ತಂದೆ ಸಾವು; ಫೇಸ್ಬುಕ್ ಮೂಲಕ ಅಂತಿಮ ದರ್ಶನ ಪಡೆದ ಕೊರೊನಾ ರೋಗಿ!
ತಿರುವನಂತಪುರಂ, ಮಾರ್ಚ್ 13: ದೇಶದಲ್ಲಿ ಮಹಾಮಾರಿ ಕೊರೊನಾ (ಕೋವಿಡ್ 19) ವೈರಸ್ ಸೋಂಕು ದಿನದಿಂದ ದಿನಕ್ಕೆ ತಲ್ಲಣ ಸೃಷ್ಟಿಸುತ್ತಿದೆ. ದೇಶದಲ್ಲಿ 83 ಜನಕ್ಕೆ ಸೋಂಕು ತಗುಲಿ, ಒಬ್ಬ ಕರ್ನಾಟಕದ ವ್ಯಕ್ತಿ ಮೃತಪಟ್ಟಿದ್ದಾರೆ.
ಅತಿ ಹೆಚ್ಚು ಕೊರೊನಾ ಪ್ರಕರಣಗಳು ಕೇರಳದಲ್ಲಿ ದಾಖಲಾಗಿವೆ. ಕೊರೊನಾ ಹಿನ್ನೆಲೆಯಲ್ಲಿ ಕೇರಳದಲ್ಲಿ ಒಂದು ಮನಕಲುಕುವ ಘಟನೆ ನಡೆದಿದೆ. ಕೊರೊನಾ ಸೋಂಕಿಗೆ ತುತ್ತಾಗಿ ತೀವ್ರ ನಿಗಾ ಘಟಕದಲ್ಲಿರುವ ಕೇರಳದ ಯುವಕನೊಬ್ಬ ಮೃತಪಟ್ಟ ತನ್ನ ತಂದೆಯ ಅಂತ್ಯ ಸಂಸ್ಕಾರದದಲ್ಲಿ ನೇರವಾಗಿ ಭಾಗಿಯಾಗದ್ದಕ್ಕಾಗಿ ವಿಡಿಯೋ ಕಾಲ್ ಮೂಲಕ ಭಾಗಿಯಾಗಿದ್ದಾನೆ.
ಬಾವಲಿಗಳ ಸಾಮೂಹಿಕ ಸಾವು: ಕೇರಳದಲ್ಲಿ ಹೆಚ್ಚಾಗಿದೆ ಭಯ!
ಈ ಸುದ್ದಿ ಕೇವಲ ಕೇರಳ ಅಷ್ಟೇ ಅಲ್ಲದೇ ದೇಶಾದ್ಯಂತ ತಲ್ಲಣ ಸೃಷ್ಟಿಸಿದೆ.
ಕತಾರ್ನಿಂದ ಮರಳಿದ್ದ ಯುವಕ
ಕೇರಳದ ಕೊಟ್ಟಾಯಂನ ಲಿನೋ ಅಬೆಲ್ ಎನ್ನುವ ಯುವಕ ಕತಾರ್ನಿಂದ ಮರಳಿದ್ದರು. ಕೆಮ್ಮು ನೆಗಡಿಯಿಂದ ಬಳಲುತ್ತಿದ್ದ ಅವರನ್ನು ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೆಸಿದಾಗ ಕೊರೊನಾ ಸೋಂಕು ತಗುಲಿರುವುದು ಗೊತ್ತಾಗಿತ್ತು. ಅವರನ್ನು ಮಾರ್ಚ್ 8 ರಂದು ಕೇರಳದ ಕೊಟ್ಟಾಯಂನ ವೈದ್ಯಕೀಯ ಕಾಲೇಜಿಗೆ ಸೇರಿಸಲಾಗಿತ್ತು ಆದರೆ, ಅವರ ತಂದೆ ಕೊಟ್ಟಾಯಂ ವೈದ್ಯಕೀಯ ಕಾಲೇಜಿನಲ್ಲಿ ಪಾರ್ಶ್ವವಾಯುವಿನಿಂದ ಮಾರ್ಚ್ 9 ರಂದು ಕೊನೆಯುಸಿರೆಳದಿದ್ದರು. ತಂದೆಯ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಬೇಕಿದ್ದ ಲಿನೋ ಅಬೆಲ್ ಕೊರೊನಾ ಸೋಂಕಿನಿಂದ ಭಾಗಿಯಾಗಲಿಕ್ಕೆ ಆಗದೇ, ತಮ್ಮ ಫೇಸ್ಬುಕ್ ಮೂಲಕ ವಿಡಿಯೋ ಕಾಲ್ ಮಾಡಿ ತಂದೆಯ ಅಂತಿಮ ದರ್ಶನ ಪಡೆದಿದ್ದಾರೆ.
ಫೇಸ್ಬುಕ್ನಲ್ಲಿ ಕಣ್ಣೀರಿಟ್ಟ
"ಅಪ್ಪ ಆ ರಾತ್ರಿ ಪಾರ್ಶ್ವವಾಯುವಿನಿಂದ ನಿಧನರಾದರು. ನಾನು ಅವರನ್ನು ಪ್ರತ್ಯೇಕ ವಾರ್ಡ್ನಿಂದ ನೋಡಬಹುದೇ ಎಂದು ಕೇಳಿದೆ. ಆದರೆ ವೈದ್ಯರು ನಿರಾಕರಿಸಿದರು. ಆಗ ನಾನು ಅಳಲು ಮಾತ್ರ ಸಾಧ್ಯವಾಯಿತು. ಅಪ್ಪನನ್ನು ನೋಡಲು ಸಾಧ್ಯವಾಗಲಿಲ್ಲ ಇದೊಂದು ಭಯಾನಕ ಅನುಭವ'' ಎಂದು ಲಿನೋ ಅಬೆಲ್ ಲಿನೋ ಗುರುವಾರ ಫೇಸ್ಬುಕ್ ಪೋಸ್ಟ್ನಲ್ಲಿ ಬರೆದಿದ್ದಾರೆ. ಅವರು ಇನ್ನೂ ಪ್ರತ್ಯೇಕ ವಾರ್ಡ್ನಲ್ಲಿ ತೀವ್ರ ನಿಗಾದಲ್ಲಿದ್ದಾರೆ.
ಚೀನಾ ಚೇತರಿಸಿಕೊಂಡರು ನಿಲ್ಲದ ಸಾವಿನ ಸಂಖ್ಯೆ: 5000 ಗಡಿ ದಾಟಿದ ಕೊರೊನಾ ಬಲಿ
ಆಸ್ಪತ್ರೆಯಲ್ಲಿ ಲಿನೋ ಅಬೆಲ್
ಮಾರ್ಚ್ 7 ರ ಬೆಳಿಗ್ಗೆ, ಲಿನೋ ಅಬೆಲ್ ತಂದೆ ಮಧ್ಯರಾತ್ರಿಯಲ್ಲಿ ಹಾಸಿಗೆಯಿಂದ ಬಿದ್ದಿದ್ದರು. ಅವರನ್ನು ತೊಡುಪುಳದಲ್ಲಿರುವ ತಮ್ಮ ಮನೆಯಿಂದ ಕೊಟ್ಟಾಯಂ ವೈದ್ಯಕೀಯ ಕಾಲೇಜಿಗೆ ಸೇರಿಸಲಾಗಿತ್ತು. ಅವರ ಸ್ಥಿತಿ ಗಂಭೀರವಾಗಿದ್ದರಿಂದ ಕತಾರ್ನಲ್ಲಿನ ಬೀಗ್ಲೋಬಲ್ ಪ್ರೊಡಕ್ಷನ್ - ನಲ್ಲಿರುವ ತನ್ನ ಕಂಪನಿಯಿಂದ ರಜೆ ತೆಗೆದುಕೊಂಡು ಲಿನೋ ಅಬೆಲ್ ಮಾರ್ಚ್ 8 ರಂದು ಬೆಳಿಗ್ಗೆ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಆದರೆ, ಕೊರೊನಾ ಶಂಕೆಯ ಮೇಲೆ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಕೇರಳದಲ್ಲಿ 19 ಜನರಿಗೆ ಕೊರೊನಾ ಸೋಂಕು
ಇನ್ನು, ಇಡೀ ದೇಶದಲ್ಲಿಯೇ ಕೇರಳದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕು ತಗುಲಿದ ಪ್ರಕರಣಗಳು ದಾಖಲಾಗಿವೆ. ಶುಕ್ರವಾರಕ್ಕೆ ಕೇರಳದಲ್ಲಿ 19 ಜನರಿಗೆ ಸೋಂಕು ತಗುಲಿದೆ. ಇದುವರಗೆಗೆ ಸೋಂಕು ಶಂಕೆಯ ಮೇಲೆ 4,180 ಜನರ ಮೇಲೆ ತೀವ್ರ ನಿಗಾ ಇಡಲಾಗಿದೆ. 3,910 ಜನರನ್ನು ಮನೆಯಿಂದ ನಿಗಾ ವಹಿಸಲಾಗಿದೆ. 270 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 1,337 ಜನರ ರಕ್ತವನ್ನು ಲ್ಯಾಬ್ಗೆ ಕಳಿಸಲಾಗಿದೆ. ಅದರಲ್ಲಿ 953 ಜನಕ್ಕೆ ನೆಗಟಿವ್ ಬಂದಿದೆ.