ಕೇರಳದಲ್ಲಿ 7,643 ಹೊಸ ಕೋವಿಡ್ ಪ್ರಕರಣ ದಾಖಲು
ತಿರುವನಂತಪುರಂ, ಅಕ್ಟೋಬರ್ 19: ಕೇರಳದಲ್ಲಿ ಮಂಗಳವಾರ 7,643 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದೆ ಎಂದು ಆರೋಗ್ಯ ಇಲಾಖೆಯು ಮಾಹಿತಿ ನೀಡಿದೆ. ಮಂಗಳವಾರ 77 ಮಂದಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದು, ರಾಜ್ಯದಲ್ಲಿ ಸಾವಿನ ಸಂಖ್ಯೆ 27,002ಕ್ಕೆ ಏರಿಕೆ ಆಗಿದೆ.
ಕೇರಳದಲ್ಲಿ ಕೋವಿಡ್ ಪರೀಕ್ಷಾ ಪಾಸಿಟಿವಿಟಿ ದರವು ಶೇಕಡ 9.27 ಆಗಿದೆ. ಈ ಹಿಂದೆ ಸೆಪ್ಟೆಂಬರ್ ತಿಂಗಳಿನಲ್ಲಿ ಕೇರಳದಲ್ಲಿ ಶೇ 18.41 ಪರೀಕ್ಷಾ ಪಾಸಿಟಿವಿಟಿ ದರವು ದಾಖಲಾಗಿತ್ತು. ಇನ್ನು ತ್ರಿಶೂರಿನಲ್ಲಿ 1,017, ತಿರುವನಂತಪುರದಲ್ಲಿ 963, ಎರ್ನಾಂಕುಲಂನಲ್ಲಿ 817, ಕೋಜಿಕ್ಕೋಡಿನಲ್ಲಿ 787, ಕೊಟ್ಟಾಯಂನಲ್ಲಿ 765, ಪಾಲಕ್ಕಾಡ್ನಲ್ಲಿ 542, ಕೊಲ್ಲಂನಲ್ಲಿ 521, ಕಣ್ಣೂರಿನಲ್ಲಿ 426, ಪಥನಂತಿಟ್ಟದಲ್ಲಿ 424, ಇಡುಕ್ಕಿ 400, ಮಲಪ್ಪುರಂ 353, ಆಲಪ್ಪುಲ 302, ವಯನಾಡು 185 ಹಾಗೂ ಕಾಸರಗೋಡಿನಲ್ಲಿ 141 ಮಂದಿಯಲ್ಲಿ ಹೊಸದಾಗಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ.
ಕಳೆದ 24 ಗಂಟೆಯಲ್ಲಿ ಒಟ್ಟು 82,408 ಮಂದಿಯ ಕೋವಿಡ್ ಪರೀಕ್ಷೆಯನ್ನು ನಡೆಸಲಾಗಿದ್ದು, ಈ ಪೈಕಿ 7,643 ಮಂದಿಗೆ ಕೋವಿಡ್ ಸೋಂಕು ತಗುಲಿರುವುದು ಖಚಿತವಾಗಿದೆ. ಪ್ರಸ್ತುತ 2,92,178 ಮಂದಿ ರಾಜ್ಯದಲ್ಲಿ ತೀವ್ರಾ ನಿಗಾದಲ್ಲಿ ಇದ್ದಾರೆ. ಈ ಪೈಕಿ 2,83,368 ಮಂದಿ ಮನೆಯಲ್ಲಿ ಅಥವಾ ಸಾಂಸ್ಥಿಕ ಕ್ವಾರಂಟೈನ್ನಲ್ಲಿ ಇದ್ದಾರೆ. 9,810 ಮಂದಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. 854 ಮಂದಿಯನ್ನು ಮಂಗಳವಾರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಒಟ್ಟು 80,262 ಕೋವಿಡ್ ಪ್ರಕರಣಗಳ ಪೈಕಿ 10.4 ಶೇಕಡ ಮಂದಿ ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ. 7166 ಮಂದಿಗೆ ಸಂಪರ್ಕದಿಂದ ಕೋವಿಡ್ ತಗುಲಿದೆ. ಇನ್ನು 353 ಮಂದಿಗೆ ಸೋಂಕು ತಗುಲಿದ ಮೂಲ ಇನ್ನು ಪತ್ತೆಯಾಗಿಲ್ಲ. 80 ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ಸೋಂಕು ತಗುಲಿದೆ. 10,488 ಮಂದಿಗೆ ಕೋವಿಡ್ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಈವರೆಗೆ 47,60,781 ಮಂದಿ ಕೋವಿಡ್ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಆಗಿದ್ದಾರೆ.
ಕೋವಿಡ್ ಲಸಿಕೆಯ ಮಾಹಿತಿ; ಭಾರತದ ಕೋವಿಡ್ ಲಸಿಕೆಯನ್ನು 99 ಜನರಿಗೆ ನೀಡಲಾಗಿದೆ. 70 ಕೋಟಿಗೂ ಹೆಚ್ಚು ಜನರು ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. ಸುಮಾರು 29 ಕೋಟಿ ಡೋಸ್ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಇತ್ತೀಚೆಗೆ "ಕೇರಳ ರಾಜ್ಯದಲ್ಲಿ ಸುಮಾರು ಶೇಕಡ 93.16 ಜನರಿಗೆ ಮೊದಲ ಡೋಸ್ ಕೊರೊನಾ ವೈರಸ್ ವಿರುದ್ಧದ ಲಸಿಕೆಯನ್ನು ನೀಡಲಾಗಿದೆ," ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಇತ್ತೀಚೆಗೆ ಮಾಹಿತಿ ನೀಡಿದ್ದಾರೆ.
ದೇಶದಲ್ಲಿಯೇ ಅತಿ ಹೆಚ್ಚು ಹೊಸ ಕೋವಿಡ್ ಪ್ರಕರಣಗಳು ದಾಖಲಾಗುತ್ತಿರುವ ರಾಜ್ಯ ಕೇರಳವಾಗಿದೆ. ಆರೋಗ್ಯ ಸಚಿವೆ ವೀಣಾ ಜಾರ್ಜ್, "ಯಾರು ಈವರೆಗೆ ಕೋವಿಡ್ ಲಸಿಕೆಯನ್ನು ಪಡೆದಿಲ್ಲ, ಅವರು ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳಿ," ಎಂದು ಮನವಿ ಮಾಡಿದ್ದಾರೆ.
ಕೆಲವೇ ದಿನಗಳ ಹಿಂದೆ ದೇಶದಲ್ಲಿ ಅತಿ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗುತ್ತಿರುವ ರಾಜ್ಯವೆಂದು ಗುರುತಿಸಿಕೊಂಡಿದ್ದ ಕೇರಳದಲ್ಲಿ ಇದೀಗ ಹೆಚ್ಚಿನ ಮಂದಿಯಲ್ಲಿ ಸೋಂಕಿನ ವಿರುದ್ಧ ಪ್ರತಿಕಾಯ ಸೃಷ್ಟಿಯಾಗಿರುವುದಾಗಿ ತಿಳಿದು ಬಂದಿದೆ. ಈಚೆಗೆ ರಾಜ್ಯದಲ್ಲಿ ಸೆರೊಸರ್ವೇ ನಡೆಸಲಾಗಿದ್ದು, 18 ವರ್ಷ ಮೇಲ್ಪಟ್ಟ ಸುಮಾರು 82% ಜನರು ಕೊರೊನಾ ಸೋಂಕಿನ ವಿರುದ್ಧ ಪ್ರತಿಕಾಯಗಳನ್ನು ಹೊಂದಿರುವುದಾಗಿ ಸಮೀಕ್ಷೆ ತಿಳಿಸಿದೆ. ಇದರೊಂದಿಗೆ, 5-17 ವಯೋಮಾನದ ಸುಮಾರು 40% ಮಕ್ಕಳು ಸೋಂಕಿಗೆ ಒಡ್ಡಿಕೊಂಡಿದ್ದಾರೆ ಎಂಬ ಅಂಶವನ್ನು ಹೇಳಿದೆ.
ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಸೆರೊಸರ್ವೇ ನಡೆಸುವಂತೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಸೂಚನೆ ನೀಡಿತ್ತು. ರಾಜ್ಯ ವಿಧಾನಸಭೆಯಲ್ಲಿ ಆರೋಗ್ಯ ಸಚಿವೆ ವೀಣಾ ಜಾರ್ಜ್ ಈ ಸೆರೊ ಸಮೀಕ್ಷಾ ವರದಿಯನ್ನು ಪ್ರಸ್ತುತಪಡಿಸಿದ್ದಾರೆ. ಕಳೆದ ನಾಲ್ಕು ತಿಂಗಳಿನಿಂದಲೂ ಕೇರಳದಲ್ಲಿ ಕೊರೊನಾ ಸೋಂಕನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ದೇಶದ ಒಟ್ಟಾರೆ ಪ್ರಕರಣಗಳಲ್ಲಿ ಕೇರಳ ರಾಜ್ಯವೊಂದರಿಂದಲೇ 60-70% ಪ್ರಕರಣಗಳು ದಾಖಲಾಗುತ್ತಿದ್ದವು.
ಐಸಿಎಂಆರ್ ಈ ಹಿಂದೆ ಜುಲೈ ತಿಂಗಳಿನಲ್ಲಿ ನಡೆಸಿದ್ದ ಸೆರೊ ಸರ್ವೇಯಲ್ಲಿ, ಇಡೀ ದೇಶದಲ್ಲಿಯೇ ಕೇರಳದಲ್ಲಿ ಅತಿ ಕಡಿಮೆ ಸೆರೊಪಾಸಿಟಿವಿಟಿ ಇರುವುದಾಗಿ ತಿಳಿಸಲಾಗಿತ್ತು. ಕೇರಳದಲ್ಲಿ ಆಗ 44.4% ಸೆರೊಪಾಸಿಟಿವಿಟಿ ದರವಿರುವುದಾಗಿ ತಿಳಿಸಿದ್ದು, ಇದೀಗ ಆ ದರ 82.6%ಗೆ ಏರಿಕೆಯಾಗಿದೆ.