ಕೇರಳ ಆನೆ ಹತ್ಯೆ: ಬಿಜೆಪಿ ಸಂಸದೆ ಮೇನಕಾ ಗಾಂಧಿ ವಿರುದ್ಧ ಎಫ್ಐಆರ್
ತಿರುವನಂತಪುರಂ, ಜೂನ್ 5: ಗರ್ಭಿಣಿ ಆನೆಯೊಂದು ಸ್ಫೋಟಕ ತುಂಬಿದ ಅನಾನಸ್ ಸೇವಿಸಿ ಮೃತಪಟ್ಟಿರುವ ಘಟನೆ ಕೇರಳದ ಪಾಲಕ್ಕಡ್ ಜಿಲ್ಲೆಯಲ್ಲಿ ನಡೆದಿತ್ತು. ಈ ಘಟನೆಗೆ ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.
ಈ ಘಟನೆ ಕುರಿತು ಬಿಜೆಪಿ ಸಂಸದೆ ಮೇನಕಾ ಗಾಂಧಿ ನೀಡಿದ ಹೇಳಿಕೆಗೆ ಈಗ ವಿವಾದಕ್ಕೆ ಕಾರಣವಾಗಿದೆ. ಮೇನಕಾ ಗಾಂಧಿ ಅವರು ಪಾಲಕ್ಕಡ್ ಜನತೆ ಮತ್ತು ಜಿಲ್ಲೆಯ ವಿರುದ್ಧ ದ್ವೇಷ ಹರಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ವಕೀಲ ಸುಭಾಷ್ ಚಂದ್ರನ್ ಎಫ್ಐಆರ್ ದಾಖಲಿಸುವಂತೆ ದೂರು ನೀಡಿದ್ದರು.
ಕೇರಳದಲ್ಲಿ ಗರ್ಭಿಣಿ ಆನೆ ಹತ್ಯೆ; ಒಬ್ಬ ಆರೋಪಿ ಬಂಧನ
Kerala: A case has been registered under section 153 IPC (Indian Penal Code) against BJP MP Maneka Gandhi in Malappuram for her statement against the district over the killing of a pregnant elephant in Palakkad. (File pic)
— ANI (@ANI) June 5, 2020
ಈ ದೂರಿನ ಅನ್ವಯ ಬಿಜೆಪಿ ನಾಯಕಿ ಮೆನೇಕಾ ಗಾಂಧಿ ವಿರುದ್ದ ಐಪಿಸಿ ಸೆಕ್ಷನ್ 153ರ (ಕೋಮು ಸಂಘರ್ಷಣೆಗೆ ಪ್ರೇರಣೆ) ಅಡಿಯಲ್ಲಿ ಕೇಸ್ ದಾಖಲಾಗಿದೆ. ಆನೆ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೇನಕಾ ಗಾಂಧಿ ಅವರು ಜಿಲ್ಲೆಯ ಜನತೆಯಲ್ಲಿ ಶಾಂತಿ ಕದಡುವ ಕೆಲಸ ಮಾಡ್ತಿದ್ದಾರೆ ಎಂದು ವಕೀಲರೊಬ್ಬರು ದೂರಿದ್ದಾರೆ.
ಗರ್ಭಿಣೆ ಆನೆಯ ಹತ್ಯೆಗೆ ಸಂಬಂಧಿಸಿದಂತೆ ಮಾತನಾಡಿದ್ದ ಮೆನೇಕಾ ಗಾಂಧಿ ''ಕೇರಳದಲ್ಲಿ ಮೂರು ದಿನಕ್ಕೊಂದು ಆನೆಯನ್ನು ಕೊಲ್ಲಲಾಗುತ್ತಿದೆ. ಮಲಪ್ಪುರಂ ಜಿಲ್ಲೆ ಅಪರಾಧಿಗಳ ಗೂಡಾಗಿದೆ. ವನ್ಯಜೀವಗಳ ವಾರ್ಡನ್ರನ್ನು ವಜಾ ಮಾಡಬೇಕು. ಅಪರಾಧಿಗಳೆಂದು ಅನುಮಾನ ಬಂದವರನ್ನು ಬಂಧಿಸಬೇಕು. ಆನೆಗಳ ರಕ್ಷಣೆಗೆ ಸರ್ಕಾರದ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಪಾಲಕ್ಕಡ್ ಜಿಲ್ಲೆಯಲ್ಲಿ ಹೆಚ್ಚು ಪ್ರಾಬಲ್ಯ ಹೊಂದಿರುವ ಜನರು ಆನೆ ಸಾವಿಗೆ ಕಾರಣವಾಗಿದ್ದಾರೆ ಎಂದಿದ್ದಾರೆ'' ಎಂದು ಹೇಳಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಶೀಘ್ರದಲ್ಲಿ ಉಳಿದ ಆರೋಪಿಗಳನ್ನು ಬಂಧಿಸುವುದಾಗಿ ಕೇರಳ ಅರಣ್ಯ ಸಚಿವರು ತಿಳಿಸಿದ್ದಾರೆ. ಈ ಬೆಳವಣಿಗೆಗೆ ಸಂಬಂಧಪಟ್ಟಂತೆ ತನಿಖೆಗೆ ಆದೇಶಿಸಲಾಗಿದೆ ಎಂದು ಸಿಎಂ ಪಿಣರಾಯಿ ವಿಜಯನ್ ಹೇಳಿದ್ದರು.