ಪತ್ನಿ ಇಷ್ಟಕ್ಕೆ ವಿರುದ್ಧ ಲೈಂಗಿಕಕ್ರಿಯೆ ನಡೆಸುವುದು ಅತ್ಯಾಚಾರ; ವಿಚ್ಛೇದನ ಪಡೆಯಲು ಉತ್ತಮ ಕಾರಣ; ಕೇರಳ ಹೈಕೋರ್ಟ್
ತಿರುವನಂತಪುರಂ, ಆಗಸ್ಟ್ 06: ಪತ್ನಿಯ ಇಷ್ಟಕ್ಕೆ ವಿರುದ್ಧವಾಗಿ ಲೈಂಗಿಕ ಕ್ರಿಯೆ ನಡೆಸುವುದು ಕೂಡ ಅತ್ಯಾಚಾರವೇ ಎಂದು ಹೇಳಿರುವ ಕೇರಳ ಹೈಕೋರ್ಟ್, ಈ "ವೈವಾಹಿಕ ಅತ್ಯಾಚಾರ" ವಿಚ್ಛೇದನ ಪಡೆಯಲು ಸೂಕ್ತ ಕಾರಣವೂ ಹೌದು ಎಂದು ಅಭಿಪ್ರಾಯಪಟ್ಟಿದೆ.
ದಶಕದಿಂದ ನಡೆಯುತ್ತಿರುವ ಕುಟುಂಬ ಕಲಹ ಸಂಬಂಧ ಅರ್ಜಿಯೊಂದರ ವಿಚಾರಣೆ ಸಂದರ್ಭ "ವೈವಾಹಿಕ ಅತ್ಯಾಚಾರ" ವಿಷಯವನ್ನು ಪ್ರಸ್ತಾಪಿಸಿರುವ ಹೈಕೋರ್ಟ್, ಅತ್ಯಾಚಾರಕ್ಕೆ ಸಂಬಂಧಿಸಿದ ಕಾನೂನಿನ ವ್ಯಾಪ್ತಿ ವಿಸ್ತರಿಸುವಂಥ ತೀರ್ಪು ನೀಡಿದೆ.
ಅತ್ಯಾಚಾರಿಯನ್ನೇ ಮದುವೆಯಾಗುವುದಾಗಿ ಮನವಿ: ಸಂತ್ರಸ್ತೆಯ ಅರ್ಜಿ ವಜಾ ಮಾಡಿದ ಸುಪ್ರೀಂಕೋರ್ಟ್
"ಪತ್ನಿ ತನಗೆ ಸೇರಿದ ಸ್ವತ್ತು, ಆಕೆಯ ದೇಹವು ತನಗೆ ಸೇರಿದ್ದು, ನಾನು ಹೇಗೆ ಬೇಕಾದರೂ ಬಳಸಿಕೊಳ್ಳಬಹುದು ಎಂಬ ಮನೋಭಾವವಿದ್ದಾಗ ವೈವಾಹಿಕ ಅತ್ಯಾಚಾರ ನಡೆಯುತ್ತದೆ" ಎಂದು ನ್ಯಾಯಾಲಯ ವಿವರಿಸಿದೆ. "ಆಧುನಿಕ ಸಾಮಾಜಿಕ ನ್ಯಾಯಪದ್ಧತಿಯಲ್ಲಿ ಇಂಥ ಕಲ್ಪನೆಗೆ ಆಸ್ಪದವಿಲ್ಲ" ಎಂದು ನ್ಯಾಯಮೂರ್ತಿ ಎ ಮೊಹಮದ್ ಮುಸ್ತಾಕ್ ಹಾಗೂ ಕೌಸರ್ ಎಡಪ್ಪಗತ್ ಅವರನ್ನೊಳಗೊಂಡ ವಿಭಾಗೀಯ ಪೀಠ ಹೇಳಿರುವುದಾಗಿ "ಲೈವ್ ಲಾ" ವರದಿ ಮಾಡಿದೆ.
"ಪತ್ನಿಯ ದೇಹವನ್ನು ಸ್ವತ್ತು ಎಂದು ಪರಿಗಣಿಸುವುದು ಹಾಗೂ ಆಕೆಯ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಕ್ರಿಯೆ ನಡೆಸುವುದು ವೈವಾಹಿಕ ಅತ್ಯಾಚಾರವಲ್ಲದೇ ಮತ್ತೇನೂ ಅಲ್ಲ. ಭಾರತೀಯ ಕಾನೂನು ವೈವಾಹಿಕ ಅತ್ಯಾಚಾರವನ್ನು ಗುರುತಿಸುವುದಿಲ್ಲ ಎಂಬ ಮಾತ್ರಕ್ಕೆ, ನ್ಯಾಯಾಲಯ ವಿಚ್ಛೇದನ ನೀಡಲು ಇದನ್ನು ಕ್ರೂರ ಕಾರಣ ಎಂದು ಪರಿಗಣಿಸುವುದಿಲ್ಲ ಎಂದರ್ಥವಲ್ಲ" ಎಂದು ವಿವರಣೆ ನೀಡಿದೆ.
ವೈವಾಹಿಕ ಅತ್ಯಾಚಾರವನ್ನು ವಿಚ್ಛೇದನ ಪಡೆಯಲು ಸೂಕ್ತ ಕಾರಣವಾಗಿ ಪರಿಗಣಿಸಬಹುದು ಎಂದು ತಿಳಿಸಿದೆ.
'ಮಹಿಳೆ ಯಾವುದೇ ಬಟ್ಟೆ ಧರಿಸಿದರೂ ಅತ್ಯಾಚಾರಕ್ಕೆ ಆರೋಪಿಯೇ ಹೊಣೆ': ಇಮ್ರಾನ್ ಯು ಟರ್ನ್
ಈಚೆಗಷ್ಟೆ ಇಂಥ ಒಂದು ಪ್ರಕರಣದ ವಿಚಾರಣೆಯನ್ನು ಕೇರಳ ಹೈಕೋರ್ಟ್ ನಡೆಸಿತ್ತು. ಬಾಲಕಿ ಮೇಲೆ ದುರುದ್ದೇಶಪೂರಿತ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿದ್ದ ವ್ಯಕ್ತಿ ಮೇಲ್ಮನವಿ ಸಲ್ಲಿಸಿದ್ದು, ಆ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಗಮನೀಯ ತೀರ್ಪನ್ನು ನೀಡಿತ್ತು.
ಸಂತ್ರಸ್ತೆಯೊಂದಿಗೆ ಆರೋಪಿ ಸಂಭೋಗ ನಡೆಸಿದರಷ್ಟೇ ಅತ್ಯಾಚಾರವಲ್ಲ. ಆಕೆಯ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಚಟುವಟಿಕೆ ನಡೆಸುವುದು ಅತ್ಯಾಚಾರವೇ ಎಂದು ಹೇಳಿತ್ತು. ಮಹಿಳೆಯ ಮೇಲೆ ನಡೆಸುವ ಅಸಹಜ ಲೈಂಗಿಕ ಕ್ರಿಯೆಯೂ ಅತ್ಯಾಚಾರಕ್ಕೆ ಸಮನಾದುದೇ ಎಂದು ಹೇಳಿತ್ತು. ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು.
ಅತ್ಯಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ಕೂಡ ಶುಕ್ರವಾರ ತೀರ್ಪೊಂದನ್ನು ಪ್ರಕಟಿಸಿದೆ.
ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಕ್ರಿಯೆ ನಡೆಸುವುದು ಕೂಡ ಅತ್ಯಾಚಾರಕ್ಕೆ ಸಮ ಎಂದು ತೀರ್ಪು ನೀಡಿದೆ. ಸುಳ್ಳು ಭರವಸೆ ನೀಡಿ ನಡೆಸುವ ಒಪ್ಪಿತ ಲೈಂಗಿಕ ಕ್ರಿಯೆ ಕೂಡ ಅತ್ಯಾಚಾರವೇ ಎಂದು ಹೇಳಿದೆ.
ಸಮಾಜದಲ್ಲಿ ಈ ರೀತಿಯ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ. ಮದುವೆಯಾಗುವುದಾಗಿ ಭರವಸೆ ನೀಡಿ ಲೈಂಗಿಕ ಕ್ರಿಯೆ ನಡೆಸುವುದು ಪಿಡುಗಿನಂತೆ ಬೆಳೆಯತ್ತಿದೆ. ಆದರೆ ಒಪ್ಪಿತ ಲೈಂಗಿಕ ಕ್ರಿಯೆ ನೆಪವೊಡ್ಡಿ ಆರೋಪಿಗಳು ತಪ್ಪಿಸಿಕೊಳ್ಳುತ್ತಿದ್ದಾರೆ. ಇಂಥ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಲು ಕಠಿಣ ಕಾನೂನು ರೂಪಿಸುವ ಅಗತ್ಯವಿದೆ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ.
ಹೆಣ್ಣುಮಕ್ಕಳನ್ನು ನಂಬಿಸಿ ಅವರ ಮೇಲೆ ವಂಚನೆ ಎಸಗುವ ಪ್ರಕರಣಗಳು ದೇಶದಲ್ಲಿ ಹೆಚ್ಚಾಗಿ ನಡೆಯುತ್ತಿದೆ. ಅಂಥವರು ಕಾನೂನಿನಿಂದ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಬೇಕು. ತಪ್ಪೆಸಗಿದವರಿಗೆ ಸೂಕ್ತ ಶಿಕ್ಷೆ ನೀಡಬೇಕು. ಬೇರೆ ಕಾರಣಗಳನ್ನು ಒಡ್ಡಿ ದೌರ್ಜನ್ಯ ಎಸಗಿದವರು ಕಾನೂನಿನ ಕಣ್ಣಿನಿಂದ ಪಾರಾಗದಂತೆ ನೋಡಿಕೊಳ್ಳಬೇಕು. ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವುದು ಕಾನೂನಿನ ಪ್ರಥಮ ಆದ್ಯತೆ ಎಂದು ಹೇಳಿದೆ.