30 ಕೆಜಿ ಚಿನ್ನದ ಸ್ಮಗ್ಲರ್ ಸ್ವಪ್ನಾಗೂ ಸಿಎಂ ಕಚೇರಿಗೂ ಏನಿದು ನಂಟು?
ತಿರುವನಂತಪುರಂ, ಜುಲೈ 7: ಕೊರೊನಾವೈರಸ್ ವಿರುದ್ಧ ಹೋರಾಡುತ್ತಲೇ ವಿದೇಶದಲ್ಲಿ ನೆಲೆಸಿರುವ ಕೇರಳಿಗರನ್ನು ಓಲೈಸಲು ವಿಮಾನಯಾನದ ಮೇಲೆ ನಿರ್ಬಂಧ ತೆರವುಗೊಳಿಸಲಾಗಿತ್ತು. ಈಗ ವಿಮಾನಯಾನದ ಲಾಭ ಪಡೆದು ಚಿನ್ನದ ಸ್ಮಗಲಿಂಗ್ ಆರಂಭವಾಗಿದೆ. ಸ್ಮಗಲಿಂಗ್ ಕೇಸ್ ನೇರ ಸಿಎಂ ಪಿಣರಾಯಿ ವಿಜಯನ್ ಕಚೇರಿಯತ್ತ ಬೊಟ್ಟು ಮಾಡಿದೆ.
Recommended Video
ರಾಜತಾಂತ್ರಿಕ ರಕ್ಷಣೆ ಹೊಂದಿರುವ ''ಡಿಪ್ಲೊಮ್ಯಾಟಿಕ್ ಬ್ಯಾಗೇಜ್'' ನಲ್ಲಿದ್ದ 30 ಕೆಜಿ ಚಿನ್ನವನ್ನು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿನ್ನೆ ವಶ ಪಡಿಸಿಕೊಂಡಿದ್ದಾರೆ. ಸುಮಾರು 15 ಕೋಟಿ ರೂಪಾಯಿ ಮೌಲ್ಯದ ಈ ಚಿನ್ನ ಅಕ್ರಮ ಸಾಗಣೆಯ ಆರೋಪಿ ರಾಜತಾಂತ್ರಿಕ ಕಚೇರಿಯ ಮಾಜಿ ಸಿಬ್ಬಂದಿ ಸ್ವಪ್ನ ಸುರೇಶ್ ಎಂದು ತಿಳಿದು ಬಂದಿದೆ.
ಕೇರಳದ ಮಾಜಿ ಸಿಎಂ ಚಾಂಡಿ ವಿರುದ್ಧ ರೇಪ್ ಕೇಸ್, ಎಫ್ಐಆರ್
ಆದರೆ, ಮೊದಲಿಗೆ ಈ ಕೇಸಿನಲ್ಲಿ ಬಂಧನವಾಗಿದ್ದು, ಸರಿತ್ ಕುಮಾರ್ ಎಂಬ ವ್ಯಕ್ತಿ. ಈ ಬ್ಯಾಗ್ ತನಗೆ ಸೇರಿದ್ದು ಎಂಬ ಹೇಳಿದ ರಿತ್ ಕುಮಾರ್ ಬಂಧಿಸಿ ವಿಚಾರಣೆಗೊಳಪಡಿಸಿದಾಗ ಯುಎಇ ಕನ್ಸುಲೇಟ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸ್ವಪ್ನ ಸುರೇಶ್ ಬೆಳಕಿಗೆ ಬಂದಿದೆ.
ದೂತಾವಾಸ ಕಚೇರಿಯ ಮಾಜಿ ಉದ್ಯೋಗಿ
ಸ್ವಪ್ನ ಸುರೇಶ್ ತಿರುವನಂತಪುರದಲ್ಲಿರುವ ಯುಎಇ ದೂತಾವಾಸ ಕಚೇರಿಯ ಮಾಜಿ ಉದ್ಯೋಗಿಯಾಗಿದ್ದರು. ಈಕೆ ಬಗ್ಗೆ ಇನ್ನಷ್ಟು ಮಾಹಿತಿ ಕಲೆ ಹಾಕಿದಾಗ ಕೇರಳದ ಐಟಿ ಇಲಾಖೆಯ ಐಟಿ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್(KSITIL) ನಲ್ಲಿ ಕಾರ್ಯ ನಿರ್ವಹಣಾ ವ್ಯವಸ್ಥಾಪಕಿಯಾಗಿದ್ದರು ಎಂದು ತಿಳಿದು ಬಂದಿದೆ. ಅಲ್ಲದೇ, ಐಟಿ ಇಲಾಖೆ ನೇರ ಸಿಎಂ ಪಿಣರಾಯಿ ವಿಜಯನ್ ಅವರ ಕೈಲಿದೆ. ಐಟಿ ಇಲಾಖೆ ಹುದ್ದೆ ಅವಧಿ ಮುಗಿದರೂ ಸ್ವಪ್ನಗೆ ಲಾಕ್ಡೌನ್ ವರವಾಗಿ ಪರಿಣಮಿಸಿತ್ತು. ಇನ್ನೂ 6 ತಿಂಗಳ ಅವಧಿಗೆ ಹುದ್ದೆಯಲ್ಲಿ ಮುಂದುವರೆಯಲು ಸರ್ಕಾರ ಆದೇಶಿಸಿತ್ತು. ಇದೆಲ್ಲದರ ಲಾಭವನ್ನು ಪಡೆದು ಚಿನ್ನದ ಸ್ಮಗಲಿಂಗ್ ನಲ್ಲಿ ಆಕೆ ತೊಡಗಿದ್ದರು ಎನ್ನಲಾಗಿದೆ.
ಸಿಬಿಐ ತನಿಖೆಗೆ ಆಗ್ರಹ
ಸ್ವಪ್ನಾ ಸುರೇಶ್ ತಿರುವನಂತಪುರದ ಯುನೈಟೆಡ್ ಅರಬ್ ಎಮಿರೇಟ್ಸ್ ಕಾನ್ಸುಲೇಟ್ನಲ್ಲಿ ಕಾರ್ಯನಿರ್ವಾಹಕ ಕಾರ್ಯದರ್ಶಿಯಾಗಿ, ಕೇರಳದ ಐಟಿ ಇಲಾಖೆಯಲ್ಲೂ ಕೆಲಸ ಮಾಡಿದ್ದರು ಎಂದು ತಿಳಿದು ಬಂದಿದೆ. ಹೀಗಾಗಿ, ಚಿನ್ನದ ಕಳ್ಳಸಾಗಣೆ ದಂಧೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಕಚೇರಿಯೊಂದಿಗೆ ಸಂಬಂಧವಿದೆ. ಕಸ್ಟಮ್ಸ್ ವಶಕ್ಕೆ ತೆಗೆದುಕೊಂಡಂತೆ ಮೊದಲ ಕರೆ ಮುಖ್ಯಮಂತ್ರಿ ಕಚೇರಿಯಿಂದ ಬಂದಿದೆ. ಸ್ವಪ್ನಾ ಸುರೇಶ್ ಅವರು ಮುಖ್ಯಮಂತ್ರಿಯ ಪ್ರಧಾನ ಕಾರ್ಯದರ್ಶಿ ಎಸ್.ಶಿವಸನಕರ್ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ, ಅವರು ಐಟಿ ಕಾರ್ಯದರ್ಶಿಯೂ ಆಗಿದ್ದಾರೆ. ಹೀಗಾಗಿ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ತಕ್ಷಣವೇ ವಹಿಸಬೇಕು ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಆಗ್ರಹಿಸಿದ್ದಾರೆ.
ಯುಎಇ ಕಾನ್ಸುಲೇಟ್ನಿಂದ ಹೊರಹಾಕಲ್ಪಟ್ಟ ಸ್ವಪ್ನಾ
ಯುಎಇ ಕಾನ್ಸುಲೇಟ್ನಿಂದ ಹೊರಹಾಕಲ್ಪಟ್ಟ ಸ್ವಪ್ನಾ ಅವರಿಗೆ ಮುಖ್ಯಮಂತ್ರಿ ಹೊಂದಿರುವ ಖಾತೆಗೆ ಸಂಬಂಧಿಸಿದಂತೆ ಮುಖ್ಯ ಹುದ್ದೆ ಹೇಗೆ ಸಿಕ್ಕಿದೆ, ಸಿಎಂ ಕಚೇರಿ ಜೊತೆ ಏನು ಸಂಬಂಧವಿದೆ ಎಂದು ಬಿಜೆಪಿ ಮುಖಂಡರು ಪ್ರಶ್ನಿಸಿ, ಸಿಎಂ ಪಿಣರಾಯಿ ವಿಜಯನ್ ಜೊತೆ ಸ್ವಪ್ನಾ ಇರುವ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ. ಶಿವಸನಕರ್ ಅಮಾನತು ಮಾಡಿದರೆ ಸಾಲದು, ತನಿಖೆ ಮುಗಿಯುವ ತನಕ ಸಿಎಂ ಕಚೇರಿ ಬಂದ್ ಆಗಲಿ, ಪಾರದರ್ಶಕ ತನಿಖೆಯಾಗಬೇಕಾದರೆ ಸಿಬಿಐ ಕೇಸ್ ತೆಗೆದುಕೊಳ್ಳಬೇಕು ಎಂದಿದ್ದಾರೆ.
|
ಪಿಣರಾಯಿ ವಿಜಯನ್ ಅವರ ಕಚೇರಿ ಪ್ರತಿಕ್ರಿಯೆ
ಕಳ್ಳಸಾಗಣೆ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡಿ ಚಿನ್ನವನ್ನು ವಶಪಡಿಸಿಕೊಂಡ ಕಸ್ಟಮ್ಸ್ ತಂಡವನ್ನು ನಾನು ಅಭಿನಂದಿಸುತ್ತೇನೆ, ಪ್ರಧಾನ ಕಾರ್ಯದರ್ಶಿ ಎಸ್.ಶಿವಸನಕರ್ ಆಮಾನತ್ತಿನಲ್ಲಿಡಲಾಗಿದೆ. ಮಹಿಳೆ ನೇಮಕಾತಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಚಿನ್ನದ ಸ್ಮಗಲಿಂಗ್ ಗೂ ಸಿಎಂ ಕಚೇರಿಗೂ ಯಾವುದೇ ಸಂಬಂಧವಿಲ್ಲ. ರಾಜತಾಂತ್ರಿಕ ಕಚೇರಿ ವಿಳಾಸ ಇದ್ದಿದ್ದರಿಂದ ಈ ಬಗ್ಗೆ ಕೇಳಲು ಸಿಎಂ ಕಚೇರಿಗೆ ಅಧಿಕಾರಿಗಳು ಕರೆ ಮಾಡಿದ್ದರು ಅಷ್ಟೇ ಎಂದು ಪಿಣರಾಯಿ ವಿಜಯನ್ ಅವರ ಕಚೇರಿ ಪ್ರತಿಕ್ರಿಯಿಸಿದೆ.