ಕೇರಳ ಚುನಾವಣೆ: ಬಿಜೆಪಿ ಸೇರಲಿರುವ ''ಮೆಟ್ರೋ ಮ್ಯಾನ್ '' ಶ್ರೀಧರನ್
ತಿರುವನಂತಪುರಂ, ಫೆಬ್ರವರಿ 18: ಮೆಟ್ರೋ ಮ್ಯಾನ್ ಎಂದೇ ಖ್ಯಾತರಾಗಿರುವ ಇ ಶ್ರೀಧರನ್ ಅವರು ಭಾರತೀಯ ಜನತಾ ಪಕ್ಷ(ಬಿಜೆಪಿ) ಸೇರಲು ಮುಂದಾಗಿದ್ದಾರೆ. ಮುಂಬರುವ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದಾರೆ ಎಂಬ ಸುದ್ದಿ ಬಂದಿದೆ.
2011ರಲ್ಲಿ ದೆಹಲಿ ಮೆಟ್ರೋ ರೈಲು ಮುಖ್ಯಸ್ಥರಾಗಿ ನಿವೃತ್ತರಾಗುವುದಕ್ಕೂ ಮುನ್ನ ದೆಹಲಿ ಸೇರಿದಂತೆ ಜೈಪುರ, ಲಕ್ನೋ ಹಾಗೂ ಕೊಚ್ಚಿಯಲ್ಲಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸಿದ್ದರು.
ಕೇರಳದಲ್ಲಿ ಭಾನುವಾರ(ಫೆ.21)ದಂದು ನಡೆಯಲಿರುವ ವಿಜಯ್ ಯಾತ್ರೆಯಲ್ಲಿ ಪಾಲ್ಗೊಳ್ಳಲಿರುವ ಶ್ರೀಧರನ್ ಅವರು ಅಧಿಕೃತವಾಗಿ ಕೇಸರಿ ಪಡೆ ಸೇರಲಿದ್ದಾರೆ. 88 ವರ್ಷ ವಯಸ್ಸಿನ ಶ್ರೀಧರನ್ ಅವರಿಗೆ ಭಾರತ ಸರ್ಕಾರದಿಂದ 2001ರಲ್ಲಿ ಪದ್ಮಶ್ರೀ, 2008ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಇ ಶ್ರೀಧರನ್ ಕಿರು ಪರಿಚಯ: 1932ರಲ್ಲಿ ಆಗಿನ ಬ್ರಿಟಿಷರ ಆಳ್ವಿಕೆಯಲ್ಲಿ ಮಲಬಾರ್ ಜಿಲ್ಲೆಯ ಕರುಕಪುತ್ತೂರಿನಲ್ಲಿ ಜನಿಸಿದರು. ಪಾಲಕ್ಕಾಡ್ ನ ವಿಕ್ಟೋರಿಯಾ ಕಾಲೇಜು ಹಾಗ್ ಆಂಧ್ರದ ಕಾಕಿನಾಡದಲ್ಲಿ ಎಂಜಿನಿಯರಿಂಗ್ ಮುಗಿಸಿದ ಅವರು, ಭಾರತೀಯ ಎಂಜಿನಿಯರಿಂಗ್ ಸೇವೆಗೆ ಆಯ್ಕೆಯಾದರು.
ಕೋಲ್ಕತ್ತ ಮೆಟ್ರೋದ ಡೆಪ್ಯೂಟಿ ಚೀಫ್ ಎಂಜಿನಿಯರ್ ಆಗಿ 1970ರಲ್ಲಿ ನೇಮಕವಾದರು. ಡಿಸೈನ್ ಹಾಗೂ ಅನುಷ್ಠಾನದ ಜವಾಬ್ದಾರಿ ವಹಿಸಿಕೊಂಡಿದ್ದ ಅವರು, ಆ ಯೋಜನೆ 1979ರಲ್ಲಿ ಪೂರ್ಣಗೊಳಿಸಿದರು. ಆ ನಂತರ ಕೊಚ್ಚಿ ಶಿಪ್ ಯಾರ್ಡ್ ನ ನಿರ್ದೇಶಕರನ್ನಾಗಿ ಮಾಡಲಾಯಿತು. ಅವರ ನಾಯಕತ್ವದಲ್ಲೇ ಶಿಪ್ ಯಾರ್ಡ್ ನಲ್ಲಿ ಮೊದಲು ಹಡಗು ನಿರ್ಮಾಣವಾಯಿತು.
ಅವರ ನಿವೃತ್ತಿ ನಂತರವೂ ಆಗಿನ ರೈಲ್ವೆ ಸಚಿವ ಜಾರ್ಜ್ ಫರ್ನಾಂಡಿಸ್ ಸೇವೆ ವಿಸ್ತರಣೆ ಮಾಡಿದ್ದರು.ಕೊಂಕಣ್ ರೈಲ್ವೆಯ ಜನರಲ್ ಮ್ಯಾನೇಜರ್ ಮಾಡಲಾಯಿತು. ಅಲ್ಲಿ ಹಲವು ಯೋಜನೆಗಳನ್ನು ಶ್ರೀಧರನ್ ಕೈಗೆತ್ತಿಕೊಂಡರು. ರಾಷ್ಟ್ರಪತಿ ಸ್ಥಾನಕ್ಕೂ ಶ್ರೀಧರನ್ ಹೆಸರು ಕೇಳಿ ಬಂದಿತ್ತು.