ಕೇರಳದಲ್ಲಿ ಕಿಂಗ್-ಕಿಂಗ್ ಮೇಕರ್ ಆಗದೆ ಸೋತ ಸುರೇಂದ್ರನ್
ಕೇರಳದಲ್ಲಿ ಹೇಗಾದರೂ ಕಮಲ ಅರಳಿಸುವ ಪಣ ತೊಟ್ಟಿದ್ದ ಬಿಜೆಪಿ ಅಧ್ಯಕ್ಷ ಕೆ ಸುರೇಂದ್ರನ್ ಅವರು ಕಿಂಗೂ ಆಗಲಿಲ್ಲ, ಕಿಂಗ್ ಮೇಕರ್ ಆಗಲಿಲ್ಲ. ಸೋತು ಸುಣ್ಣವಾಗಿದ್ದಾರೆ. ಅತಿಯಾದ ಆತ್ಮವಿಶ್ವಾಸವೇ ಮತ್ತೊಮ್ಮೆ ಕಡಿಮೆ ಅಂತರದಲ್ಲಿ ಸೋಲಲು ಕಾರಣವಾಗಿದೆ.
ಒಂದೆರಡು ಸಮೀಕ್ಷೆಯಲ್ಲಿ ಮಂಜೇಶ್ವರದಲ್ಲಿ ಕೆ ಸುರೇಂದ್ರನ್ ಅವರಿಗೆ ಗೆಲುವು ಎಂದು ವರದಿ ಬಂದಿರುವುದು ನೋಡಿ ಹುಮ್ಮಸ್ಸಿನಲ್ಲಿದ್ದ ಸುರೇಂದ್ರನ್ ಅವರನ್ನು ಮುಸ್ಲಿಂ ಲೀಗ್ ಅಭ್ಯರ್ಥಿ ಅಶ್ರಫ್ ಸೋಲಿಸಿದ್ದಾರೆ.
Assembly Election Results 2021 Live Updates: 5 ರಾಜ್ಯಗಳ ಚುನಾವಣೆ ಫಲಿತಾಂಶ
ಮಂಜೇಶ್ವರದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ 89 ಮತಗಳ ಅಂತರದಿಂದ ಸುರೇಂದ್ರನ್ ಅವರು ಇದೇ ಕ್ಷೇತ್ರದಲ್ಲಿ ಸೋಲು ಕಂಡಿದ್ದರು. ಮುಸ್ಲಿಂ ಲೀಗ್ ಅಭ್ಯರ್ಥಿ ಪಿಬಿ ಅಬ್ದುಲ್ ರಜಾಕ್ ಅವರು 56,870 ಮತಗಳಿಸಿದ್ದರೆ, ಸುರೇಂದ್ರನ್ 56,781 ಮತ ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಬಹುಜನ ಸಮಾಜವಾದಿ ಪಕ್ಷದ ಅಭ್ಯರ್ಥಿ ಕೆ ಸುಂದರ 467 ಮತಗಳನ್ನು ಪಡೆದಿದ್ದರು. 2016ರಲ್ಲಿ ಸುರೇಂದ್ರನ್ ಸೋಲಿಗೆ ಪರೋಕ್ಷವಾಗಿ ಕಾರಣವಾಗಿದ್ದ ಸುಂದರ ಈ ಬಾರಿ ನಾಮಪತ್ರ ಹಿಂಪಡೆದುಕೊಂಡಿದ್ದಲ್ಲದೆ, ಎನ್ಡಿಎ ಅಭ್ಯರ್ಥಿ ಪರ ಪ್ರಚಾರ ಮಾಡುವುದಾಗಿ ಘೋಷಿಸಿದ್ದರು. ಹೀಗಾಗಿ, ಸುರೇಂದ್ರನ್ ಈ ಬಾರಿ ಕಾಸರಗೋಡಿನ ಮಂಜೇಶ್ವರದಲ್ಲಿ ಗೆಲುವು ಕನಸು ಕಂಡಿದ್ದರು.
ಮಂಜೇಶ್ವರದಲ್ಲಿ ಯುಡಿಎಫ್ ಅಭ್ಯರ್ಥಿ ಎ.ಕೆ.ಎಂ ಅಶ್ರಫ್ 1143 ಮತಗಳಿಂದ ಮುನ್ನಡೆ, 41.6 % ಶೇಕಡಾವಾರು ಮತ ಗಳಿಕೆ, ಸುರೇಂದ್ರನ್ 36.19% ಮತಗಳಿಸಿ 2ನೇ ಸ್ಥಾನದಲ್ಲಿದ್ದಾರೆ. ಅಧಿಕೃತ ಘೋಷಣೆ ಬಾಕಿ ಇದೆ.
Recommended Video
ಸುರೇಂದ್ರನ್ ಅವರು ಶಬರಿಮಲೆ ಸಂಪ್ರದಾಯ, ಕಟ್ಟುಪಾಡುಗಳನ್ನು ಕಾಪಾಡಲು ನಡೆಸಿದ ಹೋರಾಟಕ್ಕೆ ಬೆಲೆ ಸಿಕ್ಕಿಲ್ಲ. ಮಂಜೇಶ್ವರದಲ್ಲಿ ಅಶ್ರಫ್ 1143 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಇದಲ್ಲದೆ, ಪಥನಂತಿಟ್ಟದ ಕೊನ್ನಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಸುರೇಂದ್ರನ್ ಆ ಕ್ಷೇತ್ರದಲ್ಲೂ ಹಿನ್ನಡೆಯಾಗಿದೆ. ಸಿಪಿಐ(ಎಂ) ನ ಕೆ. ಯು ಜನೀಶ್ ಕುಮಾರ್ ಅವರಿಗೆ 4,128 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ. ಯುಡಿಎಫ್ ಅಭ್ಯರ್ಥಿ ರಾಬಿನ್ ಪೀಟರ್ 2ನೇ ಸ್ಥಾನ ಹಾಗೂ ಸುರೇಂದ್ರನ್ 3ನೇ ಸ್ಥಾನಕ್ಕೆ ಕುಸಿದಿದ್ದಾರೆ.