲ್ಲುತ್ತಿದ್ದಾರೆ" ಎಂದು ರಾಹುಲ್ ಗಾಂಧಿ ವಾಗ್ದಾಳಿ ಮಾಡಿದರು.
ಇಂಥ ಋಣಾತ್ಮಕ ಮಾತುಗಳನ್ನು ಲೋಕಸಭಾ ಚುನಾವಣೆಯ ಪ್ರಚಾರದುದ್ದಕ್ಕೂ ಬಳಸಿದ್ದ ರಾಹುಲ್ ಗಾಂಧಿ ಅವರು ಹೀನಾಯವಾಗಿ ಸೋತಿದ್ದಾರೆ. 542 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದು ಕೇವಲ 52 ಕ್ಷೇತ್ರಗಳಲ್ಲಿ ಮಾತ್ರ. ಅವರು ಉತ್ತರ ಪ್ರದೇಶದ ಅಮೇಥಿಯಲ್ಲಿ ಅವಮಾನಕರ ಸೋಲು ಅನುಭವಿಸಿದರೂ, ಕೇರಳದಲ್ಲಿ 20ರಲ್ಲಿ 15 ಕ್ಷೇತ್ರಗಳನ್ನು ಕಾಂಗ್ರೆಸ್ ತನ್ನದಾಗಿಸಿಕೊಂಡಿದೆ.
ಮಲಯಾಳಿ 'ಚಾಯ'ಕ್ಕೆ ಮಾರು ಹೋದ ರಾಹುಲ್ ಗಾಂಧಿ
ತಾವು ಕೇವಲ 52 ಸಂಸದರು ಮಾತ್ರವಿದ್ದರೇನಂತೆ, ಸಂಸತ್ತಿನಲ್ಲಿ ಬಿಜೆಪಿಯ ವಿರುದ್ಧ ಹೋರಾಟ ಮಾಡುತ್ತಲೇ ಇರುತ್ತೇವೆ ಎಂದು ತೊಡೆತಟ್ಟಿರುವ ರಾಹುಲ್ ಗಾಂಧಿ ಅವರು, ನರೇಂದ್ರ ಮೋದಿಯವರು ದೇಶದ ಕೆಟ್ಟ ಭಾವನೆಗಳನ್ನು ಪ್ರತಿನಿಧಿಸುತ್ತಿದ್ದಾರೆ. ಅವರು ದ್ವೇಷ, ಸಿಟ್ಟು, ಅಸೂಯೆ, ಅಭದ್ರತೆ ಮತ್ತು ಸುಳ್ಳುಗಳನ್ನು ಪ್ರತಿನಿಧಿಸುತ್ತಿದ್ದಾರೆ ಎಂದು ಮೋದಿಯವರ ಮೇಲೆ ದ್ವೇಷ ಕಾರಿದರು. ಆದರೂ, ಅವರು ಪ್ರತಿಬಾರಿ ಹೇಳುವುದು ನಾನು ಪ್ರೀತಿಯಿಂದಲೇ ಜನರ ಮನಸ್ಸನ್ನು ಗೆಲ್ಲುತ್ತೇನೆಂದು.
ತಿರುಗುಬಾಣವಾದ ನೆಗೆಟಿವ್ ಅಭಿಯಾನ, ಕಾಂಗ್ರೆಸ್ಸಿನಲ್ಲಿ ಕೆಂಡ ನಿಗಿನಿಗಿ
ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದರೂ, ವಯನಾಡಿನ ಜನತೆಗೆ ಕಾಂಗ್ರೆಸ್ ಬಾಗಿಲು ಸದಾಕಾಲ ತೆರೆದಿರುತ್ತದೆ. ನೀವು ಯಾರೇ ಆಗಿರಿ, ಎಲ್ಲಿಂದಲೇ ಬಂದಿರಿ, ನಿಮ್ಮ ವಯಸ್ಸು ಎಷ್ಟೇ ಇರಲಿ, ನಿಮ್ಮ ಸಿದ್ಧಾಂತ ಯಾವುದೇ ಇರಲಿ ನಿಮಗೆ ಕಾಂಗ್ರೆಸ್ ಬಾಗಿಲು ತೆರೆದಿರುತ್ತದೆ, ನೀವು ಪಕ್ಷವನ್ನು ಸೇರಬಹುದು ಎಂದು ಅವರು ನೆರೆದಿದ್ದ ಜನತೆಗೆ ಕರೆ ನೀಡಿದರು.
ಲೋಕಸಭೆ ಚುನಾವಣೆ ಕಾಂಗ್ರೆಸ್ ಸೋಲಿಗೆ 7 ಕಾರಣಗಳು
ಆದರೆ, ಅವರ ಈ ಮಾತುಗಳಿಗೆ ಟ್ವಿಟ್ಟರ್ ನಲ್ಲಿ ವಿಭಿನ್ನವಾದ ಮಾತುಗಳು ಕೇಳಿಬರುತ್ತಿವೆ. ಅವರು ಇದೇ ಮಾತನ್ನು ಅಮೇಥಿಯಲ್ಲಿಯೂ ಹೇಳಿದ್ದರು. ಅಯ್ಯೋ ಜನರ ಮೇಲೆ ಇವರಿಗೆ ಎಷ್ಟೊಂದು ಪ್ರೀತಿ, ಇದನ್ನು ನೋಡಿ ನನ್ನ ಕಣ್ಣುಗಳು ತುಂಬಿ ಬಂದಿವೆ. ಇವರಿಗೆ ಅಮೇಥಿ ಜನರ ಮೇಲೆ ಇಷ್ಟೊಂದು ಪ್ರೀತಿಯಿದ್ದರೆ ಸೋಲಮೇಲಾದರೂ ಅಮೇಥಿಗೆ ಭೇಟಿ ನೀಡಿ ಜನರೊಂದಿಗೆ ಮಾತಾಡಬಹುದಿತ್ತು. ಇದು ಇವರ ಮೊದಲ ಮತ್ತೆ ಕಡೆಯ ಭೇಟಿ, ಇನ್ನು ಐದು ವರ್ಷ ಇನ್ನು ಇವರು ಇಲ್ಲಿ ಕಾಲಿಡುವುದಿಲ್ಲ ಎಂದು ಜನರು ವ್ಯಂಗ್ಯವಾಗಿ ಮಾತನಾಡುತ್ತಿದ್ದಾರೆ.