ಕೇರಳ ಮಾದರಿ ಸರ್ಕಾರ - ಗಮನಿಸಬೇಕಾದ 3 ಅಂಶಗಳು
ತಿರುವನಂತಪುರ, ಮೇ 20: ಸಿಪಿಐಎಂ ನೇತೃತ್ವದ ಕೇರಳದ ಎಲ್ಡಿಎಫ್ ಸರ್ಕಾರವು ಈಗಾಗಲೇ ಕೊರೊನಾ, ನಿಫ ವೈರಸ್ ನಿರ್ವಹಣೆ, ನೆರೆ ನಿರ್ವಹಣೆ, ಆಕ್ಸಿಜನ್ ಬೇಡಿಕೆ ನಿರ್ವಹಣೆ ವಿಚಾರದಲ್ಲಿ ವಿಶ್ವಕ್ಕೆ ಮಾದರಿಯಾಗಿದೆ. ಈಗ ಪಿಣರಾಯ್ ವಿಜಯನ್ ನೇತೃತ್ವದ 2.0 ಸಂಪುಟದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೊರತುಪಡಿಸಿ, ಹೊಸ ಮಂತ್ರಿಗಳನ್ನು ಸಂಪುಟಕ್ಕೆ ಸೇರಿಸುವ ನಿರ್ಧಾರವನ್ನು ತೆಗೆದುಕೊಂಡಿದೆ.
ನಿಫಾ, ಕೊರೊನಾ ವೈರಸ್ಗಳ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಣೆ ಮಾಡುವ ಮೂಲಕ ವಿಶ್ವದಲ್ಲೇ ಭಾರೀ ಪ್ರಶಂಸೆಗೆ ಭಾಜನರಾದ ಟೀಚರಮ್ಮ ಎಂದೇ ಖ್ಯಾತಿ ಪಡೆದ ಕೆ.ಕೆ.ಶೈಲಜಾ ಕೂಡಾ ಈ ಬಾರಿಯ ಸಚಿವ ಸಂಪುಟದಲ್ಲಿ ಇಲ್ಲದಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಹಿಂದೆ ಕೇರಳ ಸರ್ಕಾರವನ್ನು ದೂರಿದ್ದ ವಿಪಕ್ಷಗಳು ಈಗ ಈ ಸಚಿವ ಸಂಪುಟ ಬದಲಾವಣೆಯ ಸಂದರ್ಭದಲ್ಲಿ ಸಂಪುಟ ಸಚಿವರುಗಳನ್ನು ಹೊಗಳಿರುವುದು ಕೂಡಾ ಸಾಮಾಜಿಕ ಜಾಲತಾಣದಲ್ಲಿ ವಾದ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಆದರೆ ಈ ನಡುವೆ ಹೊಸಬರಿಗೆ ಅವಕಾಶ ನೀಡುವ ತನ್ನ ಪಕ್ಷದ ನಿರ್ಧಾರವನ್ನು ಟೀಚರಮ್ಮ ಒಪ್ಪಿಕೊಂಡಿದ್ದಾರೆ. ಏತನ್ಮಧ್ಯೆ ಕೇರಳದ ಮಾದರಿ ಸರ್ಕಾರದ ಬಗ್ಗೆ ಗಮನಿಸಬೇಕಾದ ಐದು ಅಂಶಗಳು ಇದೆ.
ಹೊಸಬರಿಗೆ ಅವಕಾಶ - ಮಾದರಿ ನಡೆ
ಕೊರೊನಾ ನಿರ್ವಹಣೆ ಮೂಲಕ ವಿಶ್ವದ ಗಮನವನ್ನು ಕೇರಳ ಸೆಳೆದಿದೆ. ಈ ಕಾರ್ಯದ ಮುಖ್ಯ ರೂವಾರಿಯಾದ ಕೆ.ಕೆ. ಶೈಲಜಾ ಈ ಬಾರಿಯ ಸರ್ಕಾರದಲ್ಲಿ ಸಚಿವ ಸ್ಥಾನ ಪಡೆಯದಿದ್ದರೂ, ಹಳೆಬರಿಗೆ ಮಣೆ ಹಾಕದೆ, ಹೊಸಬರಿಗೆ ಅವಕಾಶ ನೀಡುವ ಮೂಲಕ ಕೇರಳ ಸರ್ಕಾರ ಮಾದರಿಯಾಗಿದೆ. ಈ ಹಿಂದೆ ಬೇರೆ ರಾಜ್ಯಗಳು ಹೊಸಬರಿಗೆ ಅವಕಾಶ ನೀಡಿದೆ. ಆದರೆ ಕೇರಳ ಸರ್ಕಾರ ಮೊದಲ ಬಾರಿಗೆ ಸಿಎಂ ಹೊರತುಪಡಿಸಿ ಸಂಪೂರ್ಣವಾಗಿ ಹೊಸಬರಿಗೆ ಅವಕಾಶ ನೀಡಿರುವುದು ಗಮನಾರ್ಹ ವಿಚಾರ.
ಕೇರಳದಲ್ಲಿ ಇತಿಹಾಸ ಸೃಷ್ಟಿ - ದಲಿತ ನಾಯಕ ರಾಧಾಕೃಷ್ಣನ್ ದೇವಸ್ವಂ ಸಚಿವ
ಎಲ್ಡಿಎಫ್ನ ನೂತನ ಸರ್ಕಾರದ ದೇವಸ್ವಂನ ಸಚಿವರನ್ನಾಗಿ ದಲಿತ ನಾಯಕರೋರ್ವರನ್ನು ನಿಯೋಜಿಸುವ ಮೂಲಕ ಕೇರಳ ಎಲ್ಡಿಎಫ್ ಸರ್ಕಾರವು ಇತಿಹಾಸ ಸೃಷ್ಟಿಸಿದೆ. ಈ ಹಿಂದೆ ಯುಡಿಎಫ್ ಸರ್ಕಾರವಿದ್ದಾಗ 3 ಬಾರಿ ದಲಿತರು ದೇವಸ್ವಂ ಸಚಿವರಾಗಿದ್ದರು. ಆದರೆ ಎಲ್ಡಿಎಫ್ ಸರ್ಕಾರದಲ್ಲಿ ಮೊದಲ ಬಾರಿಗೆ ದಲಿತ ನಾಯಕರೊಬ್ಬರು ದೇವಸ್ವಂ ಸಚಿವರಾಗಿದ್ದು ಎಲ್ಡಿಎಫ್ನ ನೂತನ ಸರ್ಕಾರದ ದೇವಸ್ವಂನ ಸಚಿವರನ್ನಾಗಿ ದಲಿತ ನಾಯಕರೋರ್ವರನ್ನು ನಿಯೋಜಿಸುವ ಮೂಲಕ ಕೇರಳ ಸರ್ಕಾರವು ಇತಿಹಾಸ ಸೃಷ್ಟಿಸಿದೆ. ಗುರುವಾರ ಸಿಪಿಎಂನ ಹಿರಿಯ ದಲಿತ ನಾಯಕ ಕೆ. ರಾಧಾಕೃಷ್ಣನ್ ಅವರು ದೇವಸ್ವಂನ ಸಚಿವರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ರಾಧಾಕೃಷ್ಣನ್ ಸಿಪಿಎಂನ ಕೇಂದ್ರ ಸಮಿತಿಯ ಸದಸ್ಯರಾಗಿದ್ದು, ವಿಧಾನಸಭೆ ಚುನಾವಣೆಯಲ್ಲಿ ತ್ರಿಶೂರ್ ಜಿಲ್ಲೆಯ ಚೇಲಕ್ಕರಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಸುಮಾರು 40 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಿರುವ ರಾಧಾಕೃಷ್ಣನ್, 2006ರಲ್ಲಿ ವಿಧಾನ ಸಭೆಯ ಸ್ಪೀಕರ್ ಹುದ್ದೆಯನ್ನು ನಿರ್ವಹಿಸಿದ್ದರು. ಹಾಗೆಯೇ ಇ.ಕೆ. ನಾಯನಾರ್ ಸಂಪುಟದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವ್ಯವಹಾರಗಳ ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದರು.
ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದ, ಬೀಡಿ ಕಾರ್ಮಿಕ ಚಲಾದನ್, ಆಡು ಸಾಕುವ ಸುಬೈದಾ ವಿಐಪಿಗಳು
ಗುರುವಾರ ಕೇರಳದಲ್ಲಿ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ನೇತೃತ್ವದ 2.0 ಸಂಪುಟ ಸಚಿವರು, ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಈ ಸಮಾರಂಭಕ್ಕೆ ಸುಮಾರು ೫೦೦ ಗಣ್ಯ ವ್ಯಕ್ತಿಗಳಿಗೆ ಆಹ್ವಾನ ಮಾಡಲಾಗಿದೆ. ಈ ಆಹ್ವಾನಿತರಲ್ಲಿ ಬೀಡಿ ಕಾರ್ಮಿಕ ಹಾಗೂ ಆಡು ಸಾಕುವ ಮಹಿಳೆಯೂ ಕೂಡಾ ಸೇರಿದ್ದಾರೆ. ಬೀಡಿ ಕಾರ್ಮಿಕ ಚಲಾದನ್ ಜನಾರ್ಧನನ್, ಈ ಹಿಂದೆ ಮುಖ್ಯಮಂತ್ರಿ ಪರಿಹಾರ ನಿಧಿಗೆ ತಮ್ಮ ಖಾತೆಯಲ್ಲಿದ್ದ ಎರಡು ಲಕ್ಷವನ್ನು ದೇಣಿಗೆಯಾಗಿ ನೀಡುವ ಮೂಲಕ ಸುದ್ದಿಯಾಗಿದ್ದರು. ಹಾಗೆಯೇ ಆಡು ಸಾಕುವ ಮಹಿಳೆ ಸುಬೈದಾ, ಎರಡು ಬಾರಿ ತನ್ನ ಆಡು, ಕುರಿಗಳನ್ನು ಮಾರಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡುವ ಮೂಲಕ ಸುದ್ದಿಯಾಗಿದ್ದರು.