ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ, ಪುಳಕಗೊಂಡ ಭಕ್ತ ಜನಸಾಗರ
ಶಬರಿಮಲೆ, ಜನವರಿ 14: ಸಂಕ್ರಾಂತಿಯ ದಿನವಾದ ಇಂದು ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನವಾಗಿದ್ದು, ಭಕ್ತಸಾಗರ ಜ್ಯೋತಿಯ ದರ್ಶನ ಮಾಡಿ ಪುಳಕಗೊಂಡಿದ್ದಾರೆ.
ಮಕರವಿಳ್ಳಕ್ಕು (ಮಕರ ಜ್ಯೋತಿ) ದರ್ಶನ ಮಾಡಲು ಲಕ್ಷಾಂತರ ಜನ ಭಕ್ತಾದಿಗಳು ಇಂದು ಶಬರಿಮಲೆಯಲ್ಲಿ ಸೇರಿದ್ದರು. ಪೊನ್ನಂಬಲ ಬೇಡು ಬೆಟ್ಟದ ಮೇಲೆ ಜ್ಯೋತಿಯು ಮಿಂಚಿ ಭಕ್ತರಿಗೆ ದರ್ಶನ ನೀಡಿತು.
ಸಂಪ್ರದಾಯದಂತೆ ಮಂಡಲ ಪೂಜೆ ಆದ ನಂತರ ಸಂಜೆ 6:40 ಕ್ಕೆ ಬೆಟ್ಟದ ಮೇಲೆ ಮಕರ ಜ್ಯೋತಿ ದರ್ಶನವಾಯಿತು. ದರ್ಶನವಾದ ಕೂಡಲೇ ಭಕ್ತಾದಿಗಳು 'ಸ್ವಾಮಿ ಶರಣಂ ಅಯ್ಯಪ್ಪ' ಉದ್ಘಾಷಗಳನ್ನು ಕೂಗಿ, ಜ್ಯೋತಿಗೆ ಕೈ ಮುಗಿದರು.
ಮಕರ ಜ್ಯೋತಿಯನ್ನು ಅಯ್ಯಪ್ಪನ ಪ್ರತಿರೂಪ ಎಂದೇ ನಂಬಲಾಗುತ್ತದೆ. ಸಂಕ್ರಾಂತಿಯಂದು ಗೋಜರವಾಗುವ ಮಕರ ಜ್ಯೋತಿ ಅಥವಾ ಮಕರಲಿಳ್ಳಕ್ಕು ವನ್ನು ನೋಡಲು ದೇಶದ ವಿವಿದ ರಾಜ್ಯಗಳಿಂದ ಭಕ್ತಾದಿಗಳು ಲಕ್ಷಾಂತರ ಜನಸಂಖ್ಯೆಯಲ್ಲಿ ಆಗಮಿಸಿದ್ದರು.
ಅಯ್ಯಪ್ಪ ದೇಗುಲಕ್ಕೆ ಮಹಿಳೆಯರು ಪ್ರವೇಶಿಸಬಹುದೆಂದು ಸುಪ್ರಿಂ ತೀರ್ಪು ಬಂದ ನಂತರದ ಮೊದಲ ಮಕರ ಜ್ಯೋತಿ ದರ್ಶನ ಇದಾಗಿದೆ. ಈ ಬಾರಿಯಲ್ಲಿ ಕಳೆದ ವರ್ಷಕ್ಕಿಂತಲೂ ಭಕ್ತಾದಿಗಳ ಸಂಖ್ಯೆಯಲ್ಲಿ ಕಡಿಮೆ ಇದೆ ಎನ್ನಲಾಗಿದೆ. ಪೊಲೀಸರ ಶಿಸ್ತಿ ಭದ್ರತಾ ವ್ಯವಸ್ಥೆಯಿಂದಾಗಿ ಯಾವುದೇ ಅಹಿತಕರ ಘಟನೆಗಳು ನಡೆದ ವರದಿ ಆಗಿಲ್ಲ.