ಈ ಶಾಸಕರ ನಿರ್ಧಾರಕ್ಕೆ ಬೆರಗಾದ ಜನರು 'ಉಘೇ' ಎಂದರು
ತಿರುವನಂತಪುರಂ, ನವೆಂಬರ್ 19: ಜನಪ್ರತಿನಿಧಿಗಳು ಸಮಾರಂಭಗಳಿಗೆ ಬಂದಾಗ ಅಥವಾ ಅವರನ್ನು ಭೇಟಿಯಾಗಲು ಬರುವ ಜನರು ಕೆ.ಜಿಗಟ್ಟಲೆ ತೂಕದ ಹೂವಿನ ಹಾರ ಹಾಕಿ ಸಂಭ್ರಮಿಸುತ್ತಾರೆ. ಇನ್ನು ಅನೇಕರು ಅಲಂಕೃತ ಬೊಕ್ಕೆಗಳನ್ನ ನೀಡುತ್ತಾರೆ. ಕೊನೆಗೆ ಅವು ಕಸದಬುಟ್ಟಿ ಸೇರುತ್ತವೆ. ಒಬ್ಬೊಬ್ಬ ಜನಪ್ರತಿನಿಧಿಯ ನಿವಾಸದಲ್ಲಿ ಹೂವಿನ ದೊಡ್ಡ ರಾಶಿಯೇ ಬಿದ್ದಿರುತ್ತದೆ. ಹಾಗೆಂದು ತಮಗೆ ಹೂವು ನೀಡುವುದು ಬೇಡ ಎಂದು ಒಬ್ಬ ಜನಪ್ರತಿನಿಧಿ ಕೂಡ ಹೇಳುವುದಿಲ್ಲ.
ಆದರೆ ಕೇರಳದಲ್ಲಿ ನೂತನವಾಗಿ ಆಯ್ಕೆಯಾದ ಶಾಸಕ ವಿ.ಕೆ. ಪ್ರಶಾಂತ್, ಶ್ಲಾಘನೀಯ ಮತ್ತು ಮಾದರಿ ಹೆಜ್ಜೆ ಇರಿಸಿದ್ದಾರೆ.
3 ರೂಪಾಯಿ ಒಡೆಯನಿಗೆ ಕಾಲಡಿ ಸಿಕ್ಕದ್ದು 40,000! ಪಡೆದಿದ್ದು ಏಳೇ ರೂಪಾಯಿ!
ವಟ್ಟಿಯೂರ್ಕವು ಕ್ಷೇತ್ರದಲ್ಲಿ ಅಕ್ಟೋಬರ್ನಲ್ಲಿ ನಡೆದ ಉಪ ಚುನಾವಣೆಯಲ್ಲಿ ಜಯಗಳಿಸಿದ ಸಿಪಿಐ (ಎಂ) ಅಭ್ಯರ್ಥಿ ಪ್ರಶಾಂತ್ ತಮ್ಮ ಸ್ನೇಹಿತರು, ಹಿತೈಷಿಗಳು ಮತ್ತು ಬೆಂಬಲಿಗರಿಗೆ ಹೇಳಿರುವುದು, ತಮ್ಮನ್ನು ಭೇಟಿಯಾಗಲು ಅಥವಾ ಸ್ವಾಗತಿಸಲು ಬರುವಾಗ ಹೂವಿನ ಬದಲು ಪುಸ್ತಕಗಳನ್ನು ತನ್ನಿ ಎಂದು.
ಪ್ರಶಾಂತ್ ಅವರ ಮನವಿಗೆ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಸ್ಪಂದಿಸಿದ್ದಾರೆ. ದಿನವೂ ಮೂಲೆಯಲ್ಲಿ ಬಿದ್ದು ವ್ಯರ್ಥವಾಗುವ ಹೂವಿಗಿಂತ ಜ್ಞಾನ ವೃದ್ಧಿಸುವ ಪುಸ್ತಕ ನೀಡಬೇಕೆಂಬ ಮನವಿಗೆ ಸಾವಿರಾರು ಮಂದಿ ಪ್ರತಿಕ್ರಿಯಿಸಿರುವುದು ಅವರಿಗೆ ಖುಷಿ ನೀಡಿದೆ.
ಹೂವಿನ ಬದಲು ಪುಸ್ತಕ ನೀಡಿ
ಚುನಾವಣೆಯಲ್ಲಿ ಗೆದ್ದ ಬಳಿಕ ಕ್ಷೇತ್ರದಲ್ಲಿ ಜನತೆಗೆ ಧನ್ಯವಾದ ಸಲ್ಲಿಸಲು ತೆರಳಿದ್ದ ಶಾಸಕ ಪ್ರಶಾಂತ್, ಜನರು ತಮಗೆ ಹೂವಿನ ಹಾರ ಹಾಕುವುದು ಮತ್ತು ಬೊಕ್ಕೆಗಳನ್ನು ನೀಡುವುದನ್ನು ಕಂಡು ದಂಗಾಗಿದ್ದರು. ಲೆಕ್ಕವಿಲ್ಲದಷ್ಟು ಹೂವು ವ್ಯರ್ಥವಾಗಿದ್ದು ಅವರಿಗೆ ಬೇಸರ ಮೂಡಿಸಿತ್ತು. ಈ ಬಗ್ಗೆ ಕಳೆದ ಗುರುವಾರ ರಾತ್ರಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ ಪ್ರಶಾಂತ್, ತಮಗೆ ಹೂವಿನ ಬದಲು ಪುಸ್ತಕ ನೀಡಿ ಎಂದು ಮನವಿ ಮಾಡಿದ್ದರು.
3 ದಿನದಲ್ಲಿ 3 ಸಾವಿರ ಪುಸ್ತಕ
ಪ್ರಶಾಂತ್ ಅವರ ಮನವಿಗೆ ಬೆಂಬಲಿಗರಿಂದ ದೊರೆತ ಪ್ರತಿಕ್ರಿಯೆ ಅಭೂತಪೂರ್ವವಾಗಿತ್ತು. ಮರುದಿನ ಬೆಳಿಗ್ಗೆ ಅವರನ್ನು ಭೇಟಿಯಾಗಲು ಬಂದವರ ಕೈಯಲ್ಲಿ ಹೂವಿನ ಬದಲು ಪುಸ್ತಕಗಳಿದ್ದವು. ಹೀಗೆ ಕೇವಲ ಮೂರು ದಿನಗಳಲ್ಲಿ ಮೂರು ಸಾವಿರಕ್ಕೂ ಅಧಿಕ ಪುಸ್ತಕಗಳು ತಮ್ಮ ಮನೆ ಸೇರಿದ್ದಾಗಿ ಪ್ರಶಾಂತ್ ಸಂತಸ ಹಂಚಿಕೊಂಡಿದ್ದಾರೆ.
ಶೂ ಪಾಲಿಶ್ ಮಾಡುವವನ ಹಾಡಿಗೆ ಫಿದಾ, ಕಣ್ಣೀರಿಟ್ಟ ಆನಂದ್ ಮಹೀಂದ್ರಾ
ಶಾಲೆಗಳಲ್ಲಿ ಗ್ರಂಥಾಲಯ
ತಮ್ಮ ಕ್ಷೇತ್ರದ ಕೆಲವು ಶಾಲೆಗಳು ಮಾಡಿದ ಮನವಿಯಿಂದ ಈ ರೀತಿಯ ಆಲೋಚನೆ ಮಾಡಲು ಸಾಧ್ಯವಾಯಿತು ಎಂದು ಅವರು ಹೇಳಿಕೊಂಡಿದ್ದಾರೆ. 'ತಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಗ್ರಂಥಾಲಯಗಳನ್ನು ತೆರೆಯಲು ಏನಾದರೂ ಸಹಾಯ ಮಾಡಲು ಸಾಧ್ಯವೇ ಎಂದು ಕೆಲವು ಸರ್ಕಾರಿ ಶಾಲೆಗಳ ಶಿಕ್ಷಕರು ನನ್ನನ್ನು ಭೇಟಿ ಮಾಡಿ ಕೇಳಿದ್ದರು. ಈಗ ಇದುವರೆಗೆ ನನ್ನ ಬಳಿ ಸಂಗ್ರಹವಾಗಿರುವ ಪುಸ್ತಕಗಳಿಂದ ಮೂರು ಶಾಲೆಗಳಲ್ಲಿ ಗ್ರಂಥಾಲಯಗಳನ್ನು ತೆರೆಯಬಹುದು' ಎಂದು ಅವರು ಹೇಳಿದ್ದಾರೆ.
ಜನರ ಸ್ಪಂದನೆಗೆ ಅಚ್ಚರಿ
ತಮ್ಮ ಯೋಜನೆಗೆ ಇಷ್ಟೊಂದು ಸಂಖ್ಯೆಯಲ್ಲಿ ಸ್ಪಂದಿಸಿರುವುದು ಅವರಿಗೆ ಅಚ್ಚರಿ ಮೂಡಿಸಿದೆ. 'ಅಷ್ಟು ಅಲ್ಪಾವಧಿಯಲ್ಲಿ ನೂರಾರು ಜನರು ಮುಂದೆ ಬಂದು ಪುಸ್ತಕಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಅವರಿಗೆ ಇನ್ನೂ ಮೊದಲೇ ಮಾಹಿತಿ ನೀಡಿದ್ದರೆ ಇನ್ನಷ್ಟು ಪುಸ್ತಕಗಳನ್ನು ನಾವು ಸಂಗ್ರಹಿಸಬಹುದಾಗಿತ್ತು' ಎಂದು ತಿಳಿಸಿದ್ದಾರೆ.
ದೆವ್ವಗಳಿವೆ ಎಂದು ಸಾಬೀತು ಮಾಡಿದರೆ 50 ಸಾವಿರ ಬಹುಮಾನ
ಜನರ ನೆಚ್ಚಿನ 'ಮೇಯರ್ ಅಣ್ಣ'
2018ರಲ್ಲಿ ಕೇರಳ ಪ್ರವಾಹದ ವೇಳೆ ಪರಿಹಾರ ಕಾರ್ಯಕ್ಕಾಗಿ ಭಾರಿ ಮೊತ್ತದ ಹಣವನ್ನು ದೇಣಿಗೆ ನೀಡಿದ್ದ ಪ್ರಶಾಂತ್ ದೊಡ್ಡ ಸುದ್ದಿಯಾಗಿದ್ದರು. 34ನೇ ವಯಸ್ಸಿನಲ್ಲಿ ಅವರು ತಿರುವನಂತಪುರದ ಮೇಯರ್ ಆಗಿ ಆಯ್ಕೆಯಾಗಿದ್ದರು. ಅವರು ಅಲ್ಲಿ 'ಮೇಯರ್ ಅಣ್ಣ' ಎಂದೇ ಖ್ಯಾತಿ ಗಳಿಸಿದ್ದಾರೆ. 2019ರ ಅಕ್ಟೋಬರ್ನಲ್ಲಿ ವಟ್ಟಿಯೂರ್ಕವು ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಅವರು ಸುಮಾರು 14 ಸಾವಿರ ಮರಗಳಿಂದ ಗೆಲುವು ಸಾಧಿಸಿದ್ದರು.