ಕೊರೊನಾ ಲಸಿಕೆ ವಿತರಣೆಯಲ್ಲಿ ನಮಗೇ ಆದ್ಯತೆ ನೀಡಿ; ಕೇರಳ ಸರ್ಕಾರ
ತಿರುವನಂತಪುರಂ, ಜನವರಿ 05: ಕೊರೊನಾ ಲಸಿಕೆ ವಿತರಣೆ ಸಂದರ್ಭ ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಕೇರಳ ಸರ್ಕಾರ ಮನವಿ ಮಾಡಿದೆ.
ಇಲ್ಲಿನ ಜನಸಂಖ್ಯೆ ಹಾಗೂ ರಾಜ್ಯದಲ್ಲಿ ಹೃದಯ ಸಂಬಂಧಿ, ಮಧುಮೇಹ ಸಮಸ್ಯೆ ಪ್ರಕರಣಗಳು ಹೆಚ್ಚಿರುವುದನ್ನು ಗಣನೆಗೆ ತೆಗೆದುಕೊಂಡು ರಾಜ್ಯಕ್ಕೆ ಆದ್ಯತೆಯಲ್ಲಿ ಕೊರೊನಾ ಲಸಿಕೆ ನೀಡಬೇಕು ಎಂದು ಕೇರಳ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಹೇಳಿದ್ದಾರೆ.
ಬ್ರಿಟನ್ ನಿಂದ ಕೇರಳಕ್ಕೆ ಮರಳಿದ್ದ 6 ಜನರಲ್ಲಿ ರೂಪಾಂತರ ಸೋಂಕು ಪತ್ತೆ
ಆರಂಭಿಕವಾಗಿ ಸೋಂಕು ಕಾಣಿಸಿಕೊಂಡ ರಾಜ್ಯ ಕೇರಳವಾಗಿದ್ದರೂ, ಸೋಂಕು ನಿಭಾಯಿಸುವಲ್ಲಿ ರಾಜ್ಯ ಗೆದ್ದಿತ್ತು. ಆದರೆ ಈಚೆಗೆ ಇಲ್ಲಿನ ಕೊರೊನಾ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದೆ. ಜನಸಂಖ್ಯೆಯ ಹೊರತಾಗಿಯೂ ಕೊರೊನಾ ಸೋಂಕಿನ ವಿರುದ್ಧದ ನಮ್ಮ ಕಾರ್ಯತಂತ್ರದಲ್ಲಿ ಯಶಸ್ವಿಯಾಗಿದ್ದೇವೆ. ನಮ್ಮ ಈ ಕಾರ್ಯತಂತ್ರ ಇನ್ನಷ್ಟು ಫಲ ನೀಡಬೇಕೆಂದರೆ, ಲಸಿಕೆಯನ್ನು ಮೊದಲು ನಮಗೆ ನೀಡಬೇಕು ಎಂದು ಸಾಮಾಜಿಕ ನ್ಯಾಯ ಇಲಾಖೆ ಅಧೀನದ ಸಾಮಾಜಿಕ ಭದ್ರತಾ ಮಿಷನ್ ನ ಕಾರ್ಯನಿರ್ವಾಹಕ ನಿರ್ದೇಶಕ ಮೊಹಮದ್ ಅಶೀಲ್ ಮನವಿ ಮಾಡಿದ್ದಾರೆ.
ರಾಜ್ಯದ ಈ ಮನವಿ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಮಾಹಿತಿ ತಂತ್ರಜ್ಞಾನ ಕೋಶದ ಮುಖ್ಯಸ್ಥ ಅಮಿತ್ ಮಾಲ್ವಿಯಾ, "ಸಾಂಕ್ರಾಮಿಕ ರೋಗವನ್ನು ಆರಂಭಿಕ ಹಂತದಲ್ಲೇ ನಿಭಾಯಿಸಿ ಕಾರ್ಯತಂತ್ರದಿಂದ ವ್ಯಾಪಕವಾಗಿ ಪ್ರಶಂಸಿಸಲ್ಪಟ್ಟಿದ್ದ ಕೇರಳದಲ್ಲಿ ಈಗ ಸೋಂಕು ಹೆಚ್ಚಿದೆಯೇ? ಇಡೀ ವಿಶ್ವಕ್ಕೆ ಕೊರೊನಾ ಸೋಂಕನ್ನು ಸೋಲಿಸುವ ಕುರಿತು ಹೇಳಿಕೊಟ್ಟಿದ್ದ ಕೇರಳದಲ್ಲೀಗ ಲಸಿಕೆಯ ಆದ್ಯತೆಗಾಗಿ ಹೆಚ್ಚಿನ ಪ್ರಕರಣಗಳು ಇವೆ ಎಂದು ತೋರಿಸಲಾಗುತ್ತಿದೆ" ಎಂದು ಟೀಕೆ ಮಾಡಿದರು.
ಕೇರಳದಲ್ಲಿ ಸೋಮವಾರ, ಜನವರಿ 4ರ ವರದಿಯಂತೆ 65,467 ಸಕ್ರಿಯ ಕೊರೊನಾ ಪ್ರಕರಣಗಳಿವೆ. ಜ.4ರಂದು 4,602 ಹೊಸ ಪ್ರಕರಣಗಳು ದಾಖಲಾಗಿವೆ.