ಮಗಳ ಮದುವೆ ಸಂಭ್ರಮದಲ್ಲಿ ಹಾಡುತ್ತಲೇ ಬಿದ್ದು ಕೊನೆಯುಸಿರೆಳೆದ ಪೊಲೀಸ್ ಅಧಿಕಾರಿ
ತಿರುವನಂತಪುರಂ, ಮೇ 27: ಮಗಳ ಮದುವೆಯ ಸಂಭ್ರಮದಲ್ಲಿದ್ದರು ಕೇರಳದ ತಿರುವನಂತಪುರಂನ ಸಬ್ ಇನ್ಸ್ಪೆಕ್ಟರ್ ಪಿ. ವಿಷ್ಣುಪ್ರಸಾದ್. ಇಡೀ ಮನೆ ಬಣ್ಣ ಬಣ್ಣದ ಬೆಳಕಿನಲ್ಲಿ ಕಂಗೊಳಿಸುತ್ತಿತ್ತು. ಮದುವೆ ಮನೆಯೆಂದ ಮೇಲೆ ಕೇಳಬೇಕೇ ಸಡಗರದ ಬಗೆ? ಮಗಳ ಮದುವೆಯ ಖುಷಿಯಲ್ಲಿ ವಿಷ್ಣುಪ್ರಸಾದ್ ಕೂಡ ಮೈಕ್ ಹಿಡಿದು ಹಾಡುತ್ತಿದ್ದರು. ಅದಕ್ಕೆ ಚಪ್ಪಾಳೆಯ ಉತ್ತೇಜನವೂ ಸಿಗುತ್ತಿತ್ತು. ಆದರೆ, ಆ ಸಂಭ್ರಮ-ಸಡಗರ, ಕೆಲವೇ ನಿಮಿಷಗಳಲ್ಲಿ ದುರಂತವಾಗಿ ಬದಲಾಯಿತು. ಮದುವೆ ಮನೆಯಲ್ಲಿ ಸೂತಕದ ಛಾಯೆ ಆವರಿಸಿತು.
ತಮ್ಮ ಕಿರಿ ಮಗಳ ಮದುವೆಯ ಹಿಂದಿನ ದಿನ ಹಾಡುತ್ತಿದ್ದ 55 ವರ್ಷದ ವಿಷ್ಣುಪ್ರಸಾದ್, ಹಠಾತ್ತನೆ ಕುಸಿದು ಬಿದ್ದರು. ಅವರನ್ನು ಕೂಡಲೇ ಕೊಲ್ಲಂ ಜಿಲ್ಲೆಯ ನೀಂದಕಾರದ ಆಸ್ಪತ್ರೆಗೆ ದಾಖಲಿಸಲಾಯಿತು. ಶನಿವಾರ ರಾತ್ರಿ 9.30ರ ಸುಮಾರಿಗೆ ಅವರು ಕೊನೆಯುಸಿರೆಳೆದ ಸಂಗತಿ ಮದುವೆಮನೆಯಲ್ಲಿ ನೆರೆದಿದ್ದ ಕುಟುಂಬದವರು, ಬಂಧುಗಳು, ಸ್ನೇಹಿತರಿಗೆ ಬರಸಿಡಿಲಿನಂತೆ ಅಪ್ಪಳಿಸಿತು.
ಮದುಮಗಳಿಲ್ಲದೆ ಮದುವೆ, ಇದರ ಹಿಂದಿದೆ ಮನಮಿಡಿಯುವ ಕಥೆ
ಮುಮ್ಮಟ್ಟಿ ಅವರು ಅಭಿನಯಿಸಿದ್ದ 'ಅಮರಂ' ಚಿತ್ರದಲ್ಲಿ ತಂದೆ ಮಗಳಿಗಾಗಿ ಹಾಡುವ 'ರಾಕಿಲಿ ಪೊನ್ಮಗಳೇ' ಎಂಬ ಗೀತೆಯನ್ನು ವಿಷ್ಭುಪ್ರಸಾದ್ ಹಾಡುತ್ತಿದ್ದರು. ಜತೆಗೆ ಆರ್ಕೆಸ್ಟ್ರಾ ತಂಡದ ಹಿನ್ನೆಲೆ ಸಂಗೀತವೂ ಇತ್ತು. ಹಾಡಿನ ಲಯ, ಸಂಗೀತದ ಮಟ್ಟಿಗೆ ಅನುಗುಣವಾಗಿ ಅವರು ಕಾಲು ಕುಣಿಸುತ್ತಾ ಇದ್ದರು. ಇದ್ದಕ್ಕಿದ್ದಂತೆ ಬಲಭಾಗಕ್ಕೆ ಉರುಳಿ ಬಿದ್ದರು.
ಪೊಲೀಸ್ ಮೂಲಗಳ ಪ್ರಕಾರ ವಿಷ್ಣುಪ್ರಸಾದ್ ಅವರನ್ನು ಆಸ್ಪತ್ರೆಗೆ ಕರೆತರುವಾಗಲೇ ಅವರು ಮೃತಪಟ್ಟಿದ್ದರು. ಅವರು ಹೃದಯಾಘಾತಕ್ಕೆ ಒಳಗಾಗಿದ್ದರು ಎನ್ನಲಾಗಿದೆ.
ಆದರೆ, ಅ ದಿನ ಏನಾಯಿತು ಎನ್ನುವುದು ಅವರ ಕುಟುಂಬದ ಅತಿ ಆಪ್ತರಿಗೆ ಮಾತ್ರ ತಿಳಿದಿತ್ತು. ಹೀಗಾಗಿ ಅವರ ಸಾವಿನ ಸಂಗತಿಯನ್ನು ಮಗಳಿಗೂ ತಿಳಿಸದೆ ಮುಚ್ಚಿಟ್ಟು ವಿಷ್ಣುಪ್ರಸಾದ್ ಅವರು ಬಯಸಿದ್ದಂತೆಯೇ ಭಾನುವಾರ ಮದುವೆ ಮಾಡಲು ಮುಂದಾದರು.
ಪೊಲೀಸ್ ಪೇದೆಗಳಿಗೆ ಮದುವೆ ಮಾಡಿಸಿದ ಮೈಸೂರಿನ ಒಡನಾಡಿ ಸಂಸ್ಥೆ
ಮದುಮಗಳು ಅರ್ಚ ಮತ್ತು ವಿಷ್ಣುಪ್ರಸಾದ್ ಅವರ ಪತ್ನಿಗೆ ಅವರ ಸಾವಿನ ಸಂಗತಿಯನ್ನು ಯಾರೂ ಬಹಿರಂಗಪಡಿಸಲಿಲ್ಲ. ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆದುಕೊಂಡು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ನಂಬಿಸಲಾಗಿತ್ತು. ಬೆಳಿಗ್ಗೆ ಮದುಮಗಳ ದಿರಿಸಿನಲ್ಲಿ ಆಭರಣ ತೊಟ್ಟ ಅರ್ಚ ತಮ್ಮ ತಂದೆ ಎಲ್ಲಿಯೂ ಕಾಣದಿದ್ದರಿಂದ ಅವರ ಬಗ್ಗೆ ದುಗುಡದಿಂದ ವಿಚಾರಿಸುತ್ತಿದ್ದರು. ಅವರು ಶೀಘ್ರದಲ್ಲಿಯೇ ಬರುತ್ತಾರೆ ಎಂದು ನಂಬಿಸಲಾಗಿತ್ತು.
Sub inspector of Karamana police station, Thiru'puram - P. Vishnuprasad 55, collapsed to death while singing on the eve of his daughter's wedding. Deep condolences and prayers for his family's. pic.twitter.com/H3oO3JJowM
— Narayan (@Narayan28585743) 27 May 2019
ಅರ್ಚನ ಪತಿಯ ಹೆಸರು ಕೂಡ ವಿಷ್ಣುಪ್ರಸಾದ್. ಅಪ್ಪನ ಸಾವಿನ ಸುದ್ದಿಯನ್ನು ಮುಚ್ಚಿಟ್ಟು ಆಕೆಯ ಮದುವೆಯನ್ನೂ ಮಾಡಲಾಯಿತು. ಕೊಲ್ಲಂನ ದುರ್ಗಾದೇವಿ ದೇವಸ್ಥಾನದಲ್ಲಿ ಈ ಮದುವೆ ನಡೆಯಿತು. ತವರು ಮನೆಯಿಂದ ಪತಿಯ ಮನೆಯ ಕಡೆ ಹೊರಟಾಗಲೂ ಆಕೆಗೆ ಕುಟುಂಬದವರು ಮಾಹಿತಿ ನೀಡಿರಲಿಲ್ಲ.
ಸೋಮವಾರ ಬೆಳಿಗ್ಗೆಯಷ್ಟೇ ವಿಷ್ಣುಪ್ರಸಾದ್ ಅವರ ಕುಟುಂಬ ಆಕೆಯ ತಂದೆಯ ಸಾವಿನ ಸಂಗತಿಯನ್ನು ತಿಳಿಸಿತು. ಅವರ ಅಂತ್ಯಸಂಸ್ಕಾರ ಸೋಮವಾರ ಸಂಜೆ ನೆರವೇರಿತು.
ತಿರುವನಂತಪುರಂನ ಕರಾಮಣ ಪೊಲೀಸ್ ಠಾಣೆಯಲ್ಲಿ ಅವರು ಸಬ್ ಇನ್ಸ್ಪೆಕ್ಟರ್ ಆಗಿದ್ದರು. ಒಂದು ವರ್ಷ ಮಾತ್ರ ಅವರ ಸೇವೆ ಬಾಕಿ ಉಳಿದಿತ್ತು. ಅವರಿಗೆ ಪತ್ನಿ ಸುಷ್ಮಾ, ಮಕ್ಕಳಾದ ಅರ್ಚ, ಅನುಪ್ರಸಾದ್ ಮತ್ತು ಆರ್ಯಪ್ರಸಾದ್ ಇದ್ದಾರೆ. ಅವರ ನಿಧನಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂತಾಪ ವ್ಯಕ್ತಪಡಿಸಿದ್ದಾರೆ.