ಕೇರಳದಲ್ಲಿ ರೆಸ್ಟೋರೆಂಟ್ ಓಪನ್: ಗೃಹ ಸಚಿವಾಲಯ ಕೆಂಡಾಮಂಡಲ
ತಿರುವನಂತಪುರಂ, ಏಪ್ರಿಲ್.20: ಕೊರೊನಾ ವೈರಸ್ ಸೋಂಕು ಹರಡುವಿಕೆ ತಡೆಗೆ ಭಾರತ ಲಾಕ್ ಡೌನ್ ಘೋಷಿಸಿದ್ದರೆ ಕೇರಳ ಕೆಲವು ಪ್ರದೇಶದಲ್ಲಿ ಲಾಕ್ ಡೌನ್ ಸಡಿಲಗೊಳಿಸಲಾಗಿದೆ. ರಾಜ್ಯ ಸರ್ಕಾರದ ಈ ಕ್ರಮದ ವಿರುದ್ಧ ಕೇಂದ್ರ ಗೃಹ ಸಚಿವಾಲಯವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಕೇರಳದ ಕೆಲ ಪ್ರದೇಶಗಳಲ್ಲಿ ಕೇಂದ್ರ ಗೃಹ ಸಚಿವಾಲಯದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಕ್ಷೌರಿಕ ಅಂಗಡಿ, ಪುಸ್ತಕಗಳ ಅಂಗಡಿ ಹಾಗೂ ಸಾರ್ವಜನಿಕ ಸಂಚಾರಕ್ಕೆ ಅನುಮತಿ ನೀಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ.
ತಮಿಳುನಾಡು-ಕರ್ನಾಟಕದಲ್ಲಿ ಏ.20 ಕೈಗಾರಿಕೆ ಕಾರ್ಯಾರಂಭ ಅನುಮಾನ
ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ, ಈ ಸಂಬಂಧ ಕೇರಳದ ಮುಖ್ಯ ಕಾರ್ಯದರ್ಶಿಗೆ ಪತ್ರವನ್ನು ಬರೆದಿದ್ದಾರೆ. ವಿಪತ್ತು ನಿರ್ವಹಣಾ ಕಾಯ್ದೆಯಡಿ ಕೇಂದ್ರ ಗೃಹ ಸಚಿವಾಲಯವು ನೀಡಿದ ಮಾರ್ಗಸೂಚಿಗಳನ್ನು ಯಾವುದೇ ಕಾರಣಕ್ಕೂ ಉಲ್ಲಂಘಿಸುವಂತಿಲ್ಲ ಎಂದು ಸೂಚನೆ ನೀಡಿದ್ದಾರೆ.
ಕೇರಳ ಸರ್ಕಾರಿ ಮುಖ್ಯ ಕಾರ್ಯದರ್ಶಿಗೆ ಖಡಕ್ ಸೂಚನೆ
ಕೊರೊನಾ ವೈರಸ್ ಹರಡುವಿಕೆ ಸಂದರ್ಭದಲ್ಲಿ ಜಾರಿಗೊಳಿಸಲಾಗಿರುವ ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿ 4(ಎ) ಮತ್ತು 4(ಬಿ) ಮಾರ್ಗಸೂಚಿಗಳಲ್ಲಿ ಉಲ್ಲೇಖಿಸಿದ ಅಂಶಗಳನ್ನು ಯಾವುದೇ ರಾಜ್ಯವಾಗಲಿ ಕೇಂದ್ರಾಡಳಿತ ಪ್ರದೇಶಗಳಾಗಲಿ ಉಲ್ಲಂಘಿಸುವಂತಿಲ್ಲ. ಸರ್ಕಾರವು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಬೇಕು ಎಂದು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಸೂಚನೆ ನೀಡಿದ್ದಾರೆ.
ಸುಪ್ರೀಂಕೋರ್ಟ್ ಆದೇಶ ನೆನಪಿದೆ ಅಲ್ಲವೇ?
ಸಾರ್ವಜನಿಕ ಸುರಕ್ಷತೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಸೂಚನೆಗಳನ್ನು ರಾಜ್ಯ ಸರ್ಕಾರಗಳು ಕಟ್ಟುನಿಟ್ಟಿನಿಂದ ಜಾರಿಗೊಳಿಸಬೇಕು. ಈ ಸಂಬಂಧ ಕಳೆದ ಮಾರ್ಚ್.31ರಂದೇ ಸುಪ್ರೀಂಕೋರ್ಟ್ ಸೂಚನೆಯನ್ನು ನೀಡಿದ್ದು, ಈ ಬಗ್ಗೆ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಲಾಗುವುದು ಎಂದು ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ತಿಳಿಸಿದ್ದಾರೆ.
ಲಾಕ್ ಡೌನ್ ಸಡಿಲಗೊಳಿಸಿದ ಕೇರಳ ರಾಜ್ಯ ಸರ್ಕಾರ
ಕೇಂದ್ರ ಗೃಹ ಸಚಿವಾಲಯವು ಹೊರಡಿಸಿದ ಲಾಕ್ ಡೌನ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಮುನಿಸಿಪಲ್ ಪ್ರದೇಶಗಳಲ್ಲಿ ರೆಸ್ಟೋರೆಂಟ್, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಇದರ ಜೊತೆಗೆ ಕ್ಷೌರಿಕ ಮತ್ತು ಪುಸ್ತಕ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿದ್ದು ಮಾರ್ಗಸೂಚಿಯ ಉಲ್ಲಂಘನೆಯಾಗಿದೆ. ಈ ಅಂಗಡಿಗಳಿಗೆ ಅನುಮತಿ ನೀಡಿದ ಆದೇಶವನ್ನು ರಾಜ್ಯ ಸರ್ಕಾರ ವಾಪಸ್ ಪಡೆಯುವಂತೆ ಸೂಚನೆ ನೀಡಲಾಗಿದೆ.
ಕೇರಳದ ಕೆಲವು ಪ್ರದೇಶಗಲ್ಲಿ ಲಾಕ್ ಡೌನ್ ಸಡಿಲಿಕೆ
ರಾಜ್ಯದ ಎರ್ನಾಕುಲಂ, ಪಥಮಥಿಟ್ಟ ಮತ್ತು ಕೊಲ್ಲಂ ಜಿಲ್ಲೆಗಳನ್ನು ಆರೆಂಜ್ ಎ ವಲಯ ಎಂದು ಗುರುತಿಸಲಾಗಿದ್ದು, ಈ ಜಿಲ್ಲೆಗಳಲ್ಲಿ ಏಪ್ರಿಲ್.24ರಿಂದ ಲಾಕ್ ಡೌನ್ ಸಡಿಲಿಸಲಾಗುತ್ತದೆ. ಆರೆಂಜ್ ಬಿ ವಲಯ ಎಂದು ಗುರುತಿಸಲಾಗಿರುವ ಅಲಪ್ಪುಂಜಾ, ತ್ರಿವಂಡ್ರಂ, ಪಲಕ್ಕದಾ, ವಯನಾಡ್ ಮತ್ತು ಥ್ರಿಸ್ಸುರ್ ಪ್ರದೇಶಗಳಲ್ಲಿ ಏಪ್ರಿಲ್.20ರಿಂದಲೇ ಲಾಕ್ ಡೌನ್ ನಿಯಮವನ್ನು ಸಡಿಲಿಸಲಾಗಿದೆ.