ಪ್ರತಿಭಾವಂತ ಮಲಯಾಳಂ ನಿರ್ದೇಶಕ ಸಚ್ಚಿ ಇನ್ನಿಲ್ಲ
ತ್ರಿಶೂರ್, ಜೂನ್ 18: ಮಲಯಾಳಂ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕಕೆ.ಆರ್.ಸಚ್ಚಿದಾನಂದ್ ಅಲಿಯಾಸ್ ಸಚ್ಚಿ(Sachy) ಜೂನ್ 18ರಂದು ನಿಧನರಾಗಿದ್ದಾರೆ. ಇತ್ತೀಚೆಗೆ ಹೃದಯಾಘಾತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಸಚ್ಚಿ ಅವರು ಚಿಕಿತ್ಸೆಗೆ ಸ್ಪಂದಿಸಲಿಲ್ಲ, ಮತ್ತೊಮ್ಮೆ ತೀವ್ರ ಹೃದಯ ಸ್ತಂಬನವಾಗಿ ಮೃತಪಟ್ಟಿದ್ದಾರೆ ಎಂದು ತ್ರಿಶೂರ್ ಆಸ್ಪತ್ರೆ ಮೂಲಗಳು ತಿಳಿಸಿವೆ.
ಅಯ್ಯಪ್ಪನುಂ-ಕೋಶಿಯುಂ ಎಂಬ ಸೂಪರ್ ಹಿಟ್ ಚಿತ್ರವಲ್ಲದೆ ಅನಾರ್ಕಲಿ ಎಂಬ ಪ್ರೇಮ ಕಥೆಯನ್ನು ನಿರ್ದೇಶಿಸಿದ್ದರು. ಸಮಾಜಕ್ಕೆ ಸಂದೇಶ ಸಾರುವ ಡ್ರೈವಿಂಗ್ ಲೈಸನ್ಸ್ ಕೂಡಾ ಸಚ್ಚಿಯ ಕೈಚಳಕ ಹೊಂದಿತ್ತು.
ಹೃದಯಸ್ಪರ್ಶಿ ಕಥೆಗಾರ, ನಿರ್ದೇಶಕ ಸಚ್ಚಿದಾನಂದ ಇನ್ನು ನೆನಪು ಮಾತ್ರ
ತ್ರಿಶೂರಿನ ಜ್ಯುಬಿಲಿ ಮಿಷನ್ ಆಸ್ಪತ್ರೆಯಲ್ಲಿ ನಿಧನರಾದ 48 ವರ್ಷ ವಯಸ್ಸಿನ ಸಚ್ಚಿ ಅವರು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ವಕೀಲ, ಕವಿ, ರಂಗಭೂಮಿ ಕಲಾವಿದ, ಕಥೆಗಾರ, ಸಂಭಾಷಣೆಗಾರ, ನಿರ್ದೇಶಕ, ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದ ಸಚ್ಚಿ ಬಹುಮುಖ ಪ್ರತಿಭೆಯಾಗಿದ್ದರು. ಕೇರಳ ಹೈಕೋರ್ಟಿನಲ್ಲಿ 8 ವರ್ಷಗಳ ಕಾಲ ಕ್ರಿಮಿನಲ್ ಲಾಯರ್ ಆಗಿದ್ದರು.
ಎರಡು ಮೂರು ದಿನಗಳ ಹಿಂದೆ ಸೊಂಟದ ಭಾಗದಲ್ಲಿ ದೊಡ್ಡ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ, ನಂತರ ಚೇತರಿಸಿಕೊಳ್ಳಲಿಲ್ಲ ಎಂದು ತಿಳಿದು ಬಂದಿದೆ. ಸುಂದರ ಚಿತ್ರಗಳನ್ನು ಕೊಟ್ಟ ಸಚ್ಚಿ ಅವರ ಮೆದುಳಿಗೂ ರಕ್ತ ಪೂರೈಕೆ ಸ್ಥಗಿತವಾಗಿ ಸಮಸ್ಯೆ ಎದುರಾಗಿತ್ತು. ಕಳೆದೆರಡು ದಿನಗಳಿಂದ ವೆಂಟಿಲೇಟರ್ ನೆರವಿನಲ್ಲಿ ಉಸಿರಾಟ ನಡೆಸಿದ್ದಾರೆ.
ಪೃಥ್ವಿರಾಜ್ ಸುಕುಮಾರನ್ ನೆಚ್ಚಿನ ನಿರ್ದೇಶಕರಾಗಿದ್ದ ಸಚ್ಚಿ ನಿರ್ದೇಶನದ ಅಯ್ಯಪ್ಪನುಂ-ಕೋಶಿಯುಂ ಚಿತ್ರವು ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲಿ ರೀಮೇಕ್ ಆಗುತ್ತಿದೆ. ಕನ್ನಡದಲ್ಲಿಯೂ ಸಿನಿಮಾವನ್ನು ರೀಮೇಕ್ ಮಾಡುವ ಸಾಧ್ಯತೆ ಇದೆ.