ಓಣಂ ಹಬ್ಬ; ಅಂತರರಾಜ್ಯ ಪ್ರಯಾಣಕ್ಕೆ KSRTC ದರ ಹೆಚ್ಚಳ
ತಿರುವನಂತಪುರಂ ಆಗಸ್ಟ್ 03: ವಾರಾಂತ್ಯ ಮತ್ತು ಓಣಂ ಸೀಸನ್ನಲ್ಲಿ ಅಂತಾರಾಜ್ಯ ಬಸ್ಗಳ ಪ್ರಯಾಣ ದರವನ್ನು ಕೆಎಸ್ಆರ್ಟಿಸಿ ಹೆಚ್ಚಿಸಿದೆ. ಈ ವರ್ಷದ ಸೆಪ್ಟೆಂಬರ್ 2 ರಿಂದ 12 ರವರೆಗೆ ಇರುವ ಓಣಂ ಸೀಸನ್ನಲ್ಲಿ ಹೆಚ್ಚಿನ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಪ್ರಯಾಣ ದರವನ್ನು ಹೆಚ್ಚಿಸಲಾಗಿದೆ.
ಸೀಸನ್ನಲ್ಲಿ ಪರಿಚಯಿಸಲಾದ ಹೆಚ್ಚುವರಿ ಬಸ್ಗಳಿಗೆ ಪ್ರಯಾಣಿಕರು ಕೌಂಟರ್ ಬುಕಿಂಗ್ ಅಥವಾ ಡಿಜಿಟಲ್ ಬುಕಿಂಗ್ ಅನ್ನು ಅವಲಂಬಿಸಿ ಸಾಮಾನ್ಯ ದರಕ್ಕಿಂತ ಶೇ 10-20 ಹೆಚ್ಚು ಶುಲ್ಕ ವಿಧಿಸಲಾಗುತ್ತದೆ. ಎಸಿ, ಎಕ್ಸ್ಪ್ರೆಸ್ ಮತ್ತು ಡಿಲಕ್ಸ್ ಸೇವೆಗಳಿಗೆ ಶುಲ್ಕಗಳು ಅನ್ವಯಿಸುತ್ತವೆ.
Breaking News: ಕೇರಳದಲ್ಲಿ ಓಣಂ ಹಬ್ಬದ ಮರುದಿನವೇ 31,445 ಮಂದಿಗೆ ಕೊರೊನಾವೈರಸ್!
ಸಾಮಾನ್ಯ ಅಂತರ-ರಾಜ್ಯ ಬಸ್ಗಳಿಗೆ, Kerala State Road Transport Corporation (KSRTC) ಕೌಂಟರ್ ಬುಕಿಂಗ್ಗೆ ಶೇ 10ರಷ್ಟು ಹೆಚ್ಚುವರಿ ಶುಲ್ಕವನ್ನು ವಿಧಿಸುತ್ತದೆ. ಈ ಅವಧಿಯಲ್ಲಿ ಆನ್ಲೈನ್ ಬುಕಿಂಗ್ಗೆ ಶೇ 30 ರಿಯಾಯಿತಿ ನೀಡದಿರಲು ನಿರ್ಧರಿಸಿದೆ. ಎಕ್ಸ್ಪ್ರೆಸ್ ಮತ್ತು ಡಿಲಕ್ಸ್ ಸೇವೆಗಳಿಗೆ, ಪ್ರಯಾಣಿಕರು ಶೇ 5 ರಿಂದ 10 ಹೆಚ್ಚು ಪಾವತಿಸಬೇಕಾಗುತ್ತದೆ. ಆಗಸ್ಟ್ನಿಂದ ವಾರಾಂತ್ಯದಲ್ಲಿ ಹೆಚ್ಚಿನ ಶುಲ್ಕ ವಿಧಿಸಲು ಕೆಎಸ್ಆರ್ಟಿಸಿ ನಿರ್ಧರಿಸಿದೆ.
ದುಬಾರಿ ದುನಿಯಾದಲ್ಲಿ ಜೀವನ ಮಾಡೋಕೆ ಕಷ್ಟ ಆಗುತ್ತಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ ಕರೆಂಟ್ ಹೀಗೆ ಬೆಲೆ ಏರಿಕೆ ಜನಸಾಮಾನ್ಯರನ್ನು ಹಿಂಡಿ ಹಿಪ್ಪೆ ಮಾಡಿದೆ. ನಷ್ಟದಲ್ಲಿರುವ ನಿಗಮವನ್ನು ಮೇಲೆತ್ತಲು ಪ್ರಯಾಣ ದರ ಏರಿಕೆ ಅಗತ್ಯ ಎಂದು ಸಂಸ್ಥೆ ಹೇಳಿದೆ. ಮಾರ್ಚ್ 30ರಂದು ಏರಿಕೆ ಮಾಡಲಾದ ಬಸ್, ಆಟೋ, ಟ್ಯಾಕ್ಸಿ ದರಗಳು ಮೇ 1 ರಿಂದ ಜಾರಿಗೆ ತರಲಾಗಿತ್ತು.
ರಾಜ್ಯದ ಖಾಸಗಿ ಬಸ್ ಮಾಲೀಕರ ಸಂಘ ಕನಿಷ್ಠ ಪ್ರಯಾಣ ದರವನ್ನು ರೂ. 8 ರಿಂದ 12ರ ತನಕ ಏರಿಕೆ ಮಾಡಲು ಅವಕಾಶ ನೀಡಬೇಕು ಎಂದು ಬೇಡಿಕೆ ಇಟ್ಟಿತ್ತು. ವಿದ್ಯಾರ್ಥಿಗಳ ಟಿಕೆಟ್ ದರಗಳನ್ನು 6 ರೂ. ಏರಿಕೆಗೆ ಮನವಿ ಮಾಡಿತ್ತು. ಆದರೆ ವಿದ್ಯಾರ್ಥಿ ಟಿಕೆಟ್ ದರದ ವಿಚಾರದಲ್ಲಿ ಸರ್ಕಾರ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಖಾಸಗಿ ಬಸ್ ಮಾಲೀಕರ ಸಂಘ ಪ್ರಯಾಣ ದರ ಏರಿಕೆ ಮಾಡಲು ಅನುಮತಿ ನೀಡಬೇಕು ಎಂದು ರಾಜ್ಯದಲ್ಲಿ ಪ್ರತಿಭಟನೆ ನಡೆಸಿತ್ತು. ಸರ್ಕಾರ ನಿಗದಿ ಮಾಡಿರುವ ಹೊಸ ದರಕ್ಕೆ ಸಹ ಮಾಲೀಕರು ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಈ ದರದಲ್ಲಿ ಸಾರಿಗೆ ಸೇವೆ ಮುಂದುವರೆಸುವುದು ಕಷ್ಟ ಎಂದು ಸಹ ಹೇಳಿದ್ದಾರೆ.
ಕೇರಳದಲ್ಲಿ ಅತಿದೊಡ್ಡ ಹಬ್ಬ
ದಕ್ಷಿಣ ಭಾರತದ ರಾಜ್ಯಗಳು ತಮ್ಮ ಸಾಂಸ್ಕೃತಿಕ, ಸಾಂಪ್ರದಾಯಿಕ ಭಿನ್ನತೆಯಿಂದಾಗಿಯೇ ಭಾರತ ಮಾತ್ರವಲ್ಲದೆ ವಿದೇಶದಲ್ಲೂ ಬಹಳ ಪ್ರಸಿದ್ಧಿ ಪಡೆದಿವೆ. ಕರ್ನಾಟಕದ ನವರಾತ್ರಿ (ದಸರಾ), ಯುಗಾದಿ, ಕೇರಳದ ಓಣಂ ಸೇರಿದಂತೆ ತಮಿಳುನಾಡು, ಆಂಧ್ರಪ್ರದೇಶದ ಹಬ್ಬ ಹಾಗೂ ಆಚರಣೆಗಳು ಬೇರೆ ರಾಜ್ಯಗಳಿಗಿಂತ ಬಹಳ ವಿಭಿನ್ನವಾಗಿವೆ. ಸೆಪ್ಟೆಂಬರ್ 2 ರಿಂದ ಕೇರಳದಲ್ಲಿ ಓಣಂ ಹಬ್ಬ ಶುರುವಾಗಿದೆ. ಮಲಯಾಳಿಗರಿಗೆ ಓಣಂ ಬಹಳ ಪ್ರಮುಖ ಹಾಗೂ ಅತಿದೊಡ್ಡ ಹಬ್ಬ. ಕರ್ನಾಟಕದಲ್ಲಿ ವರ್ಷದ ಮೊದಲ ಹಬ್ಬವಾದ ಯುಗಾದಿಯನ್ನು ಹೇಗೆ ಆಚರಿಸುತ್ತಾರೋ ಅದೇರೀತಿ ಮಲಯಾಳಿಗರಿಗೆ ಪಂಚಾಂಗದ ಮೊದಲ ತಿಂಗಳು ಚಿಂಗಮ್ ಸಂದರ್ಭದಲ್ಲಿ ಆಚರಿಸಲಾಗುವ ಮೊದಲ ಹಬ್ಬ ಓಣಂ. ಸೆಪ್ಟೆಂಬರ್ 2 ರಿಂದ 12 ರವರೆಗೆ ಓಣಂ ಸಂಭ್ರಮಾಚರಣೆ ಇರುತ್ತದೆ.
ರೈತ ಸಮುದಾಯಕ್ಕೆ ಅತಿದೊಡ್ಡ ಹಬ್ಬ
ದೇವರ ನಾಡು ಎಂದೇ ಕರೆಯಲ್ಪಡುವ ಕೇರಳದಲ್ಲಿ ಪ್ರತಿವರ್ಷ ಆಗಸ್ಟ್- ಸೆಪ್ಟೆಂಬರ್ ತಿಂಗಳಲ್ಲಿ ಓಣಂ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬವನ್ನು ತಿರು-ಓಣಂ ಅಥವಾ ತಿರುವೋಣಂ, ಓಣಂ ಎಂದು ಕರೆಯುತ್ತಾರೆ. ವರ್ಷದ ಮೊದಲ ಪೈರು ಅಥವಾ ಬೆಳೆಯ ಖುಷಿಯನ್ನು ಓಣಂ ಹಬ್ಬದ ಸಂದರ್ಭದಲ್ಲಿ ಆಚರಿಸಲಾಗುತ್ತದೆ. ಹೀಗಾಗಿ, ರೈತ ಸಮುದಾಯ ಸೇರಿದಂತೆ ಕೇರಳದ ಎಲ್ಲರಿಗೂ ಇದು ಬಹಳ ದೊಡ್ಡ ಹಬ್ಬ. ಈ ಹಬ್ಬಕ್ಕೆ ತನ್ನದೇ ಆದ ಇತಿಹಾಸವಿದೆ. ವಿಶ್ವದೆಲ್ಲೆಡೆ ಇರುವ ಮಲಯಾಳಂ ಸಮುದಾಯದವರು ಓಣಂ ಹಬ್ಬದಂದು ರಾಜ ಮಹಾಬಲಿ (ಬಲಿ ಚಕ್ರವರ್ತಿ) ಓಣಂ ಹಬ್ಬದಂದು ಪಾತಾಳ ಲೋಕದಿಂದ ಭೂಮಿಗೆ ವಾಪಾಸ್ ಬರುತ್ತಾನೆ ಎಂದು ನಂಬುತ್ತಾರೆ. ಕರ್ನಾಟಕದಲ್ಲಿ ದಸರಾವನ್ನು ಹೇಗೆ ವಿಶೇಷವಾಗಿ ಆಚರಿಸುತ್ತೀವೋ ಅದೇ ರೀತಿ ಕೇರಳದಲ್ಲಿ ಓಣಂ ಆಚರಿಸಲಾಗುತ್ತದೆ.
ಸಾಂಪ್ರದಾಯಿಕ ಉಡುಗೆ, ಕೇರಳದ ಸಿಹಿ ಭಕ್ಷ್ಯ ವಿಶೇಷ
10 ದಿನಗಳ ಕಾಲ ಓಣಂ ಹಬ್ಬವನ್ನು ಆಚರಿಸಲಾಗುತ್ತದೆ. ಐಶ್ವರ್ಯ, ಸಮೃದ್ಧಿ ಹಬ್ಬವಾದ 9ನೇ ದಿನವನ್ನು ತಿರು ಓಣಂ ಎಂದು ಕರೆಯಲಾಗುತ್ತದೆ. ಓಣಂ ಹಬ್ಬದಲ್ಲಿ ಮಹಿಳೆಯರು ಹೂವಿನಿಂದಲೇ ರಂಗೋಲಿ ಬಿಡಿಸಿ, ಸಾಂಪ್ರದಾಯಿಕ ಉಡುಗೆ ತೊಟ್ಟು, ಕೇರಳದ ಸಿಹಿ ಭಕ್ಷ್ಯಗಳನ್ನು ಮಾಡುತ್ತಾರೆ. ಹಾಗೇ, ದೋಣಿಯಾಟ, ಕೇರಳದ ಸಾಂಪ್ರದಾಯಿಕ ನೃತ್ಯ ಕೂಡ ಈ ಹಬ್ಬದ ಪ್ರಮುಖ ಆಕರ್ಷಣೆ. ಓಣಂ ಹಬ್ಬದಲ್ಲಿ ಮಹಿಳೆಯರು ವಿವಿಧ ಬಣ್ಣದ ಹೂವುಗಳನ್ನು ತಂದು, ಮನೆಯ ಮುಂದೆ ಪೂಕಳಂ ಎನ್ನುವ ಸುಂದರ ಹೂವಿನ ರಂಗೋಲಿಯನ್ನು ಹಾಕುತ್ತಾರೆ ಮತ್ತು ಸಾಂಪ್ರದಾಯಿಕ ಹಾಡುಗಳನ್ನು ಹಾಡುತ್ತಾರೆ. ಓಣಂ ಹಬ್ಬದಲ್ಲಿ ಪೂಕಳಂ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಕೇರಳದ ಸಾಂಪ್ರದಾಯಿಕ ಶೈಲಿಯ ಅಡುಗೆ
ಹಾಗೇ, ಓಣಂ ಹಬ್ಬದ ಸಂದರ್ಭದಲ್ಲಿ ಜಾನಪದ ಹುಲಿ ನೃತ್ಯ, ಹಗ್ಗಜಗ್ಗಾಟ (ವಾಡಂ ವಾಲಿ), ದೋಣಿಯಾಟ (ವಲ್ಲಂ ಕಲಿ) ಪ್ರಮುಖ ಆಕರ್ಷಣೆಯಾಗಿರುತ್ತದೆ. ಓಣಂ ಹಬ್ಬದ ಪ್ರಯುಕ್ತ ಮಹಿಳೆಯರು ಕೇರಳದ ಸಾಂಪ್ರದಾಯಿಕ ಬಿಳಿ ಮತ್ತು ಚಿನ್ನದ ಬಣ್ಣದ ಅಂಚಿರುವ ಸೀರೆಯನ್ನುಟ್ಟು ಸಂಭ್ರಮಿಸುತ್ತಾರೆ. ಹಾಗೇ, ತುಂಬಿ ತುಲ್ಲಾಲ್ ಎಂಬ ಸಾಂಪ್ರದಾಯಿಕ ಜಾನಪದ ನೃತ್ಯವನ್ನು ಕೂಡ ಮಹಿಳೆಯರು ಪ್ರದರ್ಶಿಸುತ್ತಾರೆ.
ಓಣಂ ಹಬ್ಬದಲ್ಲಿ ಊಟ ಕೂಡ ಬಹಳ ವಿಶೇಷವಾಗಿರುತ್ತದೆ. ಓಣಸಡ್ಯ ಎಂಬುದೂ ತಿರು-ಓಣಂ ದಿನ ಮಾಡುವ ವಿಶೇಷ ಊಟವಾಗಿದೆ. ಹೊಸ ಬೆಳೆಗಳನ್ನು ತಂದು ಈ ದಿನ ಆಹಾರವನ್ನು ತಯಾರಿಸಲಾಗುತ್ತದೆ. ಈ ಊಟವು ರಾಜ ಮನೆತನದ ವೈಭೋಗದ ಊಟವಾಗಿದ್ದು, ಮೂರು ಬಗೆಯ ಪಾಯಸ ಸೇರಿದಂತೆ ಇನ್ನೂ ನಾನಾ ರೀತಿಯ ಸಿಹಿ ತಿಂಡಿ, ಕೇರಳದ ಸಾಂಪ್ರದಾಯಿಕ ಶೈಲಿಯ ಅಡುಗೆ ಮಾಡಲಾಗುತ್ತದೆ.