ಕೇರಳ ಮಳೆ: 8 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ಗುಡುಗು ಸಹಿತ ಭಾರಿ ಮಳೆ
ತಿರುವನಂತಪುರಂ, ಅಕ್ಟೋಬರ್ 21: ಕಳೆದ ಕೆಲವು ದಿನಗಳಿಂದ ಮಳೆ ತೀವ್ರತೆ ಸ್ವಲ್ಪಮಟ್ಟಿಗೆ ಕುಸಿತ ಕಂಡಿದ್ದ ಕೇರಳದ ಹಲವು ಭಾಗಗಳಲ್ಲಿ ಗುರುವಾರ ಮತ್ತೆ ಗುಡುಗು ಮತ್ತು ಮಿಂಚಿನೊಂದಿಗೆ ಭಾರೀ ಮಳೆಯಾಗಿದೆ.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪತ್ತನಂತಿಟ್ಟ, ಕೊಟ್ಟಾಯಂ, ಇಡುಕ್ಕಿ, ಪಾಲಕ್ಕಾಡ್, ಮಲಪ್ಪುರಂ, ಕೋಯಿಕ್ಕೋಡ್, ವಯನಾಡ್ ಮತ್ತು ಕಣ್ಣೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ. ತಿರುವನಂತಪುರ, ಕೊಲ್ಲಂ, ಆಲಪ್ಪುಳ, ಎರ್ನಾಕುಲಂ, ತ್ರಿಶೂರ್ ಮತ್ತು ಕಾಸರಗೋಡು ಜಿಲ್ಲೆಗಳಿಗೆ ಇನ್ನೂ ಒಂದು ದಿನ ಭಾರೀ ಮಳೆಯಾಗುವ ಮುನ್ಸೂಚನೆ ನೀಡುವ ಮೂಲಕ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
"ನೈಋತ್ಯ ಮುಂಗಾರು ಕೇರಳದಲ್ಲಿ ಸಕ್ರಿಯವಾಗಿದೆ. ಇದರಿಂದಾಗಿ ರಾಜ್ಯದ ಬಹುತೇಕ ಸ್ಥಳಗಳಲ್ಲಿ ಮತ್ತು ಲಕ್ಷದ್ವೀಪದ ಕೆಲವು ಸ್ಥಳಗಳಲ್ಲಿ ಮಳೆಯಾಗಿದೆ" ಎಂದು ಐಎಂಡಿ ಹೇಳಿಕೆಯಲ್ಲಿ ತಿಳಿಸಿದೆ.
ಪಾಲಕ್ಕಾಡ್ ಜಿಲ್ಲೆಯ ಪರಂಬಿಕುಲಂನಲ್ಲಿ 12 ಸೆಂಮೀ ಮಳೆಯಾಗಿದ್ದು, ಎರ್ನಾಕುಲಂನಲ್ಲಿ ಪಲ್ಲೂರುತಿ ಮತ್ತು ಎಣಮಕ್ಕಲ್ (ತ್ರಿಶೂರ್) ಮತ್ತು ಮನ್ನರಕ್ಕಾಡ್ (ಪಾಲಕ್ಕಾಡ್) ಕ್ರಮವಾಗಿ 11 ಸೆಂಮೀ ಮತ್ತು 9 ಸೆಂಮೀ ಮಳೆಯಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಗುರುವಾರ ಸಮುದ್ರ ತೀರದಲ್ಲಿ 40-50 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು ಚಂಡಮಾರುತದ ವಾತಾವರಣವಿದೆ. ಇದರಿಂದ ರಾಜ್ಯದಲ್ಲಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.
ಅಕ್ಟೋಬರ್ 11 ರಿಂದ ಕೇರಳವು ಅತಿಯಾದ ಮಳೆಯಿಂದ ತತ್ತರಿಸಿದೆ. ಅಕ್ಟೋಬರ್ 18 ಮತ್ತು 19 ರಂದು ಅದರ ತೀವ್ರತೆಯಲ್ಲಿ ಸ್ವಲ್ಪ ಇಳಿಕೆಯಾಗಿದೆ. ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಮತ್ತು ಅರೇಬಿಯನ್ ಸಮುದ್ರದಲ್ಲಿ ಲಕ್ಷದ್ವೀಪದ ಕರಾವಳಿಯಲ್ಲಿ ಅಕ್ಟೋಬರ್ 13-17ರವರೆಗೆ ರೂಪುಗೊಂಡ ಕಡಿಮೆ ಒತ್ತಡದ ಪ್ರದೇಶಗಳಿಂದಾಗಿ ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗಿದೆ. ಈ ವೇಳೆ ಕೇರಳದಾದ್ಯಂತ 3,851 ಕುಟುಂಬಗಳನ್ನು 304 ಪುನರ್ವಸತಿ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ನಿರಂತರ ಮಳೆ ಪ್ರವಾಹಕ್ಕೆ ಈವರೆಗೆ 39 ಜನ ಸಾವನ್ನಪ್ಪಿದ್ದು ಆರು ಜನ ಕಾಣೆಯಾಗಿದ್ದಾರೆ. ಭೀಕರ ಭೂಕುಸಿತದ ಜೊತೆಗೆ 217 ಮನೆಗಳು ಸಂಪೂರ್ಣವಾಗಿ ನಾಶವಾಗಿವೆ.
ಮಳೆ ಸಂಬಂಧಿತ ಅನಾಹುತಗಳ ಬಗ್ಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರವು ಸಂತ್ರಸ್ತ ಕುಟುಂಬಗಳನ್ನು ಕೈಬಿಡುವುದಿಲ್ಲ ಮತ್ತು ರಕ್ಷಣಾ ಮತ್ತು ಪರಿಹಾರ ಕ್ರಮಗಳ ಮೂಲಕ ತನ್ನ ಕಾಳಜಿ ಮತ್ತು ಪರಿಗಣನೆಯನ್ನು ತೋರಿಸುತ್ತದೆ. ಜೀವನೋಪಾಯಕ್ಕೆ ಮತ್ತೆ ದಾರಿ ಮಾಡಿಕೊಡುತ್ತದೆ ಎಂದು ಪಿಣರಾಯಿ ಹೇಳಿದ್ದಾರೆ.
ಕೇರಳದಲ್ಲಿ ಇನ್ನೂ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಒಟ್ಟು 11 ಎನ್ಡಿಆರ್ಎಫ್ ತಂಡಗಳು ವಿವಿಧ ಜಿಲ್ಲೆಗಳಲ್ಲಿ ಮೊಕ್ಕಾಂ ಹೂಡಿದ್ದಾರೆ. ಭಾರತೀಯ ಸೇನೆಯ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ. ಜೊತೆಗೆ ವಾಯುಪಡೆ ಮತ್ತು ನೌಕಾಪಡೆಯ ಹೆಲಿಕಾಪ್ಟರ್ಗಳು ಕಾರ್ಯಾಚರಣೆಗೆ ಸಜ್ಜಾಗಿವೆ. ಅಕ್ಟೋಬರ್ 20 ರಿಂದ ಕೇರಳ ಸೇರಿದಂತೆ ದಕ್ಷಿಣ ರಾಜ್ಯಗಳಲ್ಲಿ ಎರಡು-ಮೂರು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿರುವುದರಿಂದ, ಅದಕ್ಕೆ ತಕ್ಕಂತೆ ಜನರಿಗೆ ಎಚ್ಚರಿಕೆಗಳನ್ನು ನೀಡಲಾಗುತ್ತಿದೆ.
ಅಣೆಕಟ್ಟುಗಳಿಂದ ನೀರನ್ನು ನಿಯಂತ್ರಿತ ರೀತಿಯಲ್ಲಿ ಬಿಡಲಾಗುತ್ತಿದೆ. ಧಾರಾಕಾರ ಮಳೆಯನ್ನು ಎದುರಿಸಲು ಎಲ್ಲರ ಬೆಂಬಲವನ್ನು ಸಿಎಂ ಪಿಣರಾಯಿ ಕೋರಿದ್ದಾರೆ.
ಈ ವೇಳೆ ವಿರೋಧ ಪಕ್ಷದ ಪ್ರತಿನಿಧಿಯಾಗಿ ಸದನದಲ್ಲಿ ಮಾತನಾಡಿದ ಕಾಂಗ್ರೆಸ್ ಶಾಸಕ ಕೆ ಬಾಬು, ವಿಪತ್ತು ನಿರ್ವಹಣಾ ವ್ಯವಸ್ಥೆಯನ್ನು ಸುಧಾರಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಪದೇ ಪದೇ ನೈಸರ್ಗಿಕ ವಿಪತ್ತುಗಳು ಮರುಕಳಿಸುತ್ತಿದ್ದರೂ, ರಾಜ್ಯದಲ್ಲಿ ಎಚ್ಚರಿಕೆಯ ವ್ಯವಸ್ಥೆಯು ವಿಫಲವಾಗಿದೆ ಎಂದು ಅವರು ಆರೋಪಿಸಿದ್ದಾರೆ. ಸರ್ಕಾರ ಸಂತ್ರಸ್ತ ವ್ಯಕ್ತಿಗಳಿಗೆ ಸೂಕ್ತ ಪರಿಹಾರವನ್ನು ಒದಗಿಸಬೇಕೆಂದು ಮನವಿ ಮಾಡಿದ್ದಾರೆ.
ಜೊತೆಗೆ ಸದನದಲ್ಲಿ ಕೇರಳ ಪ್ರವಾಹ ಸಂತ್ರಸ್ತರಿಗೆ ಗೌರವ ಸಲ್ಲಿಸಲಾಯಿತು. ಸಂತ್ರಸ್ತ ಕುಟುಂಬಗಳಿಗೆ ಎಲ್ಲಾ ಬೆಂಬಲವನ್ನು ನೀಡುವ ಭರವಸೆಯೊಂದಿಗೆ ಸ್ಪೀಕರ್ ಎಂಬಿ ರಾಜೇಶ್ ಅವರು ಸದನವನ್ನು ಇಂದು ಮುಂದೂಡಲಾಗಿದೆ ಎಂದು ಘೋಷಿಸಿದರು. ಭಾರೀ ಮಳೆಯಿಂದಾಗಿ ಕೇರಳದ ಹಲವು ಪ್ರದೇಶಗಳಲ್ಲಿ 304 ಪುನರ್ವಸತಿ ಶಿಬಿರಗಳನ್ನು ತೆರೆಯಲಾಗಿದೆ. ಮುಂದಿನ ಎರಡು ದಿನಗಳ ವಿಧಾನಸಭೆ ಅಧಿವೇಶನವನ್ನು ರದ್ದುಗೊಳಿಸಲಾಗಿದೆ ಏಕೆಂದರೆ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಪ್ರವಾಹ ಪರಿಹಾರ ಕಾರ್ಯಕ್ರಮಗಳನ್ನು ಸಂಯೋಜಿಸಬೇಕಾಗಿದ್ದು, ಅಕ್ಟೋಬರ್ 25 ರಿಂದ ಮತ್ತೆ ಸದನ ಸಭೆ ನಡೆಸಲು ನಿರ್ಧರಿಸಲಾಗಿದೆ.