ಕಾಶ್ಮೀರ ಇಲ್ಲದ ಭಾರತ ಭೂಪಟ ಹಂಚಿದ ಕೇರಳದ ಶಾಸಕಿ
ತಿರುವನಂತಪುರಂ, ಆ. 17: ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಜನತೆಗೆ ಶುಭ ಕೋರುವಾಗ ಕೇರಳದ ಶಾಸಕಿಯೊಬ್ಬರು ಮಾಡಿದ ಪ್ರಮಾದ ಈಗ ತೊಂದರೆಗೆ ಸಿಲುಕಿದೆ. ಕಾಶ್ಮೀರ ಇಲ್ಲದ ಭಾರತದ ಭೂಪಟದ ಚಿತ್ರ ಹಂಚಿಕೊಂಡ ಶಾಸಕಿ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.
ಅರೂರ್ ಯುಡಿಎಫ್ ಶಾಸಕಿ ಶನಿಮೋಲ್ ಉಸ್ಮಾನ್ ಅವರು ಶುಭಕೋರಿದ ಸಂದೇಶದ ಜೊತೆಗೆ ಕಾಶ್ಮೀರ ಇಲ್ಲದ ಭಾರತದ ನಕ್ಷೆಯನ್ನು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದರು. ಇದನ್ನು ಖಂಡಿಸಿ ಶಾಸಕಿ ವಿರುದ್ಧ ಆಳಪ್ಪುಳದಲ್ಲಿ ದೂರು ದಾಖಲಾಗಿದೆ.
ಅರೂರ್ನ ಸಿಪಿಐ (ಎಂ) ಘಟಕದ ಸದಸ್ಯರು ಯುಡಿಎಫ್ ಶಾಸಕಿ ವಿರುದ್ಧ ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠ ಪಿಎಸ್ ಸಾಬು, ''ಶಾಸಕಿ ವಿರುದ್ಧ ದೂರು ಸ್ವೀಕರಿಸಿದ್ದು, ಪ್ರಕರಣದ ಬಗ್ಗೆ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ'' ಎಂದಿದ್ದಾರೆ.
ಸಾಂವಿಧಾನಿಕವಾಗಿ ಸ್ವೀಕರಿಸಿರುವ ಪ್ರಮಾಣವನ್ನು ಉಲ್ಲಂಘಿಸಿ ಕಾಶ್ಮೀರ ಭಾಗವಿಲ್ಲದ ಭಾರತದ ನಕ್ಷೆಯನ್ನು ಸಾರ್ವಜನಿಕವಾಗಿ ಪ್ರಕಟಿಸುವ ಮೂಲಕ ಉಸ್ಮಾನ್ ಅವರು ಅಪರಾಧ ಎಸಗಿದ್ದಾರೆ ಎಂದು ಸಿಪಿಐ (ಎಂ) ತನ್ನ ದೂರಿನಲ್ಲಿ ಹೇಳಿದೆ.
ಕ್ಷಮೆಯಾಚನೆ: ಶಾಸಕಿಯ ಫೇಸ್ಬುಕ್ ಪೇಜ್ ನಿರ್ವಾಹಕರು, ಕಾಶ್ಮೀರವಿಲ್ಲದ ನಕ್ಷೆಯನ್ನು ತಪ್ಪಾಗಿ ಹಾಕಲಾಗಿತ್ತು. ಈ ಬಗ್ಗೆ ನಮ್ಮ ಗಮನಕ್ಕೆ ಬಂದ ಕೂಡಲೇ ನಕ್ಷೆ ತೆಗೆದುಹಾಕಲಾಗಿದೆ. ಇದು ಉದ್ದೇಶಪೂರ್ವಕವಾಗಿ ಮಾಡಿದ ಪ್ರಮಾದವಲ್ಲ ಎಂದು ಕ್ಷಮೆಯಾಚಿಸಿದ್ದಾರೆ.
ವಿಕಿಪೀಡಿಯಾದಲ್ಲಿದ್ದ ನಕ್ಷೆಯನ್ನು ಪರಿಶೀಲಿಸದೆ ಹಾಗೆ ಬಳಸಲಾಗಿತ್ತು. ಚಿತ್ರವನ್ನು ನಕಲಿಸಿ, ಅಂಟಿಸುವಾಗ ಕಾಶ್ಮೀರ ಭಾಗ ಮಾಯವಾಗಿದೆ. ಇದರ ಅರಿವಾಗದೆ ಪೋಸ್ಟ್ ಮಾಡಲಾಗಿತ್ತು. ಇದು ಉದ್ದೇಶಪೂರ್ವಕವಾಗಿ ಎಸಗಿದ ತಪ್ಪಲ್ಲ ಎಂದು ಫೇಸ್ಬುಕ್ ಪುಟದಲ್ಲಿ ಸಮಜಾಯಿಷಿ ನೀಡಲಾಗಿದೆ.