ತವರಿಗೆ ವಾಪಸ್ ಆಗುವವರನ್ನು ಬರಮಾಡಿಕೊಳ್ಳಲು ಕೇರಳ ಸರ್ಕಾರ ಸಿದ್ಧ
ತಿರುವನಂತಪುರಂ, ಮೇ 07 : ವಿವಿಧ ದೇಶಗಳಿಂದ ರಾಜ್ಯಕ್ಕೆ ಆಗಮಿಸುವವರನ್ನು ಬರಮಾಡಿಕೊಳ್ಳಲು ಕೇರಳ ಸರ್ಕಾರ ಸಿದ್ಧವಾಗಿದೆ. ಒಂದೇ ಭಾರತ ಘೋಷಣೆಯಡಿ ವಿದೇಶದಲ್ಲಿ ಸಿಲುಕಿದ ಭಾರತೀಯರನ್ನು ಕರೆತರುವ ಪ್ರಕ್ರಿಯೆ ಗುರುವಾರದಿಂದ ಆರಂಭವಾಗುತ್ತಿದೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. "ವಿದೇಶದಿಂದ ಬಂದವರನ್ನು ತಕ್ಷಣ ಮನೆಗೆ ಕಳಿಸುವುದಿಲ್ಲ. ಒಂದು ವಾರಗಳ ಕಾಲ ಅವರು ಕ್ವಾರಂಟೈನ್ನಲ್ಲಿ ಇರುವುದು ಕಡ್ಡಾಯ" ಎಂದು ಹೇಳಿದರು.
ಗಲ್ಫ್ ರಾಷ್ಟ್ರಗಳಿಂದ ಭಾರತಕ್ಕೆ ಬರಲು 3 ಲಕ್ಷ ಜನರ ನೋಂದಣಿ
"ಕಡ್ಡಾಯ ಕ್ವಾರಂಟೈನ್ನಲ್ಲಿರುವ ಎನ್ಆರ್ಐಗಳನ್ನು ಒಂದು ವಾರದ ಬಳಿಕ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಅವರಿಗೆ ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದರೆ ಆಸ್ಪತ್ರೆಗೆ ದಾಖಲು ಮಾಡಲಾಗುತ್ತದೆ" ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಕೇರಳಕ್ಕೆ ವಾಪಸ್ ಆಗಲು 1 ಲಕ್ಷ ಜನರ ನೋಂದಣಿ
ಕೆಲಸ ಕಳೆದುಕೊಂಡು ತವರು ರಾಜ್ಯಕ್ಕೆ ಹೊರಟ ವಲಸೆ ಕಾರ್ಮಿಕರು ಬಸ್ ಮತ್ತು ರೈಲಿಗೆ ಹಣ ನೀಡಿದಂತೆ ವಿದೇಶದಿಂದ ಭಾರತಕ್ಕೆ ಬರುವವರು ಹಣವನ್ನು ಪಾವತಿ ಮಾಡಬೇಕಿದೆ. ಕೇಂದ್ರ ಸರ್ಕಾರ ಈಗಾಗಲೇ ಈ ಕುರಿತ ದರಪಟ್ಟಿ ಬಿಡುಗಡೆ ಮಾಡಿದೆ.
ದುಬೈನಿಂದ ಭಾರತಕ್ಕೆ ವಾಪಸ್ ಆಗಲು ನೋಂದಣಿ ಆರಂಭ
ಅಬುದಾಬಿ-ಕೊಚ್ಚಿ, ದುಬೈ-ಕೊಚ್ಚಿ, ಕೌಲಾಲಂಪುರ-ಕೊಚ್ಚಿ ಮಾರ್ಗದ ಪ್ರಯಾಣಕ್ಕೆ 15,000, ದೋಹಾ-ಕೊಚ್ಚಿ, ಬಹ್ರೇನ್-ಕೊಯಿಕ್ಕೋಡ್ ಮಾರ್ಗಕ್ಕೆ 16,000 ರೂ., ಮಸ್ಕತ್-ಕೊಚ್ಚಿ ಮಾರ್ಗಕ್ಕೆ 14,000 ರೂ., ಬಹ್ರೇನ್-ಕೊಚ್ಚಿ, ದೋಹಾ-ತಿರುವನಂತಪುರಂ ಮಾರ್ಗಕ್ಕೆ 17 ಸಾವಿರ ರೂ. ದರ ನಿಗದಿ ಮಾಡಲಾಗಿದೆ.
ಮುಂದಿನ ವಾರದಿಂದ ವಿದೇಶದಿಂದ ಬರುವವರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ. ಈಗಾಗಲೇ ಕೇರಳ ಸರ್ಕಾರ ವಿದೇಶದಿಂದ ಬಂದವರನ್ನು ಕ್ವಾರಂಟೈನ್ ಮಾಡಲು 2.5 ಲಕ್ಷ ಹಾಸಿಗೆಗಳ ವ್ಯವಸ್ಥೆ ಮಾಡಿದೆ.
ಒಟ್ಟು 4.42 ಲಕ್ಷ ಜನರು ಕೇರಳಕ್ಕೆ ವಾಪಸ್ ಆಗಲು ಆನ್ಲೈನ್ ಮೂಲಕ ನೋಂದಣಿ ಮಾಡಿಸಿದ್ದಾರೆ. ಇವರಲ್ಲಿ 1,69,136 ಜನರು ಅತಿ ತುರ್ತು ವಿಭಾಗಕ್ಕೆ ಸೇರಿದ್ದಾರೆ. ಇವರಲ್ಲಿ ಗರ್ಭಿಣಿಯರು, ವಯೋವೃದ್ಧರು ಸೇರಿದ್ದಾರೆ.