ಮೆಟ್ರೊ ಮ್ಯಾನ್ ಕೇರಳದ ರಾಜಕೀಯ ಬದಲಾಯಿಸುತ್ತಾರೆ; ಮೋದಿ
ತಿರುವನಂತಪುರಂ, ಏಪ್ರಿಲ್ 2: ಕೇರಳದ ಜನರು ಬಿಜೆಪಿಯನ್ನು ಅಧಿಕಾರಕ್ಕೆ ತರಲು ಸಿದ್ಧರಾಗಿದ್ದಾರೆ. ಕೇರಳದ ರಾಜಕೀಯವನ್ನು ಮೆಟ್ರೊ ಮ್ಯಾನ್ ಇ ಶ್ರೀಧರನ್ ಅವರು ಬದಲಾಯಿಸಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಪುನರುಚ್ಚರಿಸಿದ್ದಾರೆ.
ಶುಕ್ರವಾರ ಕೇರಳದ ಪತನಂತಿಟ್ಟದಲ್ಲಿ ಚುನಾವಣಾ ಸಮಾವೇಶದಲ್ಲಿ ಸ್ವಾಮಿಯೇ ಶರಣಂ ಅಯ್ಯಪ್ಪ ಎಂದು ಮಾತು ಆರಂಭಿಸಿದ ನರೇಂದ್ರ ಮೋದಿ, ಇಲ್ಲಿನ ದೇವಾಲಯಗಳ ಹೆಸರುಗಳನ್ನು ಹೇಳಿ, ಕವಿ ಪಂಡಲಂ ಕೇರಳ ವರ್ಮಾ ಅವರನ್ನು ನೆನಪಿಸಿಕೊಂಡರು.
ಅಯ್ಯಪ್ಪನ ಭಕ್ತರು ಹೂವಿಗೆ ಅರ್ಹರು, ಲಾಠಿಗಲ್ಲ; ಮೋದಿ
ಕೇರಳ ಸಾಕಷ್ಟು ಬದಲಾಗಿದೆ. ಅದಕ್ಕೆ ಇಲ್ಲಿ ಸೇರಿರುವ ಜನರೇ ಸಾಕ್ಷಿ. ದೆಹಲಿಯಲ್ಲಿನ ರಾಜಕೀಯ ವಿಶ್ಲೇಷಕರು ಕೇರಳದ ಬದಲಾವಣೆಯನ್ನು ಅರ್ಥೈಸಿಕೊಂಡಿಲ್ಲ. ಇದು ಸ್ವಾಮಿ ಅಯ್ಯಪ್ಪನ ಭೂಮಿ. ಈ ಆಧ್ಯಾತ್ಮಿಕ ಸ್ಥಳಕ್ಕೆ ಬಂದಿರುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ ಎಂದರು.
"ಎಲ್ಡಿಎಫ್ ಯುಡಿಎಫ್ ಆಡಳಿತವನ್ನು ಜನ ತಿರಸ್ಕರಿಸುತ್ತಾರೆ. ಬಿಜೆಪಿಯ ಅಭಿವೃದ್ಧಿ ಕಾರ್ಯಸೂಚಿಗಳನ್ನು ಮೆಚ್ಚಿಕೊಂಡಿದ್ದಾರೆ. ಕೇರಳ ಜನರು ಬಿಜೆಪಿಯನ್ನು ಅಧಿಕಾರಕ್ಕೆ ತರಲು ಸಿದ್ಧರಿದ್ದಾರೆ" ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಕೇರಳದಂಥ ಪವಿತ್ರ ಸ್ಥಳವನ್ನು ಇಲ್ಲಿನ ರಾಜಕೀಯ ಪಕ್ಷಗಳು ಹಾಳು ಮಾಡುತ್ತಿವೆ. ಎಡಪಕ್ಷ ಸಿದ್ಧಾಂತ ದೇಶದ ಸಂಸ್ಕೃತಿಯನ್ನು ನಾಶ ಮಾಡಲು ಸಾಧ್ಯವಿಲ್ಲ. ಎಲ್ಡಿಎಫ್ ಹಾಗೂ ಯುಡಿಎಫ್ ಇಲ್ಲಿ ಏಳು ಪಾಪಗಳನ್ನು ಮಾಡಿವೆ ಎಂದು ಹಲವು ಹಗರಣಗಳ ಕುರಿತು ಮಾತನಾಡಿದರು.
ಕೇರಳದ 140 ಕ್ಷೇತ್ರಗಳಿಗೆ ಏಪ್ರಿಲ್ 6ರಂದು ಚುನಾವಣೆ ನಡೆಯಲಿದ್ದು, ಮೇ 2ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.