ಕೇರಳದಲ್ಲಿ ಜೂನ್ 8 ರಿಂದ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ನಿರ್ಧಾರ
ತಿರುವನಂತಪುರಂ, ಜೂನ್ 1: ಕೇರಳದಲ್ಲಿ ಜೂನ್ 8 ರಿಂದ ಎಲ್ಲಾ ಧಾರ್ಮಿಕ ಕೇಂದ್ರಗಳನ್ನು ತೆರೆಯುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಕುರಿತು ಮಾಹಿತಿ ನೀಡಿದ್ದು, ಧಾರ್ಮಿಕ ಕ್ಷೇತ್ರಗಳನ್ನು ತೆರೆಯಬೇಕು ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದ ಬೆನ್ನಲ್ಲೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಕೊರೊನಾವೈರಸ್ ಇಡೀ ದೇಶದಲ್ಲೇ ವ್ಯಾಪಕವಾಗಿ ಹರಡಿದ್ದ ಕಾರಣ ಎಲ್ಲಾ ರಾಜ್ಯಗಳಲ್ಲಿ ಧಾರ್ಮಿಕ ಕೇಂದ್ರಗಳನ್ನು ಮುಚ್ಚಲಾಗಿತ್ತು.
ದೇವಸ್ಥಾನಗಳು ಜೂನ್ 8 ರಿಂದ ಆರಂಭಗೊಳ್ಳಲಿವೆ. ಎಲ್ಲರೂ ಗುಂಪು ಗುಂಪಾಗಿ ದೇವರ ದರ್ಶನಕ್ಕೆ ಆಗಮಿಸುವಂತಿಲ್ಲ. ಗುರುವಾಯೂರ್ ದೇವಸ್ಥಾನವನ್ನೂ ಸೇರಿಸಿ ಇತರೆ ದೇವಸ್ಥಾನಗಳಲ್ಲಿ ಮದುವೆ ನಡೆದರೆ 50 ಮಂದಿಗಿಂತ ಹೆಚ್ಚು ಜನರು ಸೇರುವಂತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆದರೆ ಶಾಲೆಗಳು ಜುಲೈ ಒಳಗೆ ತೆರೆಯಲು ಸಾಧ್ಯವೇ ಇಲ್ಲ, ಜುಲೈ ನಂತರ ಪರಿಸ್ಥಿತಿ ನೋಡಿಕೊಂಡು ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಕೇರಳದಲ್ಲಿ 1316 ಕೊರೊನಾ ಸೋಂಕಿತ ಪ್ರಕರಣಗಳಿವೆ.10 ಮಂದಿ ಇದುವರೆಗೆ ಮೃತಪಟ್ಟಿದ್ದಾರೆ. ದೇಶದಲ್ಲಿ 5400ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಕರ್ನಾಟಕದಲ್ಲೂ ಕೂಡ ಜೂನ್ 8 ರಿಂದ ದೇವಸ್ಥಾನದ ಬಾಗಿಲುಗಳು ತೆರೆಯಲಿವೆ. ಮಾಲ್ಗಳು ಕೂಡ ಓಪನ್ ಆಗಲಿವೆ.