ಕೇರಳದಲ್ಲಿ ಗ್ರೀನ್ ಚೆಕ್ಪೋಸ್ಟ್ ಸ್ಥಾಪನೆ, ವಿಶೇಷತೆಯೇನು?
ತಿರುವನಂತಪುರಂ, ಅಕ್ಟೋಬರ್ 27: ಕೇರಳದಲ್ಲಿ ಪರಿಸರದ ಹಿಂದಿನ ಸೌಂದರ್ಯವನ್ನು ಮರಳಿ ಪಡೆಯುವ ಉದ್ದೇಶದಿಂದ ಮೊದಲ ಬಾರಿಗೆ ಗ್ರೀನ್ ಚೆಕ್ಪೋಸ್ಟ್ಗಳನ್ನು ನಿರ್ಮಿಸಲಾಗಿದೆ. ಕೇರಳದ ಇಡುಕ್ಕಿ ಜಿಲ್ಲೆಯಲ್ಲಿರುವ ಪ್ರಮುಖ ಪ್ರವಾಸಿ ತಾಣವಾದ ವಾಗಮನ್ ಬೆಟ್ಟ ಪ್ರದೇಶದಲ್ಲಿ ಮೊದಲ ಬಾರಿಗೆ ಈ ಗ್ರೀನ್ ಚೆಕ್ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ.
ಈ ಚೆಕ್ಪೋಸ್ಟ್ ಬೆಟ್ಟಕ್ಕೆ ಆಗಮಿಸುವ ಎಲ್ಲಾ ವಾಹನಗಳ ತಪಾಸಣೆಯನ್ನು ನಡೆಸಲಿದೆ. ಪ್ರವಾಸಿಗರ ಬಳಿ ಪ್ಲಾಸ್ಟಿಕ್ ಚೀಲಗಳು ಅಥವಾ ಇನ್ನಿತರೆ ಯಾವುದೇ ಹಾನಿಕಾರಕ ವಸ್ತುಗಳು ಇವೆಯೇ ಎಂಬುದನ್ನು ಪರೀಕ್ಷಿಸಲಾಗುತ್ತದೆ. ಚೆಕ್ಪೋಸ್ಟ್ ಹೊಂದಿಕೊಂಡಿರುವಂತೆಯೇ ಗ್ರೀನ್ ಕೌಂಟರ್ಗಳಿದ್ದು,ಪ್ರವಾಸಿಗರಿಗೆ ಅವಶ್ಯಕತೆ ಇದ್ದಲ್ಲಿ ಬಟ್ಟೆ ಚೀಲಗಳು ದೊರೆಯುತ್ತವೆ.
ಬೆಟ್ಟದ ಮೇಲೆ ಸಾಕಷ್ಟು ಕಡೆ ಬಾಟಲ್ಬೂತ್ಸ್ಗಳನ್ನು ತೆರೆಯಲಾಗಿದ್ದು,ಇಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಪ್ರವಾಸಿಗರು ನೀಡಬೇಕು ಎಂದು ತಿಳಿಸಲಾಗಿದೆ.
ಅಲ್ಲಿನ ಪರಿಸರವನ್ನು ಕಾಪಾಡುವ ದೃಷ್ಟಿಯಿಂದ ಹಾಗೂ ಈ ಪ್ರದೇಶವನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವ ಗುರಿಯನ್ನು ಹೊಂದಿದೆ. ಬೆಟ್ಟಕ್ಕೆ ಇರುವ ಐದು ಪ್ರವೇಶ ಮಾರ್ಗಗಳಲ್ಲಿ ಹರಿತ ಕೇರಳಂ ಯೋಜನೆಯಡಿ ಹಸಿರುಸೇನೆಯನ್ನು ಸರ್ಕಾರ ನಿಯೋಜಿಸಿದೆ.
ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಪ್ಲಾಸ್ಟಿಕ್ ಸೇರಿದಂತೆ ಇತರೆ ತ್ಯಾಜ್ಯಗಳ ಪ್ರಮಾಣದಲ್ಲಿ ಕೂಡ ಏರಿಕೆಯಾಗಿದೆ. ಈ ಕಾರಣದಿಂದಾಗಿ ಪರಿಸರಕ್ಕೆ ಹಾನಿಯಾಗದಂತೆ ಪ್ರಕೃತಿಯ ಹಳೆಯ ಸೌಂದರ್ಯವನ್ನು ಮರುಕಳಿಸುವಂತೆ ಮಾಡುವುದೇ ಈ ಹಸಿರು ಚೆಕ್ಪೋಸ್ಟ್ಗಳ ವಿಶೇಷವಾಗಿದೆ.