ಚಿನ್ನದ ಸ್ಮಗಲಿಂಗ್ ಕೇಸಲ್ಲಿ 20ಕ್ಕೂ ಅಧಿಕ ಹವಾಲ ಗ್ಯಾಂಗ್!
ತಿರುವನಂತಪುರಂ, ಜುಲೈ 20: ಬಹುಕೋಟಿ ಚಿನ್ನದ ಸ್ಮಗಲಿಂಗ್ ಕೇಸಿನಲ್ಲಿ 20ಕ್ಕೂ ಅಧಿಕ ಹವಾಲ ಗ್ಯಾಂಗ್ ಗಳು ಸೇರಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಜುಲೈ 5ರಂದು ತಿರುವನಂತಪುರಂನ ವಿಮಾನ ನಿಲ್ದಾಣದಲ್ಲಿ ಪತ್ತೆಯಾದ 30 ಕೆ.ಜಿ ಚಿನ್ನದ ಬ್ಯಾಗೇಜಿಗೆ ರಾಜತಾಂತ್ರಿಕ ಅಧಿಕಾರಿಗಳ ನೆರವು, ಸುರಕ್ಷತೆ ಸಿಕ್ಕಿದ್ದರಿಂದ ಕಳೆದ ಒಂದು ವರ್ಷದಿಂದ ನೂರಾರು ಕೆ.ಜಿ ಚಿನ್ನ ಕಳ್ಳ ಸಾಗಣೆಯಾಗಿದೆ.
ಕೇರಳದ ಚಿನ್ನ ಸ್ಮಗಲಿಂಗ್: ದುಬೈನಲ್ಲಿ ಆರೋಪಿ ಫೈಜಲ್ ಬಂಧನ
ತಿರುವನಂತಪುರಂನ ರಾಜತಾಂತ್ರಿಕ ಕಚೇರಿಯ ಪಿಆರ್ ಒ ಪಿಎಸ್ ಸರಿತ್ ಕುಮಾರ್ ಸೇರಿದಂತೆ 13 ಮಂದಿಯನ್ನು ಬಂಧಿಸಲಾಗಿದೆ. ಈತನಿಗೆ ಹವಾಲಾ ಗ್ಯಾಂಗ್ ಪರಿಚಯವಿದ್ದು, ಸ್ವಪ್ನ ಸುರೇಶ್ ಮೂಲಕ ಸುಲಭವಾಗಿ ಕಳ್ಳ ಸಾಗಣೆ ನಡೆಸಿದ್ದರು ಎಂದು ತಿಳಿದು ಬಂದಿದೆ.
ಎನ್ಐಎ ಕಸ್ಟಡಿಗೆ ಸ್ವಪ್ನ ಸುರೇಶ್: ಕೋರಮಂಗಲದಿಂದ ಕೊಚ್ಚಿ ತನಕ
ಈ ನಡುವೆ ಕೇರಳದ ಚಿನ್ನ ಸ್ಮಗಲಿಂಗ್ ಪ್ರಕರಣದ ಪ್ರಮುಖ ಆರೋಪಿ ಫೈಜಲ್ ಫರೀದ್ ನನ್ನು ದುಬೈ ಪೊಲೀಸರು ಬಂಧಿಸಿದ್ದಾರೆ. ಮತ್ತಿಬ್ಬರು ಆರೋಪಿಗಳಾದ ಸ್ವಪ್ನ ಸುರೇಶ್ ಹಾಗೂ ಸಂದೀಪ್ ಅವರನ್ನು 14 ದಿನಗಳ ಕಾಲ ರಾಷ್ಟ್ರೀಯ ತನಿಖಾ ತಂಡ ( ಎನ್ಐಎ) ಕಸ್ಟಡಿಗೆ ನೀಡಲಾಗಿದೆ. 2019ರಿಂದ ಇಲ್ಲಿ ತನಕ ಸುಮಾರು 200 ಕೆ.ಜಿಗೂ ಅಧಿಕ ಚಿನ್ನವನ್ನು ಈ ರೀತಿ ಅಕ್ರಮವಾಗಿ ರವಾನೆ ಮಾಡಿರುವ ಶಂಕೆ ವ್ಯಕ್ತವಾಗಿದೆ
ನಾಪತ್ತೆಯಾದ ರಶೀದ್ ಅಲ್ಶೆಮೈಲಿ
ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷಿ ಎನಿಸಿಕೊಂಡಿರುವ ರಶೀದ್ ಅಲ್ಶೆಮೈಲಿ ನಾಪತ್ತೆಯಾಗಿದ್ದು, ಭಾರತದಿಂದ ವಿದೇಶಕ್ಕೆ ಹಾರಿದ್ದಾನೆ. ವಿಯೆನ್ನಾ ಒಪ್ಪಂದದಂತೆ ಈತನಿಗೆ ಸುರಕ್ಷತೆಯೂ ಇದೆ. ದೆಹಲಿಗೆ ಬಂದಿದ್ದ ಈತ, ಯುಎಇಗೆ ತೆರಳಿರುವುದು ಕಂಡು ಬಂದಿದೆ. ಹೀಗಾಗಿ, ಯುಎಇ ಕಾನ್ಸುಲೇಟ್ ಕಚೇರಿಯಲ್ಲಿ ಇನ್ನಷ್ಟು ಸಿಬ್ಬಂದಿಗಳು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಎನ್ಐಎ ಮೂಲಗಳು ಹೇಳಿವೆ. ರಶೀದ್ ಖಾಮಿಸ್ ಅಲ್ ಶಾಮೆಲಿ, ಯುಎಇ ಅಧಿಕಾರಿ ಹೆಸರಿಗೆ ಈ ಬ್ಯಾಗೇಜ್ ತಲುಪಬೇಕಿತ್ತು.
ಬ್ಯಾಗೇಜ್ ತೆಗೆಯಲು ಅನುಮತಿ ಬೇಕು
ರಾಜತಾಂತ್ರಿಕ ಸಿಬ್ಬಂದಿಗಳ ಬಂಧನದ ನಂತರ ತನಿಖೆಯನ್ನು ರಾಷ್ಟ್ರೀಯ ತನಿಖಾ ತಂಡ(ಎನ್ಐಎ) ನಡೆಸುತ್ತಿದ್ದರೂ ಕಸ್ಟಮ್ ಇಲಾಖೆಯಿಂದ ತನಿಖೆ ನಡೆಯುತ್ತಿದೆ. ಪ್ರಧಾನ ಕಾರ್ಯದರ್ಶಿ ಶಿವಶಂಕರ್ ವಿಚಾರಣೆ ಬಳಿಕ ಜೂನ್ 27 ರಿಂದ ಜುಲೈ 3 ರ ಅವಧಿಯಲ್ಲಿ 3 ಬ್ಯಾಗ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಆದರೆ, ಈ ಬ್ಯಾಗ್ ಓಪನ್ ಮಾಡಲು ಗೃಹ ಸಚಿವಾಲಯದ ಅನುಮತಿ ಅಗತ್ಯ. ಯುಎಇ ಕಚೇರಿ ವಿಳಾಸಕ್ಕೆ ಈ ಬ್ಯಾಗ್ ಗಳನ್ನು ಕಳಿಸಿರುವುದು ಇದಕ್ಕೆ ಕಾರಣ.
ಚಿನ್ನದ ಸ್ಮಗಲಿಂಗ್ ಜೊತೆ ಸ್ವಪ್ನ ಸುರೇಶ್ ಮೇಲೆ ಮತ್ತೊಂದು ಕೇಸ್
ಮನಿ ಲಾಂಡ್ರಿಂಗ್ ಕೇಸ್ ದಾಖಲು?
ಮನಿ ಲಾಂಡ್ರಿಂಗ್ ಕಂಡು ಬಂದರೆ ಜಾರಿ ನಿರ್ದೇಶನಾಲಯವು ತನಿಖೆ ನಡೆಸಲು ಮುಂದಾಗಲಿದೆ. ಹವಾಲ ಗ್ಯಾಂಗ್ ಬಗ್ಗೆ ಸುದ್ದಿ ಬಂದಿರುವುದರಿಂದ ಶೀಘ್ರದಲ್ಲೇ ಈ ಪ್ರಕರಣದ ತನಿಖೆಯನ್ನು ಜಾರಿ ನಿರ್ದೇಶನಾಲಯ ಕೂಡಾ ಕೈಗೆತ್ತಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಅಧಿಕಾರಿಯೊಬ್ಬರು ಒನ್ಇಂಡಿಯಾಕ್ಕೆ ತಿಳಿಸಿದ್ದಾರೆ. ದುಬೈನಲ್ಲಿರುವ ಉದ್ಯಮಿ ಫೈಜಲ್ ಫರೀದ್ ದುಬೈನಲ್ಲಿ ಚಿನ್ನ ಖರೀದಿಸಿ ಕೇರಳದ ಕಾನ್ಸುಲೇಟ್ ಕಚೇರಿಗೆ ಕಳುಹಿಸುತ್ತಿದ್ದ ಇಲ್ಲಿ ಸ್ವಪ್ನ ಸುರೇಶ್, ಸರೀತ್ ಅದನ್ನು ಹವಾಲ ಗ್ಯಾಂಗಿಗೆ ಹಂಚುತ್ತಿದ್ದರು. ಕೇರಳದ ಹೊರಗಡೆ ಎಲ್ಲವೂ ಮಾರಾಟವಾಗುತ್ತಿತ್ತು ಎಂದು ತನಿಖೆಯಿಂದ ತಿಳಿದು ಬಂದಿದೆ.
ದೊಡ್ಡ ಮಟ್ಟದ ಹವಾಲ ಜಾಲ ಪತ್ತೆ
ಸರೀತ್ ಕುಮಾರ್ ನಿಂದ ಪಡೆದ ಚಿನ್ನವನ್ನು ಸಂದೀಪ್ ನಾಯರ್ ಪಡೆದುಕೊಂಡು ಮಲ್ಲಪುರಂನ ಕೆ.ಟಿ ರಮೀಸ್ ಗೆ ತಲುಪಿಸುತ್ತಿದ್ದ. ಸದ್ಯ ರಮೀಶ್ ಕಸ್ಟಮ್ ಅಧಿಕಾರಿಗಳ ವಶದಲ್ಲಿದ್ದಾನೆ. ರಮೀಸ್ ಈ ಬ್ಯಾಗೇಜನ್ನು ಮುವತ್ತುಪುಳದ ಪಿ.ಟಿ ಅಬ್ದು, ಮೊಹಮ್ಮದ್ ಶಫಿ, ಎಡಕಂದನ್ ಸೈಥಾಲವಿ, ಜಲಾಲ್ ಮೊಹಮ್ಮದ್ ಗೆ ತಲುಪಿಸುತ್ತಿದ್ದ, ಇವರಿಂದ ಹವಾಲ ಆಪರೇಟರ್ ಗಳು ಇದನ್ನು ಬಳಸುತ್ತಿದ್ದರು ಎಂದು ತಿಳಿದು ಬಂದಿದೆ. ಇತ್ತೀಚಿನ ಎಲ್ಲಾ ಮೊತ್ತವನ್ನು ಕಸ್ಟಮ್ ಅಧಿಕಾರಿಗಳು ಪಡೆದುಕೊಂಡಿದ್ದಾರೆ. ಆದರೆ, ಅಬ್ದುಗೆ ತಲುಪಿದ 78 ಕೆಜಿ ಚಿನ್ನ ಇನ್ನೂ ಎಲ್ಲೂ ಪತ್ತೆಯಾಗಿಲ್ಲ.