ವಿಮಾನ ಅಪಘಾತ ನಡೆದ ಸ್ಥಳದ ದೃಶ್ಯ ಉಪಗ್ರಹ ಚಿತ್ರಗಳಲ್ಲಿ ಕಾಣಿಸಿದ್ದು ಹೀಗೆ...
ಕೋಯಿಕ್ಕೋಡ್, ಆಗಸ್ಟ್ 13: ದುಬೈನಿಂದ ಬಂದು ಕೇರಳದ ಕೋಯಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಇಳಿಯುವ ಸಂದರ್ಭದಲ್ಲಿ ಆಗಸ್ಟ್ 7ರಂದು ಅಪಘಾತಕ್ಕೀಡಾದ ಏರ್ ಇಂಡಿಯಾ ಎಕ್ಸ್ಪ್ರೆಸ್ 1344 ವಿಮಾನದ ಅವಶೇಷಗಳ ದೃಶ್ಯಗಳನ್ನು ಉಪಗ್ರಹ ಚಿತ್ರಗಳ ಮೂಲಕ ಸೆರೆ ಹಿಡಿಯಲಾಗಿದೆ. ರನ್ವೇಯಿಂದ ಕೆಲವು ಮೀಟರ್ ದೂರದಲ್ಲಿ ಬಿದ್ದಿರುವ ಬೋಯಿಂಗ್ 737 ವಿಮಾನಕ್ಕೆ ನೀಲಿ ಬಣ್ಣದ ಟಾರ್ಪಲಿನ್ ಹೊದಿಸಲಾಗಿದ್ದು, ಈ ದೃಶ್ಯಗಳು ಸ್ಯಾಟಲೈಟ್ ಇಮೇಜಸ್ನಲ್ಲಿ ಸೆರೆಯಾಗಿವೆ.
ವಿಮಾನದ ಮುಂದಿನ ಭಾಗವು ಉಳಿದ ಭಾಗಗಳಿಗಿಂತ ಸ್ವಲ್ಪ ದೂರ ಮುಂದೆ ಬಿದ್ದಿರುವುದು ಈ ಫೋಟೊಗಳಲ್ಲಿ ಕಾಣಿಸುತ್ತದೆ. ಬಾಹ್ಯಾಕಾಶ ಸಂಸ್ಥೆ ಮ್ಯಾಕ್ಸರ್ ಟೆಕ್ನಾಲಜೀಸ್, ಮಂಗಳವಾರ ಬೆಳಿಗ್ಗೆ ಈ ಅಪರೂಪದ ಉಪಗ್ರಹ ಚಿತ್ರಗಳನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ.
5 ನಿಮಿಷಗಳಲ್ಲೇ 150ಕ್ಕೂ ಹೆಚ್ಚು ಪ್ರಯಾಣಿಕರ ಪ್ರಾಣ ಉಳಿದಿದ್ದು ಹೇಗೆ?
ಕೇರಳದಲ್ಲಿ ವಿಪರೀತ ಮಳೆಯಾಗುತ್ತಿರುವುದರಿಂದ ವಿಮಾನಗಳ ಅವಶೇಷಗಳನ್ನು ಹವಾಮಾನ ವೈಪರೀತ್ಯದಿಂದ ಕಾಪಾಡಲು ಟಾರ್ಪಲಿನ್ ಮೂಲಕ ಸಂಪೂರ್ಣವಾಗಿ ಮುಚ್ಚಲಾಗಿದೆ. ಈ ವಿಮಾನ ಅವಘಡಕ್ಕೆ ನಿಖರ ಕಾರಣ ಏನು ಎಂಬುದನ್ನು ಪತ್ತೆಹಚ್ಚಲು ತನಿಖೆ ನಡೆಸಲಾಗುತ್ತಿದೆ. ಹೀಗಾಗಿ ವಿಮಾನದ ಅವಶೇಷಗಳನ್ನು ಅಲ್ಲಿಂದ ತೆರವುಗೊಳಿಸಿಲ್ಲ. ಮುಂದೆ ಓದಿ...
ಅಪಘಾತದ ಸ್ಥಳದ ಚಿತ್ರಣ
ಈ ಅಪಘಾತಕ್ಕೀಡಾದ ಸ್ಥಳದಲ್ಲಿ ಧ್ವಂಸವಾದ ವಿಮಾನವಲ್ಲದೆ, ಎರಡು ಕ್ರೇನ್ಗಳು, ಒಂದು ಟ್ರಕ್ ಮತ್ತು ಇತರೆ ಕೆಲವು ವಾಹನಗಳು ಇರುವುದು ಸ್ಯಾಟಲೈಟ್ ಚಿತ್ರಗಳಲ್ಲಿ ಸೆರೆಯಾಗಿವೆ. ಆಗಸ್ಟ್ 7ರಂದು ನಡೆದ ಈ ಅಪಘಾತದಲ್ಲಿ ಪೈಲಟ್ ಕ್ಯಾಪ್ಟನ್ ದೀಪಕ್ ಸಾಥೆ ಮತ್ತು ಸಹ ಪೈಲಟ್ ಅಖಿಲೇಶ್ ಕುಮಾರ್ ಶರ್ಮಾ ಸೇರಿದಂತೆ 18 ಮಂದಿ ಮೃತಪಟ್ಟಿದ್ದಾರೆ. 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.(ಉಪಗ್ರಹ ಚಿತ್ರ ಕೃಪೆ: ಮ್ಯಾಕ್ಸರ್ ಟೆಕ್ನಾಲಜೀಸ್)
ತನಿಖೆ ಪೂರ್ಣಗೊಳ್ಳದೆ ಕಾರಣ ತಿಳಿಯಲಾರದು
ಘಟನೆ ಸ್ಥಳದಲ್ಲಿ ಕಪ್ಪುಪೆಟ್ಟಿಗೆ ಲಭ್ಯವಾಗಿದ್ದು, ಇದು ವಿಮಾನ ಅಪಘಾತಕ್ಕೆ ನಿಖರ ಕಾರಣವನ್ನು ಪತ್ತೆ ಮಾಡಲು ತನಿಖೆಗೆ ಸಹಕಾರಿಯಾಗುವ ನಿರೀಕ್ಷೆಯಿದೆ. ಈ ಸಂದರ್ಭಕ್ಕೆ ಯಾವುದೇ ಕಾರಣವನ್ನು ಊಹಿಸಲು ಸಾಧ್ಯವಾಗುವುದಿಲ್ಲ. ಸಮರ್ಪಕ ತನಿಖೆಯಾದ ಬಳಿಕವಷ್ಟೇ ಅಪಘಾತಕ್ಕೆ ಕಾರಣ ತಿಳಿಯಬಹುದು ಎಂದು ವಿಮಾನ ಅಪಘಾತ ತನಿಖಾ ಬ್ಯೂರೋದ ಮುಖ್ಯಸ್ಥ ಅರಬಿಂದೋ ಹಂಡಾ ತಿಳಿಸಿದ್ದಾರೆ.(ಉಪಗ್ರಹ ಚಿತ್ರ ಕೃಪೆ: ಮ್ಯಾಕ್ಸರ್ ಟೆಕ್ನಾಲಜೀಸ್)
ಕೇರಳ ವಿಮಾನ ದುರಂತ; ಡಿಸಿ ಸೇರಿ 600 ಜನರಿಗೆ ಕ್ವಾರಂಟೈನ್
ಮೃತರಿಗೆ ತಲಾ 1.19 ಕೋಟಿ ರೂ. ಪರಿಹಾರ
ಈ ಅಪಘಾತದಲ್ಲಿ ಮೃತಪಟ್ಟ ಇಬ್ಬರು ಪೈಲಟ್ಗಳು ಸೇರಿದಂತೆ ಎಲ್ಲ 18 ಮಂದಿಯ ಕುಟುಂಬಕ್ಕೂ ಏರ್ ಇಂಡಿಯಾ ಸಂಸ್ಥೆ ತಲಾ 1.19 ಕೋಟಿ ರೂ. ಪರಿಹಾರ ನೀಡಬೇಕಿದೆ. ವಿಮಾನ ಪ್ರಯಾಣಿಕರ ಹಕ್ಕುಗಳ ಕುರಿತು ಕಳೆದ ಫೆಬ್ರವರಿಯಲ್ಲಿ ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆ ಅನ್ವಯ ಗಂಭೀರವಾಗಿ ಗಾಯಗೊಂಡಿರುವವರಿಗೂ ಇಷ್ಟು ಮೊತ್ತದ ಪರಿಹಾರ ನೀಡಬೇಕಾಗುತ್ತದೆ.
ಡಿಜಿಸಿಎ ಮುಖ್ಯಸ್ಥರ ವಜಾಕ್ಕೆ ಪೈಲಟ್ಗಳ ಆಗ್ರಹ
ವಿಮಾನದ ಲ್ಯಾಂಡಿಂಗ್ ಸಮರ್ಪಕವಾಗಿ ಮಾಡಿರಲಿಲ್ಲ ಎಂದು ಡಿಜಿಸಿಎ ಮುಖ್ಯಸ್ಥ ಅರುಣ್ ಕುಮಾರ್ ಹೇಳಿಕೆ ನೀಡಿದ್ದರು. ಇದಕ್ಕೆ ಭಾರತೀಯ ವಾಣಿಜ್ಯ ಪೈಲಟ್ಗಳ ಒಕ್ಕೂಟ (ಐಸಿಪಿಎ) ಮತ್ತು ಇಂಡಿಯನ್ ಪೈಲಟ್ಸ್ ಗಿಲ್ಡ್ (ಐಪಿಜಿ) ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ. ಅರುಣ್ ಕುಮಾರ್ ಅವರಿಗೆ ವಿಮಾನಯಾನ ಕ್ಷೇತ್ರದ ಬಗ್ಗೆ ಅಗತ್ಯ ತಿಳಿವಳಿಕೆಯೇ ಇಲ್ಲ, ಅವರಿಗೆ ವಿಮಾನ ಹಾರಾಡಿಸಿದ ಅನುಭವವೂ ಇಲ್ಲ. ತಾಂತ್ರಿಕ ಜ್ಞಾನ ಇಲ್ಲದವರನ್ನು ಏಕೆ ಈ ಹುದ್ದೆಯಲ್ಲಿ ಇರಿಸಿದ್ದೀರಿ? ಅವರನ್ನು ಅದರಿಂದ ತೆಗೆದುಹಾಕಿ ಎಂದು ಹೇಳಿದೆ.