ಹಾವು ಕಚ್ಚಿದರೂ ಪಾಠ ಮುಂದುವರಿಸಿದ ಶಿಕ್ಷಕ: ಬಾಲಕಿ ಸಾವು
ವಯನಾಡು, ನವೆಂಬರ್ 21: ಶಾಲೆಯ ಕೊಠಡಿಯಲ್ಲಿ ಪಾಠ ಕೇಳುತ್ತಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಹಾವು ಕಡಿದು ಆಕೆಯ ಮೃತಪಟ್ಟ ಘಟನೆ ಕೇರಳದ ವಯನಾಡು ಜಿಲ್ಲೆಯ ಸುಲ್ತಾನ್ ಬತೇರಿಯಲ್ಲಿ ನಡೆದಿದೆ. ವಿದ್ಯಾರ್ಥಿನಿಗೆ ಹಾವು ಕಡಿದಿರುವುದು ತಿಳಿದಿದ್ದರೂ ಶಿಕ್ಷಕರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯದೆ ಪಾಠ ಮುಂದುವರಿಸಿದ ಅಮಾನವೀಯ ಕೃತ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಐದನೇ ತರಗತಿ ಓದುತ್ತಿದ್ದ 10 ವರ್ಷದ ಶೆಹೆಲಾ ಮೃತಪಟ್ಟ ದುರ್ದೈವಿ ಬಾಲಕಿ. ಹಾವು ಕಚ್ಚಿ ಒಂದು ಗಂಟೆಯ ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಸರ್ಕಾರಿ ವೃತ್ತಿಪರ ಉನ್ನತ ಮಾಧ್ಯಮಿಕ ಶಾಲೆಯ ಆಕೆಯ ಸಹಪಾಠಿಗಳು ತಿಳಿಸಿದ್ದಾರೆ.
ಹೆಬ್ಬಾವಿನಿಂದ ಸತ್ತ ಮಹಿಳೆ ಇದ್ದ ಮನೆಯಲ್ಲಿ 140 ಹಾವು ಪತ್ತೆ!
ಹಾವು ಕಚ್ಚಿರುವ ಬಗ್ಗೆ ಬಾಲಕಿಯ ತಂದೆಗೆ ಮಾಹಿತಿ ನೀಡಲಾಗಿದ್ದು, ಅವರೇ ಬಂದು ಆಕೆಯನ್ನು ಆಸ್ಪತ್ರೆಗೆ ದಾಖಲಿಸುತ್ತಾರೆ ಎಂದು ಶಿಕ್ಷಕ ಪಾಠ ಮುಂದುವರಿಸಿದ್ದರು. ಶೆಹೆಲಾಳ ಕಾಲು ನೀಲಿಗಟ್ಟಿತ್ತು. ಘಟನೆ ನಡೆದು 30 ನಿಮಿಷಗಳ ಬಳಿಕ ತಂದೆ ಶಾಲೆಗೆ ತಲುಪಿದ್ದರು.
ಆಕೆಯನ್ನು ಸುಲ್ತಾನ್ ಬತೇರಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಸಮೀಪದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಆಕೆಯನ್ನು ಕೊಯಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ಸೇರಿಸುವಂತೆ ಸಲಹೆ ನೀಡಲಾಯಿತು. ಆದರೆ ಆಕೆಯ ಪರಿಸ್ಥಿತಿ ಇನ್ನಷ್ಟು ಚಿಂತಾಜನಕವಾಗಿದ್ದರಿಂದ ಮತ್ತೆ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿಗೆ ಬರುವಾಗಲೇ ಆಕೆ ಮೃತಪಟ್ಟಿದ್ದಾಳೆ ಎಂದು ಘೋಷಿಸಲಾಯಿತು.
ಕುತ್ತಿಗೆಗೆ ಸುತ್ತಿಕೊಂಡ ಭಾರಿ ಹೆಬ್ಬಾವಿನಿಂದ ಬಚಾವಾದ ವೃದ್ಧ
ಶಾಲೆಯ ಕೊಠಡಿಯಲ್ಲಿ ಶೆಹಲಾ ಕೂರುವ ಸ್ಥಳದ ನೆಲದಲ್ಲಿ ಕಿಂಡಿಯೊಂದು ಕಂಡುಬಂದಿದೆ. ಪಾಠ ಕೇಳುತ್ತಿದ್ದ ಶೆಹಲಾಳ ಕಾಲು ಅದರ ಒಳಗೆ ಸಿಕ್ಕಿಬಿದ್ದಿತ್ತು. ಹೊರಗೆ ತೆಗೆದಾಗ ಹಾವು ಕಚ್ಚಿದಂತೆ ಎರಡು ಹಲ್ಲಿನ ಗುರುತು ಕಂಡುಬಂದಿತ್ತು. ಅದು ಹಾವು ಕಚ್ಚಿದ್ದು ಎಂದು ಮಕ್ಕಳು ಅನುಮಾನ ವ್ಯಕ್ತಪಡಿಸಿದರೂ, ಅದನ್ನು ಒಪ್ಪದ ಶಿಕ್ಷಕರು ನೆಲದ ಚೂಪಾದ ತುದಿ ತಾಗಿ ಗಾಯವಾಗಿದೆ ಎಂದು ಪಾಠ ಮುಂದುವರಿಸಿದ್ದರು ಎಂದು ಆರೋಪಿಸಲಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ಶಿಕ್ಷಣ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದರು.