ಕೇರಳದಲ್ಲಿ ಮುಂದುವರಿದ ವರುಣನ ಆರ್ಭಟ: 11 ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ಘೋಷಣೆ
ನವದೆಹಲಿ, ಅಕ್ಟೋಬರ್ 17: ಅರಬ್ಬಿ ಸಮುದ್ರದಲ್ಲಿ ಚಂಡಮಾರುತದ ಪರಿಣಾಮ ಕೆಲವು ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದ್ದು, ಈ ತೀವ್ರತೆಯಿಂದಾಗಿ ನಡೆದ ದುರ್ಘಟನೆಯಲ್ಲಿ ಹಲವಾರು ಮಂದಿ ಸಾವನ್ನಪ್ಪಿದ್ದಾರೆ. ಈ ನಡುವೆ ಭಾರತೀಯ ಹವಾಮಾನ ಇಲಾಖೆಯು ಕೇರಳದ ಹನ್ನೊಂದು ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ಘೋಷಣೆ ಮಾಡಿದೆ.
ತಿರುವನಂತಪುರಂ, ಕೊಲ್ಲಂ, ಪಥನಂತಿಟ್ಟ, ಆಲಪ್ಪುಲ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ, ತ್ರಿಶೂರ್, ಪಾಲಕ್ಕಾಡ್, ಮಲಪುರಂ, ಕೋಝಿಕ್ಕೋಡಿನಲ್ಲಿ ಯೆಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ತಿಳಿಸಿದೆ.
ಕೇರಳ ಮಳೆ; ಕೊಟ್ಟಾಯಂನಲ್ಲಿ ಭೂ ಕುಸಿತದಿಂದ 9 ಸಾವು
ಇನ್ನು ಈ ಎಲ್ಲಾ ಜಿಲ್ಲೆಗಳಲ್ಲೂ ಭಾರೀ ಮಳೆಯಾಗಲಿದೆ ಎಂದು ಕೂಡಾ ಭಾರತೀಯ ಹವಾಮಾನ ಇಲಾಖೆಯು ಮಾಹಿತಿ ನೀಡಿದೆ. ಕಾವಳಿ, ಕೊಟ್ಟಾಯಂ ಮೊದಲಾದ ಪ್ರದೇಶಗಳಲ್ಲಿ ಮಳೆಯ ಕಾರಣದಿಂದಾಗಿ ಉಂಟಾದ ಭೂಕುಸಿತದಿಂದಾಗಿ ನಾಪತ್ತೆಯಾಗಿರುವವರ ಪತ್ತೆ ಕಾರ್ಯ ನಡೆಯುತ್ತಲಿದೆ.
ಕೊಟ್ಟಾಯಂ ಜಿಲ್ಲೆಯ ಕೋಟಿಕ್ಕಲ್ನಲ್ಲಿ ನಡೆದ ಭೂಕುಸಿತದಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 11 ಕ್ಕೆ ಏರಿಕೆಯಾಗಿದೆ. "ಕೊಟ್ಟಾಯಂ ಜಿಲ್ಲೆಯ ಕೋಟಿಕ್ಕಲ್ನಲ್ಲಿ ಮತ್ತೆ ಎರಡು ಮೃತ ದೇಹಗಳು ಪತ್ತೆಯಾಗಿದೆ. ಇದರಿಂದಾಗಿ ಮೃತರ ಸಂಖ್ಯೆ 11 ಕ್ಕೆ ಏರಿದೆ," ಎಂದು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ತಿಳಿಸಿದೆ.
ಇನ್ನು ಕೇರಳದಲ್ಲಿ ಈ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಸಂಬಂಧ ತುರ್ತು ಸಭೆಯನ್ನು ನಡೆಸಿದ್ದಾರೆ. ಆ ಸಭೆಯ ಬಳಿಕ ಮಾತನಾಡಿ, "ರಾಜ್ಯದ ಹಲವಾರು ಪ್ರದೇಶಗಳಲ್ಲಿ ಪರಿಸ್ಥಿತಿಯು ತೀರಾ ಗಂಭೀರವಾಗಿದೆ. ಜನರ ಜೀವವನ್ನು ಉಳಿಸುವ ನಿಟ್ಟಿನಲ್ಲಿ ನಾವು ಎಲ್ಲಾ ಕಾರ್ಯಗಳನ್ನು ಮಾಡುತ್ತಿದ್ದೇವೆ. ಈ ಹಿನ್ನೆಲೆ ಸೇನೆ, ವಾಯುಪಡೆ ಮತ್ತು ನೌಕಾದಳದ ನೆರವನ್ನು ನಾವು ಕೋರಿದ್ದೇವೆ. ನಿರಾಶ್ರಿತರ ಶಿಬಿರಗಳನ್ನು ಕೂಡಾ ಆರಂಭ ಮಾಡಲಾಗುವುದು," ಎಂದು ವಿವರಿಸಿದ್ದಾರೆ.
ಇನ್ನು ಈ ಬಗ್ಗೆ ಭಾನುವಾರ ಮಾಹಿತಿ ನೀಡಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, "ಕೇಂದ್ರ ಜಲ ಆಯೋಗದ ಪ್ರಕಾರ ಪಥನಂತಿಟ್ಟ, ಕೊಟ್ಟಾಯಂ, ತಿರುವನಂತಪುರಂ ಜಿಲ್ಲೆಯಲ್ಲಿ ಇರುವ ಮಂಡಮೋನು, ಕಲ್ಲುಪ್ಪರ, ತುಂಪಮಾನ್, ಪುಲ್ಲಕಾಯರ್, ಮಾಣಿಕ್ಕಲ್, ವೆಲ್ಲಾಯಿಕಡಾವು ಹಾಗೂ ಅರುವಿಪುರಂ ಡ್ಯಾಂನಲ್ಲಿ ನೀರಿನ ಮಟ್ಟ ಮತ್ತಷ್ಟು ಅಧಿಕವಾಗುತ್ತಿದೆ," ಎಂದು ತಿಳಿಸಿದರು.
"ಈ ಮಳೆಯ ಸಂದರ್ಭದಲ್ಲಿ ಜನರು ಎಲ್ಲಾ ಮುನ್ನೆಚ್ಚರಿಕೆಯನ್ನು ಕೈಗೊಳ್ಳಬೇಕು ಎಂದು ನಾವು ವಿನಂತಿ ಮಾಡುತ್ತೇವೆ. ರಾಜ್ಯಾದ್ಯಂತ 105 ನಿರಾಶ್ರಿತರ ಕೇಂದ್ರಗಳನ್ನು ತೆರೆಯಲಾಗಿದೆ. ಇನ್ನು ಅಧಿಕ ನಿರಾಶ್ರಿತರ ಶಿಬಿರಗಳನ್ನು ತೆರೆಯುವ ನಿಟ್ಟಿನಲ್ಲಿ ಕಾರ್ಯ ನಿರ್ವಹಣೆ ಮಾಡಲಾಗುತ್ತಿದೆ," ಎಂದು ಕೂಡಾ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು.
ಇನ್ನು ಕೇರಳದ ಮಳೆಯ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಭಾರತೀಯ ವಾಯುಪಡೆ, "ಕೇರಳದ ಮಳೆಯಿಂದ ಹಾನಿಗೊಳಗಾದ ಜಿಲ್ಲೆಗಳಲ್ಲಿ ಪ್ರವಾಹ ಪರಿಹಾರ ಕಾರ್ಯಗಳಿಗಾಗಿ ಮಧ್ಯಮ ಎತ್ತರದ ಹೆಲಿಕಾಪ್ಟರ್ಗಳು ಬಂದಿದೆ," ಎಂದಿದ್ದಾರೆ.
"ಕೇರಳ ಕರಾವಳಿಯ ಆಗ್ನೇಯ ಅರಬ್ಬಿ ಸಮುದ್ರದ ಮೇಲೆ ಕಡಿಮೆ ಒತ್ತಡದ ಪ್ರಭಾವದಿಂದ, ಕೇರಳದಲ್ಲಿ ಅಕ್ಟೋಬರ್ 17 ರ ಮುಂಜಾನೆಯವರೆಗೆ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಅಕ್ಟೋಬರ್ 19 ರ ಮುಂಜಾನೆಯಿಂದ ಮಳೆ ಕಡಿಮೆಯಾಗಲಿದೆ," ಎಂದು ಐಎಂಡಿ ಹೇಳಿಕೆಯಲ್ಲಿ ತಿಳಿಸಿದೆ. ಇನ್ನು ಐಎಂಡಿಯು ಅಕ್ಟೋಬರ್ 20 ರಂದು ಮತ್ತೆ ಭಾರೀ ಮಳೆಯಾಗಲಿದೆ ಎಂದು ಹೇಳಿದೆ. ಪಥನಂತಿಟ್ಟ, ಇಡುಕ್ಕಿ, ಮಲಪ್ಪುರಂನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯು ತಿಳಿಸಿದೆ.
ಭೂ ಕುಸಿತದಿಂದಾಗಿ ಕೊಟ್ಟಾಯಂ ಗ್ರಾಮೀಣ ಪ್ರದೇಶದಲ್ಲಿ 12 ಜನರು ನಾಪತ್ತೆಯಾಗಿದ್ದಾರೆ. ಪೊಲೀಸರು ಮತ್ತು ಅಗ್ನಿ ಶಾಮಕದಳವರು ಭಾನುವಾರ ಸಹ ಸ್ಥಳಕ್ಕೆ ತಲುಪಲು ಸಾಧ್ಯವಾಗಿಲ್ಲ. ಇಡುಕ್ಕಿ ಜಿಲ್ಲೆಯ ತೊಡುಪುಳದಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಕೇರಳದ ಸಚಿವ ಕೆ. ರಾಜನ್ ಈ ಕುರಿತು ಮಾಹಿತಿ ನೀಡಿದ್ದು, "ಸೇನೆ ಮತ್ತು ಭಾರತೀಯ ವಾಯುಪಡೆಯನ್ನು ರಕ್ಷಣಾ ಕಾರ್ಯಕ್ಕಾಗಿ ಸನ್ನದ್ಧವಾಗಿ ಇಡಲಾಗಿದೆ. ಸಹಾಯ ಅಗತ್ಯ ಇರುವವರಿಗೆ ಸರ್ಕಾರ ಸಹಾಯ ಮಾಡುತ್ತಿದೆ" ಎಂದು ಹೇಳಿದ್ದಾರೆ.
(ಒನ್ಇಂಡಿಯಾ ಸುದ್ದಿ)