ಬಿಜೆಪಿ ಕಾರ್ಯಕಾರಿಣಿಗೆ ಮೆಟ್ರೋ ಮ್ಯಾನ್ ಶ್ರೀಧರನ್ ವಿಶೇಷ ಆಹ್ವಾನಿತರು, ಶೋಭಾ ಕಡೆಗಣನೆ
ತಿರುವನಂತಪುರಂ, ಅಕ್ಟೋಬರ್ 08: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಗೆ ಈ ಹಿಂದೆ ವಿಧಾನಸಭೆ ಚುನಾವಣೆಯಲ್ಲಿ ಪಾಲಕ್ಕಾಡ್ನಲ್ಲಿ ಸ್ಪರ್ಧಿಸಿದ್ದ ಮೆಟ್ರೋ ಮ್ಯಾನ್ ಶ್ರೀಧರನ್ರನ್ನು ವಿಶೇಷ ಆಹ್ವಾನಿತರಾಗಿ ಹೆಸರಿಸಲಾಗಿದೆ. ಬಿಜೆಪಿಯ ಮಾಜಿ ರಾಜ್ಯ ಅಧ್ಯಕ್ಷ ಪಿಕೆ ಕೃಷ್ಣನಂದ ದಾಸ್ ಎರಡನೇ ಆಹ್ವಾನಿತರು ಆಗಿದ್ದಾರೆ.
ಮೆಟ್ರೋ ಮ್ಯಾನ್ ಖ್ಯಾತಿಯ ಇ. ಶ್ರೀಧರನ್ ಈ ಹಿಂದೆ ಕೇರಳದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪಾಲಕ್ಕಾಡ್ನಿಂದ ಬಿಜೆಪಿಯ ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿದಿದ್ದರು. ಹಾಗೆಯೇ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯು ಆಗಿದ್ದರು. ಆದರೆ ಇ. ಶ್ರೀಧರನ್ ಪಾಲಕ್ಕಾಡ್ ಚುನಾವಣೆಯಲ್ಲಿ ಸೋಲು ಕಂಡಿದ್ದರು. ಬಿಜೆಪಿಯು ಕೇರಳದಲ್ಲಿ ಹೆಚ್ಚಿನ ಸ್ಥಾನವನ್ನು ಗಳಿಸುವಲ್ಲಿ ಕೂಡಾ ವಿಫಲವಾಗಿದೆ.
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಿಂದ ಮನೇಕಾ, ವರುಣ್ ಗಾಂಧಿ ಹೆಸರು ಔಟ್!
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಗುರುವಾರ ನೂತನ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಪಟ್ಟಿಯನ್ನು ಬಿಡುಗಡೆ ಮಾಡಿದರು. ಈ ಪಟ್ಟಿಯಲ್ಲಿ ಒಟ್ಟು ಒಂಬತ್ತು ಮಂದಿ ಕೇರಳಿಗರ ಹೆಸರು ಇದೆ. ಈ ನಡುವೆ ಕೇರಳದ ಬಿಜೆಪಿ ಉಪಾಧ್ಯಕ್ಷೆ ಶೋಭಾ ಸುರೇಂದ್ರನ್ರನ್ನು ಕಡೆಗಣಿಸಲಾಗಿದ್ದು, ಈ ಪಟ್ಟಿಯಲ್ಲಿ ಶೋಭಾ ಸುರೇಂದ್ರನ್ ಹೆಸರು ಇಲ್ಲ.
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಪಟ್ಟಿಯಲ್ಲಿ ಒಟ್ಟು ಇರುವ ಒಂಬತ್ತು ಮಂದಿ ಕೇರಳ ರಾಜ್ಯದವರ ಪೈಕಿ ಅಲ್ಫಾನ್ಸ್ ಕನ್ನನ್ತಾನಮ್ ಹಾಗೂ ಒ ರಾಜಗೋಪಲ್ ಪ್ರಮುಖ ವ್ಯಕ್ತಿಗಳು ಆಗಿದ್ದಾರೆ. ಇನ್ನುಳಿದಂತೆ ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳಿದರನ್ ಹಾಗೂ ಮಿಜೋರಾಂನ ಮಾಜಿ ಗವರ್ನರ್ ಕುಮ್ಮನಂ ರಾಜಶೇಖರನ್ ಈ 80 ಜನರ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಪಟ್ಟಿಯಲ್ಲಿ ಇದ್ದಾರೆ.
ಇನ್ನು ನರೇಂದ್ರ ಮೋದಿ ಸೇರಿ ಇರುವ ಈ ನೂತನ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಪಟ್ಟಿಯಲ್ಲಿ ಬಿಜೆಪಿ ಕೇರಳ ರಾಜ್ಯ ಅಧ್ಯಕ್ಷ ಇ ಸುರೇಂದ್ರನ್, ಕೇರಳ ರಾಜ್ಯ ಬಿಜೆಪಿ ಪ್ರಭಾರಿ ಸಿಪಿ ರಾಧಾಕೃಷ್ಣನ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎಮ್ ಗಣೇಸನ್ ಹಾಗೂ ಸುಭಾಷ್, ರಾಷ್ಟ್ರೀಯ ವಕ್ತಾರ ಟಾಮ್ ವಡಕ್ಕನ್, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಅಬ್ದುಲ್ಲಾ ಕುಟ್ಟಿ ಕೂಡಾ ಇದ್ದಾರೆ.
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಯಿಂದ ಕೈಬಿಟ್ಟ ಬಳಿಕ ವರುಣ್ ಕೊಟ್ಟ ಪ್ರತಿಕ್ರಿಯೆ
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಪಟ್ಟಿಯಲ್ಲಿ ಇರುವ ಒ ರಾಜಗೋಪಲ್ ಈ ಹಿಂದೆ ಕೇರಳದಲ್ಲಿ ಶಾಸಕರಾಗಿದ್ದರು ಹಾಗೂ ಬಿಜೆಪಿಯ ಏಕೈಕ ಶಾಸಕರು ಇವರಾಗಿದ್ದರು. ಹಾಗೆಯೇ ತನ್ನ ಪಕ್ಷದ ವಿರುದ್ಧವಾಗಿಯೇ ವಿವಾದಾದ್ಮತಕ ಹೇಳಿಕೆಗಳನ್ನು ಹಲವಾರು ಬಾರಿ ನೀಡಿದ್ದರು. ಆದರೆ ಬಿಜೆಪಿಯು ಇವರನ್ನು ಕೈ ಬಿಟ್ಟಿಲ್ಲಿ. ಆದರೆ ಉಳಿದಂತೆ ಪಕ್ಷದ ವಿರುದ್ಧವಾಗಿ ಹೇಳಿಕೆಗಳನ್ನು ನೀಡಿದ ಹಿರಿಯ ಬಿಜೆಪಿ ನಾಯಕ ಮನೇಕಾ ಗಾಂಧಿ ಮತ್ತು ಅವರ ಮಗ ವರುಣ್ ಗಾಂಧಿಯನ್ನು ಕೈಬಿಡಲಾಗಿದೆ. ಹಾಗೆಯೇ ಇವರಿಬ್ಬರನ್ನು ಮಾತ್ರವಲ್ಲದೇ ಕಳೆದ ಹಲವು ವರ್ಷಗಳಿಂದ ಬಿಜೆಪಿ ಪಕ್ಷವನ್ನು ಟೀಕೆ ಮಾಡುತ್ತಿರುವ ಬಿಜೆಪಿ ನಾಯಕ ಸುಬ್ರಮನಿಯನ್ ಸ್ವಾಮಿ ಹಾಗೂ ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ದ ಪ್ರತಿಭಟನೆ ನಡೆಸುತ್ತಿರುವ ರೈತರ ಪರವಾದ ಹೇಳಿಕೆಯನ್ನು ನೀಡುವ ಮಾಜಿ ಕೇಂದ್ರ ಸಚಿವ ಬಿರೇಂದರ್ ಸಿಂಗ್ರನ್ನು ಕೂಡಾ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಪಟ್ಟಿಯಿಂದ ಹೊರ ಇಡಲಾಗಿದೆ.
ಈ ಹಿಂದೆ ಒ ರಾಜಗೋಪಲ್ ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧವಾಗಿ ಕೇರಳ ವಿಧಾನಸಭೆಯಲ್ಲಿ ನಿರ್ಣಯ ಮಂಡನೆ ಆದ ಸಂದರ್ಭದಲ್ಲಿ ತಾನು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಮೊದಲು ಹೇಳಿಕೊಂಡಿದ್ದರು. ಆದರೆ ಬಳಿಕ ಬಿಜೆಪಿ ನಾಯಕರ ವಿರೋಧ ವ್ಯಕ್ತವಾಗುತ್ತಿದ್ದಂತೆ ಯೂಟರ್ನ್ ಹೊಡೆದ ರಾಜಗೋಪಲ್, "ನಾನು ವಿಧಾನ ಸಭೆಯಲ್ಲಿ ಈ ನಿರ್ಣಯವನ್ನು ವಿರೋಧ ಮಾಡಿದ್ದೇನೆ," ಎಂದು ಹೇಳಿದ್ದರು.
ಇನ್ನು ಇದಕ್ಕೂ ಮುನ್ನ, "ಕೇರಳದಲ್ಲಿ ಸಾಕ್ಷರತೆ ಪ್ರಮಾಣ ಶೇಕಡ 90 ರಷ್ಟು ಇದೆ. ಆದ್ದರಿಂದ ಕೇರಳದಲ್ಲಿ ಬಿಜೆಪಿಗೆ ಜಯ ಸಾಧಿಸಲು ಆಗುವುದಿಲ್ಲ," ಎಂದು ಹೇಳುವ ಮೂಲಕ ಪಕ್ಷದ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು. "ಕೇರಳವು ಬೇರೆ ಎಲ್ಲಾ ರಾಜ್ಯಗಳಿಗಿಂತ ಭಿನ್ನವಾದ ರಾಜ್ಯ. ಇಲ್ಲಿ ಬಿಜೆಪಿಗೆ ಮುಖ್ಯ ಸವಾಲು ಇಲ್ಲಿನ ಜನರು ಉತ್ತಮ ಶಿಕ್ಷಣವನ್ನು ಪಡೆದಿರುವುದು. ಅವರು ಯಾವುದೇ ವಿಚಾರದಲ್ಲಿ ಆಲೋಚನೆ ಮಾಡಿ ನಿರ್ಧಾರ ಕೈಗೊಳ್ಳುತ್ತಾರೆ. ಚರ್ಚೆ ನಡೆಸುತ್ತಾರೆ. ಇದು ಬಿಜೆಪಿಗೆ ಇಲ್ಲಿ ಗೆಲುವು ಸಾಧಿಸಲು ಅಡ್ಡಿಯಾಗಿದೆ," ಎಂದಿದ್ದರು.
(ಒನ್ಇಂಡಿಯಾ ಸುದ್ದಿ)