'ಮೆಟ್ರೋ ಮ್ಯಾನ್' ಶ್ರೀಧರನ್ ಕೇರಳ ಬಿಜೆಪಿ ಸಿಎಂ ಅಭ್ಯರ್ಥಿ
ತಿರುವನಂತಪುರಂ, ಮಾರ್ಚ್ 4: ಕೇರಳ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಾಗ ಇತ್ತೀಚೆಗಷ್ಟೇ ಬಿಜೆಪಿ ಸೇರ್ಪಡೆಯಾಗಿದ್ದ 'ಮೆಟ್ರೋ ಮ್ಯಾನ್' ಖ್ಯಾತಿಯ ಇ. ಶ್ರೀಧರನ್ ಅವರೇ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿರಲಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಕೆ. ಸುರೇಂದ್ರನ್ ಗುರುವಾರ ತಿಳಿಸಿದ್ದಾರೆ.
'ಕುಸಿದ ಸೇತುವೆಯು ಕೇರಳದಲ್ಲಿನ ಎಲ್ಡಿಎಫ್-ಯುಡಿಎಫ್ ಆಡಳಿತದ ಪ್ರತಿಫಲನವಾಗಿದೆ. ಮೆಟ್ರೋ ಮ್ಯಾನ್ ಇ. ಶ್ರೀಧರನ್ ಅವರು ಯಾವುದೇ ಭ್ರಷ್ಟಾಚಾರವಿಲ್ಲದೆ ಐದು ತಿಂಗಳಲ್ಲಿ ಸೇತುವೆ ನಿರ್ಮಿಸಿದ್ದಾರೆ. ಇ. ಶ್ರೀಧರನ್ ಅವರನ್ನು ಸಿಎಂ ಅಭ್ಯರ್ಥಿಯನ್ನಾಗಿ ಘೋಷಿಸುವಂತೆ ಪಕ್ಷದ ನಾಯಕತ್ವಕ್ಕೆ ನಾವು ಮನವಿ ಮಾಡಿದ್ದೇವೆ' ಎಂದು ಅವರು ಹೇಳಿದ್ದಾರೆ.
ಕೇರಳ ಬಿಜೆಪಿಯು ಏಪ್ರಿಲ್ 16ರಂದು ನಡೆಯುವ ವಿಧಾನಸಭೆ ಚುನಾವಣೆಗಾಗಿ 16 ಸದಸ್ಯರ ರಾಜ್ಯ ಚುನಾವಣಾ ಸಮಿತಿಯನ್ನು ಬುಧವಾರ ರಚಿಸಿದೆ. 'ಮೆಟ್ರೋ ಮ್ಯಾನ್' ಇ. ಶ್ರೀಧರನ್ ಅವರು ಈ ಸಮಿತಿಯ ಭಾಗವಾಗಿದ್ದಾರೆ.
ರಾಜೀನಾಮೆ ಬಳಿಕ ನಾಮಪತ್ರ
ದೆಹಲಿ ಮೆಟ್ರೋ ರೈಲು ನಿಗಮದ (ಡಿಎಂಆರ್ಸಿ) ಸಮವಸ್ತ್ರದಲ್ಲಿ ಗುರುವಾರ ತಮ್ಮ ಕೊನೆಯ ದಿನವಾಗಲಿದೆ. ಡಿಎಂಆರ್ಸಿಗೆ ರಾಜೀನಾಮೆ ನೀಡಿದ ಬಳಿಕವಷ್ಟೇ ಚುನಾವಣೆಗೆ ತಮ್ಮ ನಾಮಪತ್ರ ಸಲ್ಲಿಸುವುದಾಗಿ ಶ್ರೀಧರನ್ ತಿಳಿಸಿದ್ದಾರೆ.
ಯಾವ ಹುದ್ದೆಯಲ್ಲಿದ್ದರೂ ನೋಡುತ್ತೇನೆ
ಪಳರಿವಟ್ಟಮ್ ಮೇಲ್ಸೇತುವೆಯ ಪುನರ್ ನಿರ್ಮಾಣ ಕಾರ್ಯದ ಅಂತಿಮ ಸುತ್ತಿನ ಪರಿಶೀಲನೆ ಮುಗಿಸಿದ ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಶ್ರೀಧರನ್, 'ಶಾಸಕನಾಗಿರಲಿ ಅಥವಾ ಬೇರೆ ಯಾವುದೇ ಹುದ್ದೆಯಲ್ಲಿರಲಿ, ಒಂದು ಕೆಲಸ ನಡೆಯುತ್ತಿರುವಾಗ ನಾನು ಅದನ್ನು ಖಂಡಿತವಾಗಿಯೂ ಪರಿಶೀಲಿಸಲೇಬೇಕು. ಡಿಎಂಆರ್ಸಿಗೆ ರಾಜೀನಾಮೆ ನೀಡಿದ ಬಳಿಕವಷ್ಟೇ ನಾನು ನಾಮಪತ್ರ ಸಲ್ಲಿಸುತ್ತೇನೆ' ಎಂದರು.
ರಾಜಕೀಯ ಕಿತ್ತಾಟ
ಪಳರಿವಟ್ಟಂ ಮೇಲ್ಸೇತುವೆ ಯೋಜನೆಗೆ ಇ. ಶ್ರೀಧರನ್ ಅವರನ್ನು ಮುಖ್ಯ ಸಲಹೆಗಾರರನ್ನಾಗಿ ರಾಜ್ಯ ಸರ್ಕಾರ ನೇಮಿಸಿತ್ತು. ಇದು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿತ್ತು. ಶ್ರೀಧರನ್ ಅವರು ಈಗ ಬಿಜೆಪಿಗೆ ಸೇರ್ಪಡೆಯಾಗಿದ್ದು, ಈ ಯೋಜನೆಯಿಂದ ಅವರಿಗೆ ಅನುಕೂಲವಾಗಲಿದೆ ಎಂಬ ಆರೋಪ ಕೇಳಿಬಂದಿದೆ.
ಬಿಜೆಪಿಗೆ ಭಾರಿ ಬಲ ಸಿಗಲಿದೆ
ತಮ್ಮನ್ನು ಮುಖ್ಯಮಂತ್ರಿ ಅಭ್ಯರ್ಥಿಯೆಂದು ಘೋಷಿಸಿದರೆ ಅದು ದೊಡ್ಡ ಬೆಳವಣಿಗೆಯಾಗಲಿದೆ. ತಮಗೆ ಕೇರಳ ಮುಖ್ಯಮಂತ್ರಿಯಾಗುವ ಬಯಕೆ ಇದೆ ಎಂದು ಶ್ರೀಧರನ್ ತಿಳಿಸಿದ್ದಾರೆ. 'ನನಗೆ ರಾಜ್ಯಪಾಲ ಹುದ್ದೆಯ ಆಹ್ವಾನ ನೀಡಿದರೂ, ರಾಜ್ಯಪಾಲನಾಗುವ ಉದ್ದೇಶ ಇಲ್ಲ. ಆದರೆ ಮುಖ್ಯಮಂತ್ರಿ ಹುದ್ದೆಯನ್ನು ಪಕ್ಷ ನಿರ್ಧರಿಸಬೇಕು. ನನ್ನನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಬಿಂಬಿಸಿದರೆ ಕೇರಳದಲ್ಲಿನ ಎರಡೂ ಪಡೆಗಳಲ್ಲಿನ ದೊಡ್ಡ ಸಂಖ್ಯೆಯ ಅಸಂತುಷ್ಟರ ಗುಂಪು ನಮ್ಮ ಜತೆ ಬರಲಿದೆ. ಇದರಿಂದ ಬಿಜೆಪಿಗೆ ಭಾರಿ ಬೆಂಬಲ ಸಿಗಲಿದೆ. ಇದರೊಂದಿಗೆ ಬಿಜೆಪಿ ಸಾಕಷ್ಟು ಸಂಖ್ಯೆಯ ಸೀಟುಗಳನ್ನು ಪಡೆದು ಅಧಿಕಾರಕ್ಕೆ ಬರಬಹುದು' ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.