ತಬ್ಲಿಘಿ ಜಮಾತ್ ಬೆನ್ನಲ್ಲೇ ಕೇರಳದ ಚರ್ಚ್ ನಲ್ಲಿ ಸಾಮೂಹಿಕ ಪ್ರಾರ್ಥನೆ
ತಿರುವನಂತಪುರಂ, ಏಪ್ರಿಲ್.15: ಕೊರೊನಾ ವೈರಸ್ ಸೋಂಕು ಹರಡುವಿಕೆಗೆ ಕಡಿವಾಣ ಹಾಕುವುದಕ್ಕಾಗಿ ಭಾರತ ಲಾಕ್ ಡೌನ್ ಮುಂದುವರಿಸಲಾಗಿದೆ. ಇದರ ನಡುವೆಯೂ ಕೇರಳದ ಚರ್ಚ್ ನಲ್ಲಿ ಸಾಮೂಹಿಕ ಧಾರ್ಮಿಕ ಕಾರ್ಯಕ್ರಮ ನಡೆದಿದೆ.
ಕೇರಳದ ಕೊಚ್ಚಿ ಕರಾವಳಿ ತೀರದಲ್ಲಿ ಇರುವ ಸ್ಟೆಲ್ಲಾ ಮಾರೀಸ್ ಚರ್ಚ್ ನಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಆದೇಶವನ್ನು ಧಿಕ್ಕರಿಸಿ ಧಾರ್ಮಿಕ ಕಾರ್ಯಕ್ರಮ ನಡೆಸಿದ ಪಾದ್ರಿ ಹಾಗೂ ಇತರೆ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಲಾಕ್ಡೌನ್: ಖಾಸಗಿ ವಾಹನ ಸವಾರರಿಗೆ ಕೇಂದ್ರದ ಮಾರ್ಗಸೂಚಿ
ಸ್ಟೆಲ್ಲಾ ಮಾರೀಸ್ ಚರ್ಚ್ ಪಾದ್ರಿ ಅಗಸ್ಟಿನ್ ಪಲಯಿಲ್ ಸೇರಿದಂತೆ ಏಳು ಜನರನ್ನು ಬಂಧಿಸಿದ ಪೊಲೀಸರು ನಂತರದಲ್ಲೇ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಆದರೆ ಕೊರೊನಾ ವೈರಸ್ ಎಂಬ ಮಹಾಮಾರಿ ದೇಶವನ್ನೇ ಕಿತ್ತು ತಿನ್ನುತ್ತಿರುವ ಸಂದಿಗ್ಧ ಪರಿಸ್ಥಿತಿಯಲ್ಲಿ ಪದೇ ಪದೆ ಇಂಥ ಘಟನೆಗಳಿಂದ ಅಪಾಯಕ್ಕೆ ದಾರಿ ಮಾಡಿಕೊಟ್ಟಂತೆ ಆಗುತ್ತಿದೆ.
ಕೇರಳದಲ್ಲೇನೂ ಕಡಿಮೆಯಿಲ್ಲ ಕೊರೊನಾ ಸೋಂಕಿತರ ಸಂಖ್ಯೆ:
ಭಾರತದ ಮಟ್ಟಿಗೆ ನೋಡುವುದಾದರೆ ಕೇರಳದಲ್ಲೇ ಮೊದಲು ವಿದೇಶದಿಂದ ಆಗಮಿಸಿದ ಮೂವರಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿತ್ತು. ನಂತರದಲ್ಲಿ ಎಲ್ಲರೂ ಗುಣಮುಖರಾದರೇನೋ ನಿಜ. ಆದರೆ ಇಂದಿಗೂ ಕೇರಳದಲ್ಲಿ 386 ಮಂದಿ ಕೊರೊನಾ ವೈರಸ್ ಸೋಂಕಿತರಿದ್ದು, ಇಬ್ಬರು ಮಾರಕ ರೋಗಕ್ಕೆ ಪ್ರಾಣ ಬಿಟ್ಟಿದ್ದಾರೆ.