ಚಿನ್ನದ ಸ್ಮಗಲಿಂಗ್ ಕೇಸ್: ಫಜೀಲ್ ವಿರುದ್ಧ ಜಾಮೀನು ರಹಿತ ವಾರೆಂಟ್
ಕೊಚ್ಚಿ, ಜುಲೈ 15: ಕೇರಳದ ಚಿನ್ನ ಸ್ಮಗಲಿಂಗ್ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನ ಸುರೇಶ್ ಹಾಗೂ ಸಂದೀಪ್ ಅವರನ್ನು 14 ದಿನಗಳ ಕಾಲ ರಾಷ್ಟ್ರೀಯ ತನಿಖಾ ತಂಡ ( ಎನ್ಐಎ) ಕಸ್ಟಡಿಗೆ ನೀಡಲಾಗಿದೆ. ಈ ನಡುವೆ ಮತ್ತೊಬ್ಬ ಆರೋಪಿ ಫಜೀಲ್ ಫರೀದ್ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಲಾಗಿದೆ.
ಬೆಂಗಳೂರಿನ ಕೋರಮಂಗಲದಲ್ಲಿ ಬಂಧಿತರಾಗಿದ್ದ ಆರೋಪಿಗಳನ್ನು ಕೊಚ್ಚಿಯಲ್ಲಿರುವ ಎನ್ಐಎ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಕಸ್ಟಡಿಗೆ ಪಡೆದಿರುವ ಎನ್ಐಎ ತಂಡ ವಿಚಾರಣೆ ಆರಂಭಿಸಿದೆ.
ಎನ್ಐಎ ಕಸ್ಟಡಿಗೆ ಸ್ವಪ್ನ ಸುರೇಶ್: ಕೋರಮಂಗಲದಿಂದ ಕೊಚ್ಚಿ ತನಕ
ಈ ಪ್ರಕರಣದಲ್ಲಿ ಸರಿತ್ ಪಿಎಸ್ ಮೊದಲ ಆರೋಪಿ(ಎ1) ಆಗಿದ್ದರೆ, ಸ್ವಪ್ನ ಸುರೇಶ್(ಎ2), ನಾಪತ್ತೆಯಾಗಿರುವ ಫಜೀಲ್ ಫರೀದ್(ಎ3) ಹಾಗೂ ಸಂದೀಪ್ ನಾಯರ್ (ಎ4) ಉಳಿದ ಆರೋಪಿಗಳಾಗಿದ್ದಾರೆ. ಫಜೀಲ್ ಪತ್ತೆಯಾಗಿ ಕೊಚ್ಚಿ ನಗರ ಡಿಸಿಪಿ ಜಿ ಪೂಂಗುಳಿ ನೇತೃತ್ವದ ತಂಡವನ್ನು ರಚಿಸಲಾಗಿದೆ ಎಂದು ಕೇರಳ ಡಿಜಿಪಿ ತಿಳಿಸಿದ್ದಾರೆ.
ಬಗೆದಷ್ಟು ಹೊರ ಬರುತ್ತಿರುತ್ತಿವೆ ಸತ್ಯ
ಚಿನ್ನದ ಸ್ಮಗಲಿಂಗ್ ನಿಂದ ಬಂದ ಹಣವನ್ನು ಫಜೀಲ್ ಫರೀದ್ ಹಾಗೂ ಗ್ಯಾಂಗ್ ದುಷ್ಕೃತ್ಯಗಳಿಗೆ ಬಳಸಲು ಯೋಜನೆ ಹಾಕಿಕೊಂಡಿತ್ತು ಎಂಬ ಸತ್ಯ ಬೆಳಕಿಗೆ ಬಂದಿದೆ. ಸ್ವಪ್ನ ಹಾಗೂ ಸಂದೀಪ್ ಕೇರಳದಿಂದ ಕೋರಮಂಗಲ ತಲುಪವವರೆಗೂ ಅವರ ಬೆನ್ನ ಹಿಂದೆ ಅವರಿಗೆ ತಿಳಿಯದಂತೆ ಒಂದು ತಂಡ ಫಾಲೋ ಮಾಡಿದೆ. ಇದು ಬರೀ 30 ಕೆಜಿ 15 ಕೋಟಿ ರು ವ್ಯವಹಾರ ಮಾತ್ರವಲ್ಲ, ಬೇರೆಯದ್ದೇ ದೊಡ್ಡ ಮಟ್ಟದ ಅವ್ಯವಹಾರವಿದೆ ಎಂದು ತಿಳಿದು ಬಂದಿದೆ.
ಫಜೀಲ್ ಹುಡುಕಾಟಕ್ಕೆ ಇಂಟರ್ ಪೋಲ್
ಚಿನ್ನದ ಸ್ಮಗಲಿಂಗ್ ಕೇಸಿನ ಎ3 ಫಜೀಲ್ ಫರೀದ್ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಲಾಗಿದೆ. ಸದ್ಯ ಆತ ದುಬೈನಲ್ಲಿ ಅಡಗಿ ಕುಳಿತಿರುವ ಸಂಭವವಿದ್ದು, ಇಂಟರ್ ಪೋಲ್ ನೆರವು ಕೋರಲಾಗುವುದು, ವಾರೆಂಟ್ ಕಾಪಿ ಇಂಟರ್ ಪೋಲ್ ಗೆ ನೀಡಲಾಗುತ್ತದೆ ಎಂದು ಎನ್ಐಎ ವಿಶೇಷ ನ್ಯಾಯಾಲಯಕ್ಕೆ ತನಿಖಾ ತಂಡ ತಿಳಿಸಿದೆ. ಈ ನಡುವೆ ಸರೀತ್, ಸ್ವಪ್ನ, ಸಂದೀಪ್ ಪ್ರತ್ಯೇಕ ವಿಚಾರಣೆ ನಡೆಸಲಾಗುತ್ತಿದೆ. ಶಿವಶಂಕರ್ ಅವರನ್ನು ಕಸ್ಟಮ್ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ಯಾರು ಯಾರು ಆರೋಪಿಗಳು
ಸ್ವಪ್ನ ಪ್ರಭ ಸುರೇಶ್, ಫಜೀಲ್ ಫರೀದ್, ಸಂದೀಪ್ ನಾಯರ್ ಹಾಗೂ ಸರೀತ್ ಕುಮಾರ್ ಅವರ ವಿಚಾರಣೆಗೆ ಅಗತ್ಯವಿದೆ ಎಂದು ಎನ್ಐಎ ಅಧಿಕಾರಿಗಳು ಚಾರ್ಜ್ ಶೀಟ್ ನಲ್ಲಿ ಹೇಳಿದ್ದಾರೆ. ಈ ಪೈಕಿ ಫಜೀಲ್ ಫರೀದ್ ಇನ್ನೂ ಪತ್ತೆಯಾಗಿಲ್ಲ, ಯುಎಇ ಕಾನ್ಸುಲೇಟ್ ಕಚೇರಿಯ ಪಿಆರ್ ಒ ಪಿಎಸ್ ಸರೀತ್ ಮೊದಲಿಗೆ ಬಂಧನವಾಗಿದ್ದು, ಆತನ ಮೂಲಕವೇ ಸ್ವಪ್ನ ಈ ಕೇಸಿನಲ್ಲಿರುವುದು ಪತ್ತೆಯಾಗಿತ್ತು. ಸಿಎಂ ಪಿಣರಾಯಿ ವಿಜಯನ್ ಪ್ರಧಾನ ಕಾರ್ಯದರ್ಶಿ ಶಿವಶಂಕರ್ ಜೊತೆ ಸ್ವಪ್ನ ಸಂಪರ್ಕದಲ್ಲಿರುವುದು ಪತ್ತೆಯಾಗಿದೆ.
ಏನಿದು ಪ್ರಕರಣ
ರಾಜತಾಂತ್ರಿಕ ರಕ್ಷಣೆ ಹೊಂದಿರುವ ''ಡಿಪ್ಲೊಮ್ಯಾಟಿಕ್ ಬ್ಯಾಗೇಜ್'' ನಲ್ಲಿದ್ದ 30 ಕೆಜಿ ಚಿನ್ನವನ್ನು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶ ಪಡಿಸಿಕೊಂಡಿದ್ದರು. ಸುಮಾರು 15 ಕೋಟಿ ರೂಪಾಯಿ ಮೌಲ್ಯದ ಈ ಚಿನ್ನ ಅಕ್ರಮ ಸಾಗಣೆಯ ಆರೋಪಿ ರಾಜತಾಂತ್ರಿಕ ಕಚೇರಿಯ ಮಾಜಿ ಸಿಬ್ಬಂದಿ ಸ್ವಪ್ನ ಸುರೇಶ್ ಎಂದು ಆರೋಪಿಸಲಾಗಿದೆ.
ನಾಲ್ಕೈದು ದಿನಗಳಿಂದ ನಾಪತ್ತೆಯಾಗಿದ್ದ ಸ್ವಪ್ನ ಆನ್ ಲೈನ್ ಮೂಲಕ ಜಾಮೀನು ಅರ್ಜಿ ಹಾಕಿದ್ದರು. ಯುಎಪಿಎ ಕಾಯ್ದೆ 1967 ಉಲ್ಲಂಘನೆಯಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಇಂದು ಜಾಮೀನು ಅರ್ಜಿ ವಿಚಾರಣೆ ಸಾಧ್ಯವಿಲ್ಲ ಎಂದು ಮುಂದಿನ ಮಂಗಳವಾರಕ್ಕೆ ಮುಂದೂಡಲಾಗಿದೆ.