ಕೇರಳ ಕಾಂಗ್ರೆಸ್ಸಿಗೆ ಆಘಾತ, ಕೆಸಿ ವೇಣುಗೋಪಾಲ್ ಸ್ಪರ್ಧಿಸುತ್ತಿಲ್ಲ!
ತಿರುವನಂತಪುರಂ, ಮಾರ್ಚ್ 10 : ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಚುನಾವಣಾ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಅವರು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ. ಪಕ್ಷದ ಹೈಕಮಾಂಡ್ ಗೆ ತಮ್ಮ ನಿರ್ಧಾರವನ್ನು ತಿಳಿಸಿರುವುದಾಗಿ ಸುದ್ದಿಗಾರರಿಗೆ ತಿಳಿಸಿದರು.
ಕೇರಳದ ಅಳಪ್ಪುಳ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ವೇಣುಗೋಪಾಲ್ ಅವರು ಮಾತನಾಡಿ, ಕರ್ನಾಟಕ ರಾಜ್ಯ ಚುನಾವಣೆ ಉಸ್ತುವಾರಿಯಾಗಿದ್ದೇನೆ, ದೆಹಲಿಯಲ್ಲಿ ಕುಳಿತುಕೊಂಡು ಅಳಪ್ಪುಳ ಕ್ಷೇತ್ರದ ಜನತೆಗೆ ನ್ಯಾಯ ಒದಗಿಸಲು ಸಾಧ್ಯವಿಲ್ಲ. ನಾನು ನನ್ನ ಮತದಾರರಿಗೆ ನ್ಯಾಯ ಸಲ್ಲಿಸಲು ಬಯಸಿದ್ದೇನೆ. ಆದರೆ, ಪಕ್ಷದ ವರಿಷ್ಠರ ಆಣತಿಯಂತೆ ನಾನು ಈ ಬಾರಿ ಚುನಾವಣೆ ಸ್ಪರ್ಧಿಸುವುದು ಸಾಧ್ಯವಾಗುವುದಿಲ್ಲ.
ಅಚ್ಚರಿಯ ಬೆಳವಣಿಗೆ, ಮಿಜೋರಾಂ ರಾಜ್ಯಪಾಲ ಸ್ಥಾನಕ್ಕೆ ಕೆ ರಾಜಶೇಖರನ್ ರಾಜೀನಾಮೆ
ನಾನು ನನ್ನ ನಿರ್ಧಾರವನ್ನು ಕೆಪಿಸಿಸಿ ಅಧ್ಯಕ್ಷ ಮುಲ್ಲಪಲ್ಲಿ ರಾಮಚಂದ್ರನ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಉಮ್ಮನ್ ಚಾಂಡಿ ಹಾಗೂ ವಿಪಕ್ಷ ನಾಯಕ ರಮೇಶ್ ಚೆನ್ನಿಥಲ ಅವರಿಗೆ ತಿಳಿಸಿದ್ದೇನೆ ಎಂದು ವೇಣುಗೋಪಾಲ್ ಹೇಳಿದರು.
ಅಶೋಕ್ ಗೆಹ್ಲೋಟ್ ಅವರು ರಾಜಸ್ಥಾನದ ಮುಖ್ಯಮಂತ್ರಿಯಾದ ಬಳಿಕ ಅವರ ಸ್ಥಾನಕ್ಕೇರಿದ ವೇಣುಗೋಪಾಲ್ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿಯಾದರು.
ಕೇರಳದಲ್ಲಿ ಸಾರ್ವತ್ರಿಕ ಚುನಾವಣೆಗಳು ಏಪ್ರಿಲ್ 23ರಂದು ಮತದಾನ ನಡೆಯಲಿದ್ದು, ಮೇ 23ರಂದು ಫಲಿತಾಂಶ ಹೊರ ಬರಲಿದೆ. ಸಿಪಿಐ(ಎಂ)ನಿಂದ ಶಾಸಕ ಎಎಂ ಆರಿಫ್ ಅವರು ಆಳಪ್ಪುಳ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.(ಪಿಟಿಐ)