ಆಪರೇಷನ್ ಅಪಾರ್ಟ್ಮೆಂಟ್: ಏನಿದು ಪ್ರಕರಣ? ಸಂಪೂರ್ಣ ವಿವರ
Recommended Video
ಕೊಚ್ಚಿ, ಜನವರಿ 13: ಕರಾವಳಿ ವಲಯ ನಿಯಂತ್ರಣ ನಿಯಮಗಳನ್ನು ಮೀರಿ ಕೇರಳದ ಮರಡು ಪ್ರದೇಶದಲ್ಲಿನ ಕೆರೆಯ ಸಮೀಪ ಅಕ್ರಮವಾಗಿ ನಿರ್ಮಿಸಲಾಗಿದ್ದ ನಾಲ್ಕು ಬಹುಮಹಡಿ ಐಷಾರಾಮಿ ಅಪಾರ್ಟ್ಮೆಂಟ್ಗಳನ್ನು ಸುಪ್ರೀಂಕೋರ್ಟ್ ಆದೇಶದಂತೆ ನೆಲಸಮ ಮಾಡಲಾಗಿದೆ.
ಶನಿವಾರ ಎರಡು ಕಟ್ಟಡಗಳನ್ನು ಒಳಸ್ಫೋಟದ ಮೂಲಕ ಧರೆಗುರುಳಿಸಿದ್ದ ಅಧಿಕಾರಿಗಳು, ಉಳಿದ ಎರಡು ಕಟ್ಟಡಗಳನ್ನು ಭಾನುವಾರ ಕೆಲವೇ ಸೆಕೆಂಡುಗಳಲ್ಲಿ ನೆಲಕಚ್ಚಿಸಿದರು. 40 ಫ್ಲ್ಯಾಟ್ಗಳಿದ್ದ 17 ಮಹಯ 55 ಮೀಟರ್ ಎತ್ತರದ ಗೋಲ್ಡನ್ ಕಯಲೋರಮ್ ಕೊನೆಯದಾಗಿ ಸ್ಫೋಟಗೊಂಡ ಕಟ್ಟಡವಾಗಿದೆ. ಈ ಕಟ್ಟಡವನ್ನು ಮಧ್ಯಾಹ್ನ 2.30ಕ್ಕೆ ತೆರವುಗೊಳಿಸಲಾಯಿತು. ಈ ಮೂಲಕ 350ಕ್ಕೂ ಹೆಚ್ಚು ಮನೆಗಳಿದ್ದ ನಾಲ್ಕೂ ಕಟ್ಟಡಗಳನ್ನು ತೆರವುಗೊಳಿಸಿದಂತಾಗಿದೆ.
ನೋಡನೋಡುತ್ತಿದ್ದಂತೆಯೇ ಧರೆಗುರುಳಿದ ಎರಡು ಐಷಾರಾಮಿ ಅಪಾರ್ಟ್ಮೆಂಟ್ಗಳು
ನಾಲ್ಕರಲ್ಲಿ ಅತ್ಯಂತ ದೊಡ್ಡದಾದ, 128 ಫ್ಲ್ಯಾಟ್ಗಳನ್ನು ಒಳಗೊಂಡಿದ್ದ 17 ಮಹಡಿ ಎತ್ತರದ ಜೈನ್ ಕೋರಲ್ ಕೋವ್ ಕಟ್ಟಡವನ್ನು 372 ಕೆ.ಜಿ. ತೂಕದ ಸ್ಫೋಟಕ ಬಳಸಿ ಭಾನುವಾರ ಬೆಳಿಗ್ಗೆ ಉರುಳಿಸಲಾಯಿತು. ಬೃಹತ್ ಕಟ್ಟಡಗಳು ಕೆಲವೇ ಸೆಕೆಂಡುಗಳಲ್ಲಿ ಕುಸಿದು, ದೂಳು ಮತ್ತು ಅವಶೇಷಗಳಾಗಿ ಬದಲಾದವು.
ಏಕಾಏಕಿ ಕಟ್ಟಡ ಉರುಳಿಸಿದ್ದರಿಂದ ಭಾರಿ ಪ್ರಮಾಣದ ದೂಳು ಚಿಮ್ಮಿತು. ದೂಳಿನ ಹೊಗೆಯನ್ನು ನಿಯಂತ್ರಿಸಲು ಅಗ್ನಿಶಾಮಕದಳದ ಸಿಬ್ಬಂದಿ ಜಲಫಿರಂಗಿಗಳನ್ನು ಬಳಸಿದರು. ಕಟ್ಟಡ ತೆರವುಗೊಳಿಸುವುದಕ್ಕೂ ಮುನ್ನ ಅಧಿಕಾರಿಗಳು ಕಾರ್ಯಕ್ಕೆ ತೊಂದರೆಯಾಗದಂತೆ ಸಿಆರ್ಪಿಸಿ ಸೆಕ್ಷನ್ 144ರ ಅಡಿ ಪ್ರದೇಶದಲ್ಲಿ ನಿರ್ಬಂಧ ವಿಧಿಸಿದ್ದರು. ಈ ಕಟ್ಟಡಗಳನ್ನು ವಾಸವಿದ್ದ ಎಲ್ಲ ನಿವಾಸಿಗಳನ್ನೂ ಸ್ಥಳಾಂತರ ಮಾಡಲು ಸೂಚಿಸಿದ್ದರು.
ಕಟ್ಟಡ ನಿರ್ಮಾಣಕ್ಕೆ ಅನುಮತಿ
ಮರಡು, ಕೊಚ್ಚಿಯಿಂದ ಕೇವಲ 7 ಕಿ.ಮೀ ದೂರದಲ್ಲಿದೆ. ಇಲ್ಲಿ 1953ರಲ್ಲಿ ಗ್ರಾಮ ಪಂಚಾಯಿತಿ ಆರಂಭವಾಗಿದ್ದರೆ, 2010ರಲ್ಲಿ ಪಾಲಿಕೆಯಾಗಿ ಉನ್ನತೀಕರಣಗೊಂಡಿತು. 2006ರ ಸೆಪ್ಟೆಂಬರ್ನಲ್ಲಿ ಗ್ರಾಮ ಪಂಚಾಯಿತಿಯು ಕೇರಳ ರಾಜ್ಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರದ (KSCZMA) ಕಡ್ಡಾಯ ಅನುಮತಿಯನ್ನು ಪಡೆದುಕೊಳ್ಳದೆಯೇ ಆಲ್ಫಾ ವೆಂಚರ್ಸ್ ಪ್ರೈ. ಲಿ, ಹೋಲಿ ಫೈಥ್ ಬಿಲ್ಡರ್ಸ್ ಆಂಡ್ ಡೆವಲಪರ್ಸ್, ಜೈನ್ ಹೌಸಿಂಗ್ ಆಂಡ್ ಕನ್ಸ್ಟ್ರಕ್ಷನ್ ಮತ್ತು ಕೆ.ವಿ. ಜೋಸ್ ಸಂಸ್ಥೆಗಳಿಗೆ ಒಟ್ಟು ಐದು ಅಪಾರ್ಟ್ಮೆಂಟ್ ಸಂಕೀರ್ಣ ನಿರ್ಮಿಸಲು ಅನುಮತಿ ನೀಡಿತ್ತು. 2010ರಿಂದ ಜನರು ಅಪಾರ್ಟ್ಮೆಂಟ್ಗಳನ್ನ ಖರೀದಿಸಿ ವಾಸಿಸಲು ಆರಂಭಿಸಿದ್ದರು.
ಅನುಮತಿ ಇಲ್ಲದೆ ಕಟ್ಟಡ ನಿರ್ಮಾಣ
ಅನುಮತಿ ನೀಡಿದ ಒಂಬತ್ತು ತಿಂಗಳಿನಲ್ಲಿಯೇ KSCZMA ನಿರ್ದೇಶನದಂತೆ ಗ್ರಾಮ ಪಂಚಾಯಿತಿ, ಕರಾವಳಿ ನಿಯಂತ್ರಣ ವಲಯ ನಿಯಮಗಳನ್ನು ಉಲ್ಲಂಘನೆ ಮಾಡಿರುವುದಕ್ಕೆ ಬಿಲ್ಡರ್ಗಳಿಗೆ ಷೋಕಾಸ್ ನೋಟಿಸ್ ಜಾರಿ ಮಾಡಿತು. ಸಿಆರ್ಝೆಡ್-III ವರ್ಗದಲ್ಲಿನ ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣ ಮಾಡಲು ಯಾವುದೇ ಸ್ಥಳೀಯ ಸಂಸ್ಥೆಗಳು ಅನುಮತಿ ನೀಡುವ ಮುನ್ನ KSCZMA ಅನುಮತಿ ಕಡ್ಡಾಯ.
ಕೇರಳದಂತೆ ಬೆಂಗಳೂರಲ್ಲೂ ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸಬೇಕೆ?
KSCZMA ಕರಾವಳಿ ನಿಯಂತ್ರಣ ವಲಯಕ್ಕೆ ಸಂಬಂಧಿಸಿದ ಪರಿಸರ ವಿಚಾರಗಳನ್ನು ನಿರ್ವಹಿಸುತ್ತದೆ. ಪರಿಸರ ಸೂಕ್ಷ್ಮವಾದ ಸ್ಥಳದಲ್ಲಿ ಈ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ ಎಂಬುದನ್ನು ಅದು ಕಂಡುಕೊಂಡಿತ್ತು. ಸಿಆರ್ಝೆಡ್-III ಪ್ರದೇಶಗಳಲ್ಲಿ ಕರಾವಳಿಯಿಂದ 200 ಮೀಟರ್ ಒಳಗೆ ಯಾವುದೇ ನಿರ್ಮಾಣಕ್ಕೆ ಆಸ್ಪದ ನೀಡುವುದಿಲ್ಲ. ಸಿಆರ್ಝೆಡ್-IIರಲ್ಲಿ ಕರಾವಳಿಯಿಂದ 50 ಮೀಟರ್ ಆಚೆಗೆ ನಿರ್ಮಾಣಕ್ಕೆ ಅವಕಾಶವಿದೆ.
ಬಿಲ್ಡರ್ಗಳಿಗೆ ಕಾನೂನು ಸಮರದಲ್ಲಿ ಜಯ
ಗ್ರಾಮ ಪಂಚಾಯಿತಿಯ ನೋಟಿಸ್ಗೆ ಪ್ರತಿಕ್ರಿಯೆಯಾಗಿ ಬಿಲ್ಡರ್ಗಳು 2007ರಲ್ಲಿ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದರು. ಜುಲೈನಲ್ಲಿ ಮಧ್ಯಂತರ ತಡೆಯಾಜ್ಞೆ ತಂದ ಅವರು ನಿರ್ಮಾಣ ಮುಂದುವರಿಸಿದರು. ಪಂಚಾಯಿತಿಗೆ ನಿರ್ದೇಶನ ನೀಡಲು ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ ಎಂದು 2012ರಲ್ಲಿ ಕೋರ್ಟ್ ತೀರ್ಪು ನೀಡಿತು. 2016ರ ನವೆಂಬರ್ನಲ್ಲಿ ಆದೇಶದ ವಿರುದ್ಧ ಸಲ್ಲಿಸಲಾಗಿದ್ದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತು. ಆದರೆ ಕೆಸಿಜೆಡ್ಎಂಎ ಅಷ್ಟಕ್ಕೆ ಸುಮ್ಮನಾಗಲಿಲ್ಲ. ಅದೇ ವರ್ಷ ಪ್ರಾಧಿಕಾರವು ಸುಪ್ರೀಂಕೋರ್ಟ್ ಮೊರೆ ಹೊಕ್ಕಿತು. ಸಿಆರ್ಝೆಡ್ ಪ್ರದೇಶದಲ್ಲಿನ ಯಾವುದೇ ನಿರ್ಮಾಣಗಳು ತನ್ನ ವ್ಯಾಪ್ತಿಗೆ ಬರುತ್ತದೆ. ಮರಡು ಗ್ರಾಮ ಪಂಚಾಯಿತಿಯು ತನ್ನ ಅನುಮತಿ ಇಲ್ಲದೆ ನಿರ್ಮಾಣಕ್ಕೆ ಪರವಾನಗಿ ನೀಡಿದೆ ಎಂದು ಆರೋಪಿಸಿತ್ತು.
ಗ್ರಾಮ ಪಂಚಾಯಿತಿ ನಿಲುವು
ಕೇರಳ ಹೈಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದ್ದ ಮರಡು ಗ್ರಾಮ ಪಂಚಾಯಿತಿ, ಚೆನ್ನಾಗಿ ಅಭಿವೃದ್ಧಿಯಾಗಿರುವ ಪ್ರಕೃತಿಯೊಳಗೆ ಗ್ರಾಮ ಪಂಚಾಯಿತಿಯು ಸಿಆರ್ಝೆಡ್-IIರ ವ್ಯಾಪ್ತಿಗೆ ಬರುತ್ತದೆ. ಆದರೆ ಈ ಪ್ರದೇಶವನ್ನು ತಪ್ಪಾಗಿ ಸಿಆರ್ಝೆಡ್-III ವ್ಯಾಪ್ತಿಗೆ ಸೇರಿಸಲಾಗಿದೆ ಎಂದು ವಾದಿಸಿತ್ತು.
ಅಧ್ಯಯನ ಸಮಿತಿ ರಚನೆ
ಕಳೆದ ವರ್ಷ ಸುಪ್ರೀಂಕೋರ್ಟ್, ಮೂರು ಸದಸ್ಯರ ಸಮಿತಿಯೊಂದನ್ನು ರಚಿಸಿತು. ಸ್ಥಳೀಯ ಸ್ವ ಸರ್ಕಾರ ಇಲಾಖೆಯ ಕಾರ್ಯದರ್ಶಿ ಕೆ. ಗೋಪಾಲಕೃಷ್ಣ ಭಟ್, ಜಿಲ್ಲಾಧಿಕಾರಿ ಕೆ. ಮೊಹಮ್ಮದ್ ವೈ ಸಫಿರುಲ್ಲಾ ಮತ್ತು ಮುಖ್ಯ ಪಾಲಿಕೆ ಅಧಿಕಾರಿ ಸುಭಾಷ್ ಪಿ.ಕೆ. ಈ ಸಮಿತಿಯಲ್ಲಿದ್ದರು. ಗ್ರಾಮ ಪಂಚಾಯಿತಿಯು ಸಿಆರ್ಝೆಡ್ ನಿಯಮವನ್ನು ಉಲ್ಲಂಘಿಸಿದೆಯೇ ಎಂಬುದನ್ನು ಈ ಸಮಿತಿ ಅಧ್ಯಯನ ನಡೆಸಬೇಕಿತ್ತು. ಈ ಸಮಿತಿಯು ಅಧ್ಯಯನಕ್ಕೆ ತಾಂತ್ರಿಕ ಸಮಿತಿಯೊಂದನ್ನು ರಚಿಸಿತು.
ತಾಂತ್ರಿಕ ಸಮಿತಿಯು ಮರಡು ಗ್ರಾಮ ಪಂಚಾಯಿತಿಯು ಸಿಆರ್ಝೆಡ್ ನಿಯಮಗಳನ್ನು ಉಲ್ಲಂಘಿಸಿರುವುದನ್ನು ಕಂಡುಕೊಂಡಿತು. 1996ರ ಕೇರಳ ಕರಾವಳಿ ವಲಯ ನಿರ್ವಹಣಾ ಯೋಜನೆ ನಿಯಮದ ಅನ್ವಯ ಮರಡುವನ್ನು ಗ್ರಾಮ ಪಂಚಾಯಿತಿ ಪ್ರದೇಶ ಎಂದು ಗುರುತಿಸಲಾಗಿದ್ದು, ಅದು ಸಿಆರ್ಝೆಡ್-III ವರ್ಗಕ್ಕೆ ಸೇರುತ್ತದೆ ಎಂದು ಹೇಳಿತು.
ಕಟ್ಟಡ ತೆರವಿಗೆ ಆದೇಶ
2019ರ ಮೇ 8ರಂದು ಆದೇಶ ಪ್ರಕಟಿಸಿದ ನ್ಯಾ. ಅರುಣ್ ಮಿಶ್ರಾ ಮತ್ತು ನವೀನ್ ಸಿನ್ಹಾ ಅವರನ್ನು ಒಳಗೊಂಡ ಸುಪ್ರೀಂಕೋರ್ಟ್ ವಿಭಾಗೀಯ ಪೀಠ, ಕಟ್ಟಡ ನಿರ್ಮಾಣಕ್ಕೆ ಪಂಚಾಯಿತಿ ನೀಡಿದ್ದ ಅನುಮತಿ ಅಕ್ರಮ ಎಂದು ತೀರ್ಪು ನೀಡಿತು. ತನಿಖಾ ಸಮಿತಿಯು ಕಂಡುಕೊಂಡಿರುವ ಅಂಶಗಳ ಹಿನ್ನೆಲೆಯಲ್ಲಿ ಅಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆಗಳು ನಡೆಯಬಾರದು. ಇಂದಿನಿಂದ ಒಂದು ತಿಂಗಳ ಅವಧಿಯಲ್ಲಿ ಎಲ್ಲ ಕಟ್ಟಡಗಳನ್ನೂ ಅಲ್ಲಿಂದ ತೆರವುಗೊಳಿಸಬೇಕು ಎಂದು ಆದೇಶಿಸಿತು.
ಮೇ 8ರಂದು ನೀಡಲಾಗಿದ್ದ ಆದೇಶವನ್ನು ರಾಜ್ಯ ಸರ್ಕಾರ ಪಾಲಿಸದೆ ಇರುವುದನ್ನು ಗಮನಿಸಿದ ಸುಪ್ರೀಂಕೋರ್ಟ್ ಸುವೊ ಮೊಟು ಪ್ರಕರಣವನ್ನು ಆರಂಭಿಸಿತ್ತು. ಸೆ.20ರ ವೇಳೆಗೆ ಕಟ್ಟಡಗಳನ್ನು ತೆರವುಗೊಳಿಸಲೇಬೇಕು ಎಂದು ಸೂಚಿಸಿತ್ತು.