ಕೇರಳ: ಹೆದ್ದಾರಿ ಅಗಲೀಕರಣಕ್ಕಾಗಿ ಮರ ಕತ್ತರಿಸಿದ್ದರಿಂದ ಪಕ್ಷಿಗಳ ಸಾವು- ಗುತ್ತಿಗೆದಾರರ ವಿರುದ್ಧ ಕೇಸ್
ತಿರುವನಂತಪುರಂ ಸೆಪ್ಟೆಂಬರ್ 2: ಕೇರಳದ NH-66 ಅಗಲೀಕರಣದ ವೇಳೆ ಗುತ್ತಿಗೆದಾರರು ಮರ ಕಡಿದಿದ್ದರಿಂದ ಹಲವಾರು ನೀರುಕಾಗೆಗಳ ಮರಿಗಳು ಸಾವನ್ನಪ್ಪಿದ್ದು ಘಟನೆಯ ಕುರಿತು ಅರಣ್ಯ ಸಚಿವ ಎಕೆ ಸಸೀಂದ್ರನ್ ತನಿಖೆಗೆ ಆದೇಶಿಸಿದ್ದಾರೆ. ಮಲಪ್ಪುರಂನಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕಾಗಿ ಮರ ಕಡಿದ ಪರಿಣಾಮ ಹಲವಾರು ನೀರುಕಾಗೆಗಳ ಮರಿಗಳು ಸಾವನ್ನಪ್ಪಿದ್ದು ಎನ್ಎಚ್ ಅಗಲೀಕರಣ ಕಾಮಗಾರಿ ಗುತ್ತಿಗೆದಾರನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ದಶಕಗಳಷ್ಟು ಹಳೆಯದಾದ ಮರವನ್ನು ಕಡೆಯಲಾಗಿದೆ. ಇದರಿಂದ ಹಲವಾರು ನೀರುಕಾಗೆಗಳ ಮರಿಗಳು ಹೆದ್ದಾರಿಯಲ್ಲಿ ಬಿದ್ದು ವಾಹನಗಳು ಅವುಗಳ ಮೇಲೆ ಹರಿದು ಸಾವನ್ನಪ್ಪಿವೆ. ಇದಕ್ಕೆ ಕಾರಣವಾದ ಗುತ್ತಿಗೆದಾರನ ವಿರುದ್ಧ ಭಾರತೀಯ ವನ್ಯಜೀವಿ (ರಕ್ಷಣೆ) ಕಾಯಿದೆಯ ಶೆಡ್ಯೂಲ್ IV ವರ್ಗದಡಿ ಪ್ರಕರಣ ದಾಖಲಿಸಲಾಗಿದೆ. ಗುತ್ತಿಗೆದಾರ ಹಾಗೂ ಜಿಸಿಬಿ ಚಾಲಕನನ್ನು ಬಂಧಿಸಲಾಗಿದೆ.
ವೈರಲ್ ವಿಡಿಯೋದಲ್ಲಿ, ಕಾರ್ಮಿಕರು ಹುಣಸೆ ಮರವನ್ನು ಮಣ್ಣು ಸಮತಟ್ಟು ಮಾಡುವ ಮೂವರ್ ಬಳಸಿ ಕೆಳಗೆ ಎಳೆದಾಗ ಹಲವಾರು ಪಕ್ಷಿಗಳು, ವಿಶೇಷವಾಗಿ ನೀರುಕಾಗೆಗಳು ಹಾರಿಹೋಗುವುದನ್ನು ಕಾಣಬಹುದು. ಹಾರಲು ಸಾಧ್ಯವಾಗದೆ ಅಪಾರ ಸಂಖ್ಯೆಯ ಮರಿಗಳು ರಸ್ತೆಗೆ ಬಿದ್ದು ಸಾವನ್ನಪ್ಪಿವೆ. ಅವುಗಳಲ್ಲಿ ಬಿದ್ದ ರಭಸಕ್ಕೆ ಪ್ರಾಣ ಕಳೆದುಕೊಂಡರೆ ಇನ್ನೂ ಕೆಲವು ವಾಹನಗಳು ಹರಿದು ಪ್ರಾಣಬಿಟ್ಟಿವೆ.
Road widening kills.#roadkills pic.twitter.com/ofQarijATu
— Milind Pariwakam 🇮🇳 (@MilindPariwakam) September 1, 2022
ನೀರುಕಾಗೆಗಳು (ಕಾರ್ಮೊರೆಂಟ್) ಗೂಡುಕಟ್ಟುವ ಸಮಯದಲ್ಲಿ ಮರಗಳನ್ನು ಕಡಿಯುವುದನ್ನು ವಿರೋಧಿಸಿ ಪರಿಸರವಾದಿಗಳ ತೀವ್ರ ಪ್ರತಿಭಟನೆಯ ನಡುವೆಯೂ ಮಲಪ್ಪುರಂನ ವಿಕೆಪಿ ಅಂಗಡಿ ಬಳಿ ಈ ಘಟನೆ ನಡೆದಿದೆ. "ಕೆಲವೇ ವಾರಗಳ ಅವಧಿಯಲ್ಲಿ ಇದು ನಾಲ್ಕನೇ ಘಟನೆಯಾಗಿದೆ. ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಇದೇ ರೀತಿಯ ವಿಡಿಯೊಗಳು ಕಾಣಿಸಿಕೊಂಡಾಗ, ಪರಿಸರವಾದಿಗಳು ಅಧಿಕಾರಿಗಳಿಗೆ ಮರಕಡಿಯುವುದನ್ನು ಒಂದು ತಿಂಗಳ ಕಾಲ ತಡೆಹಿಡಿಯಲು ವಿನಂತಿಸಿದ್ದರು. ಈ ಪಕ್ಷಿಗಳು ಸಾಮಾನ್ಯವಾಗಿ ತಮ್ಮ ಗೂಡುಕಟ್ಟುವ ಅವಧಿ ಮುಗಿದ ನಂತರ ಮರಗಳನ್ನು ತ್ಯಜಿಸುತ್ತವೆ. ಈ ವಿನಂತಿಯ ನಡುವೆಯೂ ಮರ ಕಡೆಯಲಾಗಿದೆ. ದುರದೃಷ್ಟಕರ ಅಂಶವೆಂದರೆ ಅವರು ಮರಿಗಳನ್ನು ನಾಶಪಡಿಸಿದಾಗ ಇಡೀ ಪಕ್ಷಿಗಳ ಪೀಳಿಗೆಯನ್ನೇ ನಾಶಪಡಿಸಿದ್ದಾರೆ" ಎಂದು ತ್ರಿಶೂರ್ ಮೂಲದ ಪಕ್ಷಿ ವೀಕ್ಷಕ ಮನೋಜ್ ಕರಿಂಗಮಡತಿಲ್ ಹೇಳಿದರು.
ಈ ಪ್ರದೇಶದಲ್ಲಿ ಇನ್ನೂ ಮೂರು ಮರಗಳಿದ್ದು, ಉಳಿದ ಪಕ್ಷಿಗಳ ರಕ್ಷಣೆಗೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎನ್ನುತ್ತಾರೆ ಪಕ್ಷಿ ವೀಕ್ಷಕರು. ಘಟನೆಯನ್ನು ಖಂಡಿಸಿರುವ ಅರಣ್ಯ ಸಚಿವ ಎ ಕೆ ಸಸೀಂದ್ರನ್, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಜೊತೆಗೆ ಡಿಎಫ್ಒ ಸ್ಥಳ ಪರಿಶೀಲನೆ ನಡೆಸಲಿದ್ದಾರೆ ಎಂದರು.