ಸಿನಿಮಾ ಸೆಟ್ ದ್ವಂಸ: ಭಜರಂಗದಳ ವ್ಯಕ್ತಿ ಬಂಧನ, ಕೇರಳ ಸಿಎಂ ಎಚ್ಚರಿಕೆ
ತಿರುವನಂತಪುರಂ, ಮೇ 26: ಇಡೀ ದೇಶವೇ ಕೊರೊನಾ ವೈರಸ್ ಕಾಟದಿಂದ ಹೇಗೆ ಹೊರಬರಬೇಕೆಂದು ಹೋರಾಡುತ್ತಿದೆ. ಆದರೆ, ಕೇರಳದಲ್ಲಿ ಕೊರೊನಾ ಆತಂಕದ ಮಧ್ಯೆ ಧಾರ್ಮಿಕ ಹಿನ್ನೆಲೆಯಲ್ಲಿ ದುರ್ಘಟನೆಯೊಂದು ನಡೆದಿದೆ.
Recommended Video
ಮಲಯಾಳಂ ಸಿನಿಮಾವೊಂದಕ್ಕೆ ಹಾಕಲಾಗಿದ್ದ ಚರ್ಚ್ ಸೆಟ್ ಧ್ವಂಸ ಮಾಡಿರುವ ಪ್ರಕರಣದಲ್ಲಿ ಭಜರಂಗದಳದ ಜಿಲ್ಲಾಧ್ಯಕ್ಷನನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನು ಐವರನ್ನು ಹುಡುಕಲಾಗುತ್ತಿದೆ.
ಕೇರಳದಲ್ಲಿ ನಾಗರಹಾವಿನಿಂದ ಕಚ್ಚಿಸಿ ಪತ್ನಿಯನ್ನು ಕೊಲೆ ಮಾಡಿದ ನೀಚ
ಈ ಘಟನೆಯನ್ನು ಖಂಡಿಸಿರುವ ಕೇರಳ ಮುಖ್ಯಮಂತ್ರಿ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಅಷ್ಟಕ್ಕೂ, ಚರ್ಚ್ ಸೆಟ್ ಹಾಳು ಮಾಡಿದ್ದೇಕೆ? ಭಜರಂಗದಳದ ವ್ಯಕ್ತಿಯನ್ನು ಬಂಧಿಸಿದ್ದೇಕೆ? ಮುಂದೆ ಓದಿ...
ಮಿನ್ನರ್ ಮುರಲಿ ಚರ್ಚ್ ಧ್ವಂಸ
ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಕಲಾಡಿ ಪ್ರದೇಶದಲ್ಲಿ ಮಿನ್ನರ್ ಮುರಲಿ ಸಿನಿಮಾದ ಚಿತ್ರೀಕರಣಕ್ಕಾಗಿ ಚರ್ಚ್ ಸೆಟ್ ಹಾಕಲಾಗಿತ್ತು. ಆ ಸೆಟ್ ಸಮೀಪ ಹಿಂದೂ ದೇವಾಲಯ ಇತ್ತು. ಹಾಗಾಗಿ, ಇಲ್ಲಿ ಚರ್ಚ್ ಸೆಟ್ ಹಾಕುವುದು ಬೇಡ ಎಂದು ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಇದಕ್ಕೆ ತಲೆಕೆಡಿಸಿಕೊಳ್ಳದ ಚಿತ್ರತಂಡ ಅನುಮತಿ ಪಡೆದು ಸೆಟ್ ಹಾಕಿತ್ತು. ಇದರಿಂದ ಆಕ್ರೋಶಕ್ಕೆ ಒಳಗಾದ ಹಿಂದೂ ಸಂಘಟನೆಯ ಸದಸ್ಯರು ಲಾಕ್ಡೌನ್ ಸಮಯದಲ್ಲಿ ಚರ್ಚ್ ಸೆಟ್ನ್ನು ಧ್ವಂಸಗೊಳಿಸಿದ್ದಾರೆ.
ನಾಶ ಮಾಡಿ, ಫೋಟೋ ಹಂಚಿಕೆ
ಸಿನಿಮಾ ಶೂಟಿಂಗ್ ಮಾಡುತ್ತಿದ್ದ ಚಿತ್ರತಂಡ, ಲಾಕ್ಡೌನ್ ಕಾರಣದಿಂದ ಚಿತ್ರೀಕರಣವನ್ನು ತಾತ್ಕಾಲಿಕವಾಗಿ ರದ್ದು ಮಾಡಿತ್ತು. ಈ ಸಮಯದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಸುತ್ತಿ, ಪಿಕಾಸಿ ಹಾಗೂ ಇನ್ನಿತರ ಸಾಧನಗಳನ್ನು ಬಳಸಿ ಚರ್ಚ್ ಸೆಟ್ ನಾಶ ಮಾಡಿದ್ದಾರೆ. ಬಳಿಕ ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಸಂಭ್ರಮ ಪಟ್ಟಿದ್ದಾರೆ.
ಓರ್ವ ವ್ಯಕ್ತಿಯ ಬಂಧನ
ಈ ಘಟನೆಯ ಸಿನಿಮಾದ ನಿರ್ದೇಶಕ ಪೊಲೀಸ್ ದೂರು ನೀಡಿದ್ದಾರೆ. ಚರ್ಚ್ ಸೆಟ್ ನಾಶ ಮಾಡುತ್ತಿರುವ ಅಂತರರಾಷ್ಟ್ರ ಹಿಂದೂ ಪರಿಷತ್ ಸದಸ್ಯ ಹರಿ ಎಂಬಾತನ ಫೋಟೋವನ್ನು ಫೇಸ್ಬುಕ್ನಲ್ಲಿ ಶೇರ್ ಮಾಡಿರುವ ಭಜರಂಗದಳದ ಜಿಲ್ಲಾಧ್ಯಕ್ಷನನ್ನು ಬಂಧಿಸಲಾಗಿದೆ. ಉಳಿದ ಐದು ಜನರಿಗಾಗಿ ಪೊಲೀಸರು ಶೋಧಕಾರ್ಯ ಮುಂದುವರಿಸಿದ್ದಾರೆ. ಈ ಘಟನೆ ಬಗ್ಗೆ ಮಲಯಾಳಂ ಇಂಡಸ್ಟ್ರಿ ಬೇಸರ ವ್ಯಕ್ತಪಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಘಟನೆ ಖಂಡಿಸಿದ ಕೇರಳ ಸಿಎಂ
ಚರ್ಚ್ ಸೆಟ್ ನಾಶ ಮಾಡಿದ ಘಟನೆ ಬಗ್ಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಪ್ರತಿಕ್ರಿಯಿಸಿದ್ದಾರೆ. ''ಈ ರೀತಿ ಕೋಮು ಜಗಳಕ್ಕೆ ಕೇರಳದಲ್ಲಿ ಜಾಗವಿಲ್ಲ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸೆಟ್ ಹಾಕಲಾಗಿತ್ತು. ಲಾಕ್ಡೌನ್ ಇದ್ದ ಕಾರಣ ಚಿತ್ರೀಕರಣ ನಿಲ್ಲಿಸಿದ್ದರು. ಇಲ್ಲವಾದ್ದಲಿ ಇಷ್ಟೊತ್ತಿಗೆ ಶೂಟಿಂಗ್ ಮುಗಿದಿರುತ್ತಿತ್ತು. ಕೇರಳ ಸರ್ಕಾರ ಇಂತಹ ಕೃತ್ಯಗಳನ್ನು ಸಹಿಸುವುದಿಲ್ಲ. ಸೆಟ್ ನಾಶ ಮಾಡಿರುವ ಕೋಮುವಾದಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು'' ಎಂದಿದ್ದಾರೆ.