ತಿರುವನಂತಪುರಂ: ಲಿಫ್ಟ್ನಲ್ಲಿ ಸಿಲುಕಿ ವ್ಯಕ್ತಿ ಸಾವು
ತಿರುವನಂತಪುರ, ಮೇ 11: ತಾನು ಕೆಲಸ ಮಾಡುತ್ತಿದ್ದ ಅಂಗಡಿಯ ಕಟ್ಟಡದಲ್ಲಿ ಇರುವ ಲಿಫ್ಟ್ನ ಬಾಗಿಲಿಗೆ ತಲೆ ಸಿಲುಕಿ ಉದ್ಯೋಗಿಯೊಬ್ಬರು ಮೃತಪಟ್ಟಿರುವ ಘಟನೆ ಕೇರಳದ ತಿರುವನಂತಪುರದಲ್ಲಿ ಮಂಗಳವಾರ ನಡೆದಿದೆ.
ತಿರುವನಂತಪುರಂ ನಿವಾಸಿ ಸತೀಶ್ ಕುಮಾರ್(54) ಮೃತ ದುರ್ದೈವಿ. ಇವರು ಅಂಬಲಮುಕ್ಕವಿನಲ್ಲಿರುವ ಸ್ಯಾನಿಟರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು.
ನೆಲ ಮಹಡಿಯಿಂದ ನಾಲ್ಕನೇ ಮಹಡಿಯಲ್ಲಿರುವ ಸ್ಯಾನಿಟರಿ ಅಂಗಡಿಗೆ ಸರಕುಗಳನ್ನು ತುಂಬಿಕೊಂಡು ಕಾರ್ಗೊ ಲಿಫ್ಟ್ನಲ್ಲಿ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ, ಲಿಫ್ಟ್ನಿಂದ ಸತೀಶ್ ಕುಮಾರ್ ಅವರನ್ನು ಹೊರತೆಗೆದು, ಆ್ಯಂಬ್ಯುಲೆನ್ಸ್ ಮೂಲಕ ಸ್ಥಳೀಯ ಆಸ್ಪತ್ರೆಗೆ ಸಾಗಿಸಿದರು. ಆದರೆ ಈ ವೇಳೆಗಾಗಲೇ ಸತೀಶ್ ಆವರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು.
"ಲಿಫ್ಟ್ ಸ್ಥಗಿತವಾಗಿದೆ. ಈ ವೇಳೆಗೆ ಏನಾಗಿರಬಹುದು ಎಂದು ತಿಳಿಯಲು ಕಾರ್ಗೊ ಲಿಫ್ಟ್ನ ರೇಲಿಂಗ್ ಸರಿಸಿ ನೋಡಲು ಸತೀಶ್ ಅವರು ತಲೆ ಆಚೆ ಹಾಕಿ ಇಣುಕಿರಬಹುದು. ಈ ವೇಳೆಗೆ ಲಿಫ್ಟ್ನ ರೇಲಿಂಗ್ ನಡುವೆ ಅವರ ತಲೆ ಸಿಲುಕಿ ಜಾಮ್ ಆಗಿರಬಹುದು,'' ಎಂದು ಆಗ್ನಿಶಾಮಕ ದಳದ ತಿರುವನಂತಪುರ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಸತೀಶ್ ಅವರು ಕಳೆದ ಹಲವು ವರ್ಷಗಳಿಂದ ಎಸ್ಕೆಪಿ ಸ್ಯಾನಿಟರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಲಿಫ್ಟ್ನಲ್ಲಿ ಒಬ್ಬರೇ ಇದ್ದಾಗ ಘಟನೆ ಸಂಭವಿಸಿದೆ. ಅಂಗಡಿಯ ಇತರೆ ಸಿಬ್ಬಂದಿ ಸಾಕಾಷ್ಟು ಹೊತ್ತಾದರೂ ಸತೀಶ್ ಬರದೇ ಇರುವುದನ್ನು ಗಮನಿಸಿ, ಲಿಫ್ಟ್ ಬಳಿಗೆ ಬಂದು ನೋಡಿದ್ದಾರೆ. ಈ ವೇಳೆ ಘಟನೆ ಬೆಳಕಿಗೆ ಬಂದಿದೆ.