ಮೂವತ್ತೇಳು ವರ್ಷ ಕುಟುಂಬದಿಂದ ದೂರವಿದ್ದ ವ್ಯಕ್ತಿಯನ್ನು ಒಗ್ಗೂಡಿಸಿದ ಫೇಸ್ ಬುಕ್
ಕೋಳಿಕ್ಕೋಡ್ (ಕೇರಳ), ಮೇ 17: ಫೇಸ್ ಬುಕ್ ಪೋಸ್ಟ್ ವೊಂದು ವ್ಯಕ್ತಿಯೊಬ್ಬರು ತಮ್ಮ ಕುಟುಂಬದ ಜತೆ ಸೇರಲು ನೆರವಾದ ಘಟನೆ ಇದು. ನಾಲ್ಕು ದಶಕದ ನಂತರ ತಮ್ಮ ಕುಟುಂಬ ಸದಸ್ಯರ ಜತೆಗೆ ಒಂದಾಗಿರುವ ಈ ವ್ಯಕ್ತಿಯ ಹೆಸರು ವಯಲಪಿಡಿಯಲ್ ಮೊಹ್ಮದ್. ಅವರು ಮೂಲತಃ ಮದವೂರಿನವರು.
ಮೂವತ್ತೇಳು ವರ್ಷದ ಹಿಂದೆ ಮೊಹಮ್ಮದ್ ಕೊನೆ ಬಾರಿಗೆ ಕಂಡಿದ್ದು ಮದವೂರಿನಲ್ಲಿ. ಆ ನಂತರ ಅವರನ್ನು ಹಲವು ಸ್ಥಳಗಳಲ್ಲಿ ಹುಡುಕಲಾಗಿತ್ತು. ಅದರೆ ಏನೂ ಪ್ರಯೋಜನ ಆಗಿರಲಿಲ್ಲ. ಆಗ ಅವರ ಮಕ್ಕಳ ಜತೆಗೆ ಪತ್ನಿ ಏಳು ತಿಂಗಳ ಗರ್ಭಿಣಿ. ಕೆಲವು ತಿಂಗಳ ನಂತರ ಆ ಕುಟುಂಬಕ್ಕೆ ಮೊಹ್ಮದ್ ಜತೆ ಸಂಪರ್ಕವೇ ಇಲ್ಲದಂತಾಯಿತು.
29 ವರ್ಷದ ನಂತರ ಕಾಶ್ಮೀರಕ್ಕೆ ಹಿಂತಿರುಗಿದ ರೋಶನ್ ಗೆ ಭರ್ಜರಿ ಸ್ವಾಗತ
ಕರ್ನಾಟಕದ ಹುಬ್ಬಳ್ಳಿ ಸೇರಿ ನಾನಾ ಕಡೆ ಹುಡುಕಾಡಿದರೂ ಯಾವ ಮಾಹಿತಿಯೂ ಸಿಗಲಿಲ್ಲ. ವರ್ಷಗಳು ಉರುಳಿತು. ಮೊಹ್ಮದ್ ರ ಮಗ ಹಾಗೂ ಇಬ್ಬರು ಹೆಣ್ಣುಮಕ್ಕಳಿಗೆ ಮದುವೆ ಆಯಿತು. ಈಗಂತೂ ಅವರ ಮೊಮ್ಮಕ್ಕಳಿಗೂ ಮದುವೆ ಆಗಿದೆ. ಈ ಕುಟುಂಬ ಎಲ್ಲ ಸಂತಸದ ಕ್ಷಣಗಳಲ್ಲೂ ಮೊಹ್ಮದ್ ಇರಬೇಕಿತ್ತು ಎಂದು ಹಳಹಳಿಸಿದೆ.
ಪಟ್ಟಂಬಿಯ ರಯೀಜ್ ಎಂಬುವರು ಕರ್ನಾಟಕದ ಬೆಳಗಾವಿಯಲ್ಲಿ ಬೇಕರಿ ನಡೆಸುತ್ತಾರೆ. ಅವರಿಗೆ ಮೊಹ್ಮದ್ ರ ಹಿಂದಿನ ಬದುಕಿನ ಬಗ್ಗೆ ಗೊತ್ತಾಗಿದೆ. ನಾನು ಮತ್ತೆ ನಿಮ್ಮ ಕುಟುಂಬದ ಜತೆ ಒಂದು ಮಾಡುತ್ತೇನೆ ಎಂದು ಹೇಳಿದ್ದಾರೆ. ಮೊಹ್ಮದ್ ರ ಬದುಕಿನ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದು, ಹಾಕಿದ್ದಾರೆ. ಲೋಕತಾಂತ್ರಿಕ ಯುವ ಜನತಾ ದಳದ ರಾಷ್ಟ್ರೀಯ ಅಧ್ಯಕ್ಷ ಸಲೀಂ ಮದವೂರು ಮೂಲಕ ಮೊಹ್ಮದ್ ಕುಟುಂಬವನ್ನು ಹುಡುಕಲು ಸಾಧ್ಯವಾಗಿದೆ.
ಮೊಹ್ಮದ್ ರ ಮಕ್ಕಳು, ಸೋದರರನ್ನು ಸಲೀಮ್ ಬೆಳಗಾವಿಗೆ ಕರೆತಂದಿದ್ದಾರೆ. ಇಷ್ಟು ವಯಸ್ಸಾದ ಮೇಲೆ, ಇಷ್ಟು ವರ್ಷ ಆದ ಮೇಲೆ ತನ್ನ ಕುಟುಂಬದವರು ಸ್ವೀಕಾರ ಮಾಡುತ್ತಾರಾ ಎಂಬ ಗೊಂದಲದಲ್ಲಿದ್ದ ಮೊಹ್ಮದ್ ಗೆ ಅಚ್ಚರಿಯ ಅನುಭವ ಆಗಿದೆ. ಸದ್ಯಕ್ಕೆ ಗಲ್ಫ್ ನಲ್ಲಿರುವ ಮೊಹ್ಮದ್ ರ ಮಗ ಫೈಸಲ್ ಕೂಡ ಫೋನ್ ನಲ್ಲಿ ಮಾತನಾಡಿದ್ದಾರೆ.
27 ವರ್ಷದ ನಂತರ ಕೋಮಾ ಸ್ಥಿತಿಯಿಂದ ಎದ್ದ ಮಹಿಳೆ, ನೆನಪಿದ್ದಿದ್ದು ಮಗನ ಹೆಸರೊಂದೆ!
ಈ ನಾಲ್ಕು ದಶಕದ ಅಲೆದಾಟದಲ್ಲಿ ಮೊಹ್ಮದ್ ಹಲವಾರು ಸ್ಥಳಗಳನ್ನು ಕಂಡಿದ್ದಾರೆ. ಒಂಬತ್ತು ಭಾಷೆಗಳನ್ನು ಸುಲಭವಾಗಿ ಮಾತಾಡುತ್ತಾರೆ. ತನ್ನ ತವರು ರಾಜ್ಯದ ಬಗ್ಗೆ ಸದ್ಯಕ್ಕೆ ಅಷ್ಟೇನೂ ಗೊತ್ತಿಲ್ಲದ ಮೊಹ್ಮದ್ ಮತ್ತೆ ಹೊಸ ಬದುಕನ್ನು ಆರಂಭಿಸುವ ಉಮೇದಿನಲ್ಲಿದ್ದಾರೆ.