ವಾರ್ಷಿಕ ತೀರ್ಥಯಾತ್ರೆ: ಶಬರಿಮಲೆ ದೇವಸ್ಥಾನ ನ.15 ರಿಂದ ಓಪನ್
ಕೊಚ್ಚಿ, ನವೆಂಬರ್ 03: ವಿಶ್ವವಿಖ್ಯಾತ ಶಬರಿಮಲೆಯ ಅಯ್ಯಪ್ಪ ದೇವಸ್ಥಾನದಲ್ಲಿ ಶಬರಿಮಲೆ ವಾರ್ಷಿಕ ತೀರ್ಥಯಾತ್ರೆಯು ನವೆಂಬರ್ 15 ರಿಂದ ಆರಂಭ ಆಗಲಿದ್ದು, ಈ ಹಿನ್ನೆಲೆಯಿಂದಾಗಿ ನವೆಂಬರ್ 15 ರಿಂದ ಶಬರಿಮಲೆಯ ಅಯ್ಯಪ್ಪ ದೇವಸ್ಥಾನ ಭಕ್ತರಿಗಾಗಿ ತೆರೆಯಲಿದೆ.
ಈ ಬಗ್ಗೆ ಮಾಹಿತಿ ನೀಡಿರುವ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) "ಶಬರಿಮಲೆಯ ಅಯ್ಯಪ್ಪ ದೇವಸ್ಥಾನವು ಈ ಬಾರಿಯ ವಾರ್ಷಿಕ ತೀರ್ಥಯಾತ್ರೆಯ ಸಂದರ್ಭದಲ್ಲಿ ಎರಡು ತಿಂಗಳುಗಳ ಕಾಲ ತೆರೆದಿರಲಿದೆ," ಎಂದು ಹೇಳಿದೆ.
ಶಬರಿಮಲೆ ವಾರ್ಷಿಕ ತೀರ್ಥಯಾತ್ರೆ: ಈಗಲೇ 10 ಲಕ್ಷಕ್ಕೂ ಅಧಿಕ ನೋಂದಣಿ!
ಇನ್ನು ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿರುವ ಈ ದೇವಾಲಯವು ಬುಧವಾರ ಚಿತಿರಾ ಅಟ್ಟವಿಶೇಷ ಪೂಜೆಗಾಗಿ ಭಕ್ತರಿಗಾಗಿ ತೆರೆದಿದೆ. "ಇಂದು ಪೂಜೆಯ ಬಳಿಕ ರಾತ್ರಿ 9 ಗಂಟೆಗೆ ಮುಚ್ಚಲಾಗುತ್ತದೆ. ಶಬರಿಮಲೆಯ ಅಯ್ಯಪ್ಪ ದೇವಸ್ಥಾನಕ್ಕೆ ವಾರ್ಷಿಕ ತೀರ್ಥಯಾತ್ರೆಯ ಸಂದರ್ಭದ ಭೇಟಿ ನೀಡಲು ಇದಕ್ಕೂ ಮುಂಚೆಯೇ ವರ್ಚುವಲ್ ಕ್ಯೂ ಬುಕಿಂಗ್ ಮಾಡಿಕೊಂಡಿರಬೇಕು," ಎಂದು ಕೂಡಾ ಮಂಡಳಿ ತಿಳಿಸಿದೆ.
ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಕೋವಿಡ್ ಲಸಿಕೆಯನ್ನು ಪಡೆದ ಪ್ರಮಾಣ ಪತ್ರವನ್ನು ಹೊಂದಿರಬೇಕು. ಹಾಗೆಯೇ ಕೋವಿಡ್ ನೆಗೆಟಿವ್ ವರದಿಯನ್ನು ಹೊಂದಿರಬೇಕು. 72 ಗಂಟೆಗಳಿಗಿಂತ ಒಳಗೆ ಮಾಡಲಾದ ಕೋವಿಡ್ ಲಸಿಕೆಯನ್ನು ಪಡೆದ ಪ್ರಮಾಣ ಪತ್ರವನ್ನು ತೋರಿಸುವುದು ಹಾಗೂ ಕೊರೊನಾ ವೈರಸ್ ಸೋಂಕಿನ ಪರೀಕ್ಷೆಯ ಆರ್ಟಿ-ಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿಯನ್ನು ಹೊಂದಿರಬೇಕು.
ಶಬರಿಮಲೆಯಲ್ಲಿ ದಿನಕ್ಕೆ 25 ಸಾವಿರ ಭಕ್ತರಿಗೆ ಅವಕಾಶ; ಲಸಿಕೆ, ಪರೀಕ್ಷೆ ಕಡ್ಡಾಯ
ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂ ಕೋರ್ಟ್ ಅವಕಾಶ ನೀಡುವ ಮೂಲಕ ಮಹತ್ವದ ಆದೇಶವನ್ನು ನೀಡಿದೆ. ಆದರೆ ಇದು ಭಾರೀ ವಿವಾದಕ್ಕೆ ಕಾರಣವಾಗಿದೆ ಎಂಬುವುದನ್ನು ನಾವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು. ಬೇರೆ ದೇವಾಲಯಗಳಂತೆ ಶಬರಿಮಲೆಯು ಪ್ರತಿ ದಿನವೂ ತೆರೆಯುವುದಿಲ್ಲ. ಬದಲಾಗಿ ವರ್ಷದ ಕೆಲವು ದಿನಗಳಲ್ಲಿ ಮಾತ್ರ ಈ ದೇವಾಲಯವನ್ನು ತೆರೆಯಲಾಗುತ್ತದೆ. ವಾರ್ಷಿಕ ತೀರ್ಥಯಾತ್ರೆಯು ನವೆಂಬರ್ ಮೂರನೇ ವಾರದಲ್ಲಿ ಆರಂಭವಾಗುತ್ತದೆ. ಬಳಿಕ ಜನವರಿ ಎರಡನೇ ವಾರದಲ್ಲಿ ಕೊನೆಯಾಗುತ್ತದೆ.
ಪ್ರತಿ ದಿನ 25 ಸಾವಿರ ಭಕ್ತರಿಗೆ ಅವಕಾಶ
ಇನ್ನು ಈ ದೇವಾಲಯದ ಆರಂಭಕ್ಕೂ ಮುನ್ನ ನೋಂದಾವಣಿ ಪ್ರಕ್ರಿಯೆಯಲ್ಲಿ, ಈಗಾಗಲೇ ಹತ್ತು ಲಕ್ಷಕ್ಕೂ ಅಧಿಕ ಮಂದಿ ನೋಂದವಣಿ ಮಾಡಿಕೊಂಡಿದ್ದಾರೆ ಎಂದು ಅಕ್ಟೋಬರ್ 31 ರಂದು ಕೇರಳ ಸರ್ಕಾರವು ಮಾಹಿತಿ ನೀಡಿತ್ತು. ಕೊರೊನಾ ವೈರಸ್ ಸೋಂಕು ಕಾರಣದಿಂದಾಗಿ ಈ ಬಾರಿ ಪ್ರತಿ ದಿನ 25 ಸಾವಿರ ಭಕ್ತರಿಗೆ ದರ್ಶನ ಪಡೆಯಲು ಮಾತ್ರ ಅವಕಾಶ ನೀಡಲಾಗಿದೆ. ಈ ನಡುವೆ ಸುಮಾರು ಹತ್ತು ಲಕ್ಷಕ್ಕೂ ಅಧಿಕ ಜನರು ಈಗಲೇ ನೊಂದಾವಣಿ ಮಾಡಿಕೊಂಡಿದ್ದಾರೆ ಎಂದು ಕೇರಳ ದೇವಸ್ವಂ ಸಚಿವ ಕೆ ರಾಧಾಕೃಷ್ಣನ್ ತಿಳಿಸಿದ್ದಾರೆ.
"ಶಬರಿಮಲೆ ವಾರ್ಷಿಕ ತೀರ್ಥಯಾತ್ರೆಗೆ ಈ ವರ್ಷ ದಿನಕ್ಕೆ 25 ಸಾವಿರ ಭಕ್ತರಿಗೆ ದರ್ಶನ ಪಡೆಯಲು ಅವಕಾಶ ನೀಡುವ ಮೂಲಕ ಒಟ್ಟು 15.25 ಲಕ್ಷ ಜನರಿಗೆ ದೇವರ ದರ್ಶನ ಪಡೆಯಲು ಅವಕಾಶ ನೀಡಬಹುದು," ಎಂದು ಕೂಡಾ ಕೇರಳ ದೇವಸ್ವಂ ಸಚಿವ ಕೆ ರಾಧಾಕೃಷ್ಣನ್ ಮಾಹಿತಿ ನೀಡಿದ್ದಾರೆ.
ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಬಾಗಿಲು ಮತ್ತೆ ಓಪನ್
ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಕೇರಳ ದೇವಸ್ವಂ ಸಚಿವ ಕೆ ರಾಧಾಕೃಷ್ಣನ್, "ಕಾಲಮಿತಿಯ ವಿಧಾನದಲ್ಲಿ ಭಕ್ತರ ಆಗಮನಕ್ಕೆ ಅವಕಾಶವನ್ನು ನೀಡುವ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗುತ್ತದೆ. ಕೊರೊನಾ ವೈರಸ್ ಸೋಂಕು ಕಾರಣದಿಂದಾಗಿ ಈ ವರ್ಷವೂ ಕೂಡಾ ಶಬರಿಮಲೆ ವಾರ್ಷಿಕ ತೀರ್ಥಯಾತ್ರೆಗೆ ಆನ್ಲೈನ್ ಮೂಲಕ ಬುಕ್ಕಿಂಗ್ ಮಾಡಿಕೊಳ್ಳುವ ವ್ಯವಸ್ಥೆಯನ್ನು ಮಾಡಲಾಗಿದೆ. ನಾವು ದೇವಾಲಯಕ್ಕೆ ಪ್ರತಿದಿನ ಆಗಮಿಸುವ ಭಕ್ತರ ಸಂಖ್ಯೆಯನ್ನು 25,000 ಕ್ಕೆ ನಿಗದಿ ಮಾಡಿದ್ದೇವೆ. ಈಗಾಗಲೇ ಹತ್ತು ಲಕ್ಷ ಭಕ್ತರು ನೋಂದಾವಣಿ ಮಾಡಿಕೊಂಡಿದ್ದಾರೆ," ಎಂದು ತಿಳಿಸಿದ್ದರು.
(ಒನ್ಇಂಡಿಯಾ ಸುದ್ದಿ)