ರಾಹುಲ್ ಗಾಂಧಿ ಕೆನ್ನೆಗೆ ಮುತ್ತಿಕ್ಕಿದ ಪ್ರಸಂಗ: ವೈರಲ್ ವಿಡಿಯೋ
Recommended Video
ವಯನಾಡ್, ಆಗಸ್ಟ್ 28: ತಮ್ಮ ಲೋಕಸಭಾ ಕ್ಷೇತ್ರ ಕೇರಳದ ವಯನಾಡಿಗೆ ಭೇಟಿ ನೀಡಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಬುಧವಾರ ಮುಜುಗರದ ಸನ್ನಿವೇಶವೊಂದನ್ನು ಎದುರಿಸಬೇಕಾಯಿತು.
ಕೇರಳದ ವಿವಿಧೆಡೆ ಪ್ರವಾಹ ಪರಿಸ್ಥಿತಿಯಿಂದ ಉಂಟಾಗಿರುವ ಸಮಸ್ಯೆಗಳನ್ನು ವೀಕ್ಷಿಸಲು ಮತ್ತು ಸಂತ್ರಸ್ತರ ಅಹವಾಲುಗಳನ್ನು ಆಲಿಸಲು ಕ್ಷೇತ್ರಕ್ಕೆ ಭೇಟಿ ನೀಡಿರುವ ರಾಹುಲ್ ಗಾಂಧಿ ಅವರ ಕೆನ್ನೆಗೆ ವ್ಯಕ್ತಿಯೊಬ್ಬ ಮುತ್ತು ನೀಡಿದ್ದಾನೆ. ಈ ವಿಡಿಯೋ ವೈರಲ್ ಆಗಿದೆ.
ಕಾಶ್ಮೀರ, ಪಾಕಿಸ್ತಾನದ ಬಗ್ಗೆ ರಾಹುಲ್ ಗಾಂಧಿ ಟ್ವೀಟ್ ವೈರಲ್
ಕಾರಿನಲ್ಲಿ ತೆರಳುತ್ತಿದ್ದ ರಾಹುಲ್ ಗಾಂಧಿ ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳಲು ಮಾಧ್ಯಮದವರು ಪ್ರಯತ್ನಿಸುತ್ತಿದ್ದರು. ಆಗ ರಾಹುಲ್ ಗಾಂಧಿ ಅವರೆಡೆಗೆ ಇದ್ದಕ್ಕಿದ್ದಂತೆ ಧಾವಿಸಿದ ವ್ಯಕ್ತಿಯೊಬ್ಬ ಕಾರ್ನ ಕಿಟಕಿಯ ಮೂಲಕ ತಲೆ ತೂರಿ ರಾಹುಲ್ ಅವರ ಕೆನ್ನೆಗೆ ಮುತ್ತು ನೀಡಿದ್ದಾನೆ. ರಾಹುಲ್ ಗಾಂಧಿ ನಗುತ್ತಾ ಮುಂದೆ ಸಾಗಿದ್ದಾರೆ.
ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
ಮುತ್ತು ನೀಡಿದ ವ್ಯಕ್ತಿ
ಬೂದು ಬಣ್ಣದ ಟಿ ಶರ್ಟ್ ತೊಟ್ಟಿದ್ದ ರಾಹುಲ್ ಗಾಂಧಿ ಅವರಡೆಗೆ ಬಂದ ನೀಲಿ ಬಣ್ಣದ ಅಂಗಿ ತೊಟ್ಟಿದ್ದ ವ್ಯಕ್ತಿ ಮೊದಲು ಅವರ ಕೈಕುಲುಕಿದ. ಬಳಿಕ ಕಾರಿನ ಹೊರಗಿನಿಂದಲೇ ಅವರನ್ನು ಬಾಚಿ ತಪ್ಪಿ ಕೆನ್ನೆಗೆ ಮುತ್ತು ನೀಡಿದ. ಆಗ ಭದ್ರತಾ ಸಿಬ್ಬಂದಿಯೊಬ್ಬರು ಆತನ ಕತ್ತಿಗೆ ಕೈಹಾಕಿ ಆಚೆ ತಳ್ಳಿದರು. ಈ ಘಟನೆಯಿಂದ ವಿಚಲಿತರಾಗದ ರಾಹುಲ್ ಗಾಂಧಿ ಅಲ್ಲಿದ್ದ ಉಳಿದ ಜನರೊಂದಿಗೆ ಕೈಕುಲುಕಿ ಶುಭ ಕೋರಿದರು.
ಮೂವರು ಕೇಂದ್ರ ಸಚಿವರಿಗೆ ಪತ್ರ
ಕೇಂದ್ರ ಸರ್ಕಾರದ ಮೂವರು ಸಚಿವರಿಗೆ ಪತ್ರ ಬರೆದಿರುವ ರಾಹುಲ್ ಗಾಂಧಿ, ಪ್ರವಾಹದಿಂದ ತನ್ನ ಭೌಗೋಳಿಕ ಚಹರೆಯನ್ನೇ ಕಳೆದುಕೊಂಡಿರುವ ಕೇರಳವನ್ನು ಮರು ಸ್ಥಾಪಿಸಲು ನೆರವು ನೀಡುವಂತೆ ಕೋರಿದ್ದಾರೆ. ಗ್ರಾಮೀಣ ಅಭಿವೃದ್ಧಿ ಸಚಿವ ನರೇಂದ್ರ ಸಿಂಗ್ ತೋಮರ್, ಸಾರಿಗೆ ಸಚಿವ ನಿತಿನ್ ಗಡ್ಕರಿ ಮತ್ತು ಆರೋಗ್ಯ ಸಚಿವ ಹರ್ಷವರ್ಧನ್ ಅವರಿಗೆ ರಾಹುಲ್ ಗಾಂಧಿ ಅವರು ಪ್ರತ್ಯೇಕ ಪತ್ರಗಳನ್ನು ಬರೆದಿದ್ದಾರೆ.
ಪ್ರವಾಹ ಪೀಡಿತ ಜಿಲ್ಲೆಗಳ ಭೇಟಿಗೆ ರಾಹುಲ್ ಗಾಂಧಿ ಆಗಮನ
ನರೇಗಾ ವಿಸ್ತರಣೆ ಮಾಡಿ
ಕೇರಳವನ್ನು ಹೊಸದಾಗಿ ಕಟ್ಟಲು ಅನುಕೂಲವಾಗುವಂತೆ ನರೇಗಾ ಯೋಜನೆಯನ್ನು ವಿಸ್ತರಿಸಲು ಅವರು ತೋಮರ್ ಅವರನ್ನು ಕೋರಿದ್ದಾರೆ. ನರೇಗಾ ಯೋಜನೆಯ ಕನಿಷ್ಠ ಕೂಲಿ ದಿನಗಳನ್ನು ಕೇರಳದಲ್ಲಿ 100 ರಿಂದ 200ಕ್ಕೆ ವಿಸ್ತರಿಸುವಂತೆ ಅವರು ಮನವಿ ಮಾಡಿದ್ದಾರೆ. ಜನರು ಪ್ರವಾಹದಿಂದಾಗಿ ಮನೆಗಳನ್ನು ಕಳೆದುಕೊಂಡಿದ್ದಾರೆ. ಇನ್ನು ಸಾವಿರಾರು ಜನರ ಮನೆಗಳಲ್ಲಿ ಮಣ್ಣು, ಕೊಳೆಗಳು ತುಂಬಿಕೊಂಡಿವೆ. ಈ ಪರಿಸ್ಥಿತಿಯಲ್ಲಿ ನರೇಗಾ ವಿಸ್ತರಣೆ ಮಾಡಿದರೆ ಜನರು ಸುಧಾರಿಸಿಕೊಳ್ಳಲು ಅನುಕೂಲವಾಗಲಿದೆ ಎಂದಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ತುರ್ತು ದುರಸ್ತಿ
ವಯನಾಡಿನಲ್ಲಿ ಮಳೆಯಿಂದ ಹಾನಿಗೊಳಗಾಗಿರುವ ರಸ್ತೆಗಳ ದುರಸ್ತಿ, ನಿರ್ವಹಣ ಮತ್ತು ಮರು ನಿರ್ಮಾಣ ಕಾರ್ಯಗಳನ್ನು ತ್ವರಿತವಾಗಿ ಮಾಡಲು ಅನುದಾನ ನೀಡುವಂತೆ ಕೋರಿದ್ದಾರೆ. ಕೇರಳ ಮತ್ತು ಕರ್ನಾಟಕದ ನಡುವೆ ಇರುವ ರಾಷ್ಟ್ರೀಯ ಹೆದ್ದಾರಿ 766ರಲ್ಲಿ 20 ಕಡೆ ಹಾನಿಯಾಗಿದ್ದು, ಅವುಗಳನ್ನು ತುರ್ತಾಗಿ ದುರಸ್ತಿ ಮಾಡುವ ಅಗತ್ಯವಿದೆ ಎಂದು ನಿತಿನ್ ಗಡ್ಕರಿ ಅವರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.
ವಯನಾಡು ಪ್ರವಾಹ: ಸಂತ್ರಸ್ತರಿಗೆ 'ರಾಹುಲ್ ಗಾಂಧಿ ಕಿಟ್'
ವೈದ್ಯಕೀಯ ಶಿಬಿರ ಸ್ಥಾಪಿಸಿ
ಮಳೆಯಿಂದ ಸಮಸ್ಯೆಗೊಳಗಾಗಿರುವ ಜನರು ಆರೋಗ್ಯದ ಸಮಸ್ಯೆಗೂ ಒಳಗಾಗುತ್ತಿದ್ದಾರೆ. ಸಂತ್ರಸ್ತರಿಗೆ ಆಶ್ರಯ ನೀಡಿರುವ ಶಿಬಿರಗಳಲ್ಲಿ ವೈದ್ಯಕೀಯ ಸೌಲಭ್ಯಗಳ ಕೊರತೆ ಇದೆ. ಮುಖ್ಯವಾಗಿ ನಿಲಂಬೂರ್ನಲ್ಲಿ ವೈದ್ಯಕೀಯ ಪರಿಹಾರ ಶಿಬಿರ ಸ್ಥಾಪಿಸುವಂತೆ ಅನೇಕರು ಕೋರಿದ್ದಾರೆ. ಈ ಸಂಬಂಧ ಆರೋಗ್ಯ ಸಚಿವಾಲಯ ತಕ್ಷಣ ಕ್ರಮ ತೆಗೆದುಕೊಳ್ಳಲಿದೆ ಎಂದು ಭಾವಿಸಿದ್ದೇನೆ ಎಂಬುದಾಗಿ ರಾಹುಲ್ ಗಾಂಧಿ ಆರೋಗ್ಯ ಸಚಿವ ಹರ್ಷವರ್ಧನ್ ಅವರಿಗೆ ಮನವಿ ಮಾಡಿದ್ದಾರೆ.