ಐಸ್ಕ್ರೀಂನಲ್ಲಿ ವಿಷ ಹಾಕಿ ತಂಗಿಯ ಹತ್ಯೆ : ಕಾರಣ ವಿಚಿತ್ರ
ಕೊಚ್ಚಿ, ಆಗಸ್ಟ್ 14: ಹದಿನಾರು ವರ್ಷದ ಬಾಲಕಿಗೆ ಐಸ್ಕ್ರೀಂನಲ್ಲಿ ವಿಷ ಹಾಕಿ ಸಹೋದರನೇ ಹತ್ಯೆ ಮಾಡಿದ ಘಟನೆ ಕಾಸರಗೋಡು ಜಿಲ್ಲೆಯಲ್ಲಿ ನಡೆದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ತನಿಖಾ ವರದಿಯ ಪ್ರಕಾರ ತಾನೊಬ್ಬನೇ ಏಕಾಂಗಿ ಜೀವನ ನಡೆಸುವುದಕ್ಕಾಗಿ ಇಡೀ ಕುಟುಂಬಕ್ಕೆ ವಿಷವುಣಿಸಲು ಅಲ್ಬಿನ್ ಯತ್ನಿಸಿದ್ದಾನೆಂದು ತಿಳಿದುಬಂದಿದೆ. ಅಲ್ಲದೆ, ಆತ ಮಾದಕ ವ್ಯಸನಿಯಾಗಿದ್ದ ಎಂದು ತಿಳಿದುಬಂದಿದೆ. ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ನಡೆಯುತ್ತಿದೆ.
ಯಲ್ಲಾಪುರ; 40 ದಿನದ ಮಗುವನ್ನು ಬಾವಿಗೆ ಎಸೆದ ತಂದೆ ತಾಯಿ
ವೆಲ್ಲರಿಕ್ಕುಂದು ಠಾಣಾ ಪೊಲೀಸರು 22 ವರ್ಷದ ಆರೋಪಿ ಅಲ್ಬಿನ್ ಬೆನ್ನಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಅಲ್ಬಿನ್ ಮೊದಲು ಚಿಕನ್ ಸಾಂಬಾರಿನಲ್ಲಿ ವಿಷ ಹಾಕಿ ಕುಟುಂಬವನ್ನು ಹತ್ಯೆ ಮಾಡುವ ಪ್ರಯತ್ನ ಮಾಡಿದ್ದ. ಬಳಿಕ ಆಗಸ್ಟ್ 3ರಂದು ತಾನೇ ತಯಾರಿಸಿದ್ದ ಐಸ್ಕ್ರೀಂನಲ್ಲಿ ವಿಷ ಬೆರೆಸಿದ್ದ ಎನ್ನಲಾಗಿದೆ.
ಪೊಲೀಸ್ ಶಿಷ್ಟಾಚಾರ ಪ್ರಕಾರ ಮರಣೋತ್ತರ ವರದಿ ನಡೆಸಲಾಗಿದ್ದು, ಮೇರಿ ಸಾವು ಅಸ್ವಾಭಾವಿಕ ಎಂದು ತಿಳಿದುಬಂದಿದೆ. ಅಲ್ಲದೆ, ಮೇರಿ ದೇಹದಲ್ಲಿ ವಿಷದ ಅಂಶ ಪತ್ತೆಯಾಗಿದೆ. ಐಸ್ಕ್ರೀಂ ತಿಂದ ಬೆನ್ನಲ್ಲೇ ತಂದೆ ಹಾಗೂ ಮಗಳ ದೇಹದಲ್ಲಿ ವಿಷ ಇರುವುದನ್ನು ತಿಳಿದ ಪೊಲೀಸರಿಗೆ ಅನುಮಾನ ಶುರುವಾಗಿದೆ.
ಇದನ್ನು ತಿಂದ ಸಹೋದರಿ ಅನ್ನ ಮೇರಿ (16) ಹಾಗೂ ತಂದೆ ಫುಡ್ ಪಾಯಿಸನ್ ಆಗಿ ಒದ್ದಾಡಿದ್ದಾರೆ. ಇದನ್ನು ಕಂಡ ಕುಟುಂಬಸ್ಥರು ಅವರನ್ನು ಕಣ್ಣೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದಾರೆ.
ಆದರೆ, ಚಿಕಿತ್ಸೆ ಫಲಿಸದೇ ಮೇರಿ ಆಗಸ್ಟ್ 6ರಂದು ಮೃತಪಟ್ಟಿದ್ದು, ತಂದೆಯ ಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕೋಯಿಕ್ಕೊಡ್ನ ಮಿಮ್ಸ್ (MIMS) ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಪ್ರಕರಣದ ಮೇಲೆ ಹದ್ದಿನ ಕಣ್ಣಿಟ್ಟಿದ್ದ ಪೊಲೀಸರಿಗೆ ಅಲ್ಬಿನ್ ಹಾಗೂ ತಾಯಿಯ ಮೇಲೆ ಅನುಮಾನ ಬಂದಿದೆ. ಏಕೆಂದರೆ, ಐಸ್ಕ್ರೀಮ್ ತಿಂದರೂ ಅಲ್ಬಿನ್ಗೆ ಏನು ಆಗದೇ ಇರುವುದು ಹಾಗೂ ತಾಯಿ ಕೂಡ ಆರೋಗ್ಯವಾಗಿ ಉಳಿದುಕೊಂಡಿದ್ದು ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು.
ಇದೇ ಆರೋಪದಲ್ಲಿ ಗುರುವಾರ ಅಲ್ಬಿನ್ನನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿ, ಮನೆಯ ತಪಾಸಣೆಯನ್ನು ಮಾಡಿದ್ದಾರೆ. ತಾಯಿ ಐಸ್ಕ್ರೀಂ ತಿನ್ನದೇ ಇರುವುದರಿಂದ ಬದುಕುಳಿದಿದ್ದಾರೆ. ಹೀಗಾಗಿ ಕೃತ್ಯದಲ್ಲಿ ತಾಯಿಯ ಪಾತ್ರ ಇಲ್ಲ ಎಂಬುದು ತಿಳಿದುಬಂದಿರುವುದಾಗಿ ಸರ್ಕಲ್ ಇನ್ಸ್ಪೆಕ್ಟರ್ ಹೇಳಿದ್ದಾರೆ.