ಮಂಗಳೂರು ಗೋಲಿಬಾರ್: ಕೇರಳದಿಂದ ಕಳವಳ ವ್ಯಕ್ತಪಡಿಸಿದ ದೇವೇಗೌಡ
ಬೆಂಗಳೂರು, ಡಿಸೆಂಬರ್ 20: ನಿನ್ನೆ ಮಂಗಳೂರಿನಲ್ಲಿ ನಡೆದ ಗೋಲಿಬಾರ್ ನಲ್ಲಿ ಇಬ್ಬರು ಪ್ರತಿಭಟನಾಕಾರರು ಮೃತರಾಗಿದ್ದಾರೆ. ಈ ಬಗ್ಗೆ ಜೆಡಿಎಸ್ ವರಿಷ್ಠ ದೇವೇಗೌಡ ಕಾಳಜಿ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ನಡೆದ ಗಲಭೆಗೆ ಸಚಿವರು ನೀಡಿದ ವಿವಾದಾತ್ಮಕ ಹೇಳಿಕೆಗಳೇ ಕಾರಣ ಎಂದು ಜರಿದಿರುವ ದೇವೇಗೌಡ, ಸಚಿವರುಗಳ ಹೇಳಿಕೆಗಳೇ ಗಲಭೆಗೆ ಕುಮ್ಮಕ್ಕು ನೀಡಿವೆ ಎಂದಿದ್ದಾರೆ.
ಪ್ರಕೃತಿ ಚಿಕಿತ್ಸೆಗೆ ಕೇರಳದಲ್ಲಿರುವ ದೇವೇಗೌಡರು, 'ಮಂಗಳೂರಿನಲ್ಲಿ ಜೆಡಿಎಸ್ನ ರಾಷ್ಟ್ರೀಯ ನಾಯಕ ಬಿ.ಎಂ.ಫಾರೂಕ್ ಇದ್ದು ಅವರು ಅಲ್ಲಿ ಜನರೊಂದಿಗೆ ಬೆರೆತು ಶಾಂತಿ ತರಲು ಯತ್ನಿಸುತ್ತಿದ್ದಾರೆ. ಅವರಿಂದ ಮಾಹಿತಿಯನ್ನು ನಾನು ತರಿಸಿಕೊಳ್ಳುತ್ತಿದ್ದೇನೆ' ಎಂದು ಹೇಳಿದ್ದಾರೆ.
ಎನ್ಆರ್ಸಿ ಮತ್ತು ಸಿಎಎ ಬಗ್ಗೆ ಜನರಲ್ಲಿ ಸಂಶಯ ಇದೆ. ಇದು ಸಾಮಾನ್ಯ ಕೂಡ. ಸರ್ಕಾರವು ಜನರ ಸಂಶಯವನ್ನು ದೂರ ಮಾಡುವುದು ಬಿಟ್ಟು, ಪೊಲೀಸ್ ಬಲ ಬಳಸಿ ಜನರ ಪ್ರತಿಭಟನೆ ಹತ್ತಿಕ್ಕಲು ಯತ್ನಿಸುತ್ತಿರುವುದು ಖಂಡನೀಯ ಎಂದು ದೇವೇಗೌಡ ಹೇಳಿದ್ದಾರೆ.
ಶಾಂತಿ ಸ್ಥಾಪನೆಗೆ ಸೂಕ್ತ ಕ್ರಮಗಳನ್ನು ಸರ್ಕಾರ ಕೂಡಲೇ ಕೈಗೊಳ್ಳಬೇಕು ಎಂದು ದೇವೇಗೌಡರು ಒತ್ತಾಯಿಸಿದ್ದು, ಶಾಂತಿ ಕದಡಲು ಯತ್ನಿಸುತ್ತಿರುವವರನ್ನು ಬಂಧಿಸಿ ಆದರೆ ಅಮಾಯಕರನ್ನು ಕೊಲ್ಲಬೇಡಿ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಗೋಲಿಬಾರ್ ನಲ್ಲಿ ಮೃತರಾದವರಿಗೆ ಸರ್ಕಾರ ಪರಿಹಾರ ಹಣ ನೀಡಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶೀಘ್ರವೇ ಕ್ರಮ ಜರುಗಿಸಬೇಕು ಎಂದಿರುವ ದೇವೇಗೌಡ, ಜನರು ಶಾಂತಿ ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ.