ಕೇರಳ ಮಳೆ: ಮೃತರ ಸಂಖ್ಯೆ 26 ಕ್ಕೆ ಏರಿಕೆ, ಪಿಣರಾಯಿ ಜತೆ ಮೋದಿ ಮಾತುಕತೆ
ತಿರುವನಂತಪುರಂ, ಅಕ್ಟೋಬರ್ 17: ಕೇರಳದಲ್ಲಿ ಭಾರೀ ಮಳೆಯಿಂದಾಗಿ ಶುಕ್ರವಾರ ಭೂ ಕುಸಿತವಾಗಿದ್ದು, ಈಗಲೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು (ಎನ್ಡಿಆರ್ಎಫ್) ಕೇರಳದಲ್ಲಿ ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆಗಳನ್ನು ನಡೆಸುತ್ತಿದೆ. ಈವರೆಗೆ ಈ ಭೂ ಕುಸಿತದಿಂದಾಗಿ ಸಾವನ್ನಪ್ಪಿದವರ ಸಂಖ್ಯೆಯು 26 ಕ್ಕೆ ಏರಿಕೆ ಕಂಡಿದೆ. ಈ ಪೈಕಿ ಕೊಟ್ಟಯಂ ಪ್ರದೇಶಕ್ಕೆ ಸೇರಿದವರು 13 ಮಂದಿ, 9 ಮಂದಿ ಇಡುಕ್ಕಿಗೆ ಸೇರಿದವರು ಹಾಗೂ ನಾಲ್ವರು ಅಲಪ್ಪುಲಂಗೆ ಸೇರಿದವರು ಆಗಿದ್ದಾರೆ.
ಎನ್ಡಿಆರ್ಎಫ್ ಮಾತ್ರವಲ್ಲದೇ ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ದಳವು ಕೂಡಾ ಸ್ಥಳೀಯರ ಸಹಕಾರದೊಂದಿಗೆ ರಕ್ಷಣೆ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಕೊಟ್ಟಯಂ ಜಿಲ್ಲೆಯ ಕೂಟ್ಟಿಕಲ್ ಹಾಗೂ ಇಡ್ಡುಕ್ಕಿ ಜಿಲ್ಲೆಯ ಕೊಕ್ಕಯಾರ್ನಲ್ಲಿ ಡಜನ್ಗಟ್ಟಲೇ ಜನರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಈ ಪ್ರದೇಶದಲ್ಲಿ ಈಗಲೂ ನಾಪತ್ತೆಯಾದವರ ಪತ್ತೆ ಕಾರ್ಯ ನಡೆಸಲಾಗುತ್ತಿದೆ.
ಕೇರಳದಲ್ಲಿ ಮುಂದುವರಿದ ವರುಣನ ಆರ್ಭಟ: 11 ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ಘೋಷಣೆ
ಇನ್ನು ಈವರೆಗೆ ಲಭಿಸಿದ ಮೃತ ದೇಹದ ಪೈಕಿ ಮೂರು ಮಕ್ಕಳು ಆಗಿದ್ದಾರೆ, ವಯಸಾದವರು ಎಂಟು ಮಂದಿ ಆಗಿದ್ದಾರೆ. ಇನ್ನು ರಕ್ಷಣಾ ಕಾರ್ಯಾಚರಣೆಯ ಸಂದರ್ಭದಲ್ಲಿ ಏಳೆಂಟು ಮಂದಿ ಪರಸ್ಪರರನ್ನು ಗಟ್ಟಿಯಾಗಿ ತಬ್ಬಿಕೊಂಡಿರುವುದು ಕಂಡು ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಎಲ್ಲಾ ಬೆಳವಣಿಗೆಯ ಬಗ್ಗೆ ಇಂದು ಸಂಜೆ ಮಾಹಿತಿ ನೀಡಿದ ಕೊಟ್ಟಯಂ ಜಿಲ್ಲೆಯ ಕಲೆಕ್ಟರ್ ಪಿ ಕೆ ಜಯಶ್ರೀ, "ಪ್ರಸ್ತುತ ಪರಿಸ್ಥಿತಿಯು ನಮ್ಮ ಹತೋಟಿಯಲ್ಲಿದೆ. ರಾತ್ರಿ ಹೊತ್ತಲ್ಲಿ ಮತ್ತೆ ತ್ರೀವ್ರವಾಗಿ ಮಳೆ ಸುರಿದರೆ, ತೊಂದರೆ ಉಂಟಾಗಲಿದೆ. 13 ಮಂದಿಯ ಸಾವಿನ ಹೊರತಾಗಿ ಬೇರೆ ಯಾವುದೇ ನಾಪತ್ತೆ ಪ್ರಕರಣಗಳು ವರದಿಯಾಗಿಲ್ಲ," ಎಂದು ಮಾಹಿತಿ ನೀಡಿದ್ದಾರೆ.
ಕೇರಳದಲ್ಲಿ ತೀವ್ರ ಮಳೆ ಉಂಟಾದ ಹಿನ್ನೆಲೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, "ಕೇಂದ್ರ ಸರ್ಕಾರವು ಕೇರಳದ ಪರಿಸ್ಥಿತಿಯನ್ನು ಪರಿಶೀಲನೆ ಮಾಡುತ್ತಿದೆ. ಕೇಂದ್ರ ಗೃಹ ಇಲಾಖೆಯು ಕೇರಳದಲ್ಲಿ ದುರಂತ ಸಂಭವಿಸಿದ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲು ಎನ್ಡಿಆರ್ಎಫ್ ತಂಡವನ್ನು ನಿಯೋಜನೆ ಮಾಡಿದೆ," ಎಂದು ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, "ಭಾರೀ ಮಳೆ ಹಾಗೂ ನೆರೆ ಉಂಟಾಗಿರುವ ಕೇರಳದ ಪರಿಸ್ಥಿತಿಯ ಬಗ್ಗೆ ನಾವು ನಿರಂತರವಾಗಿ ಪರಿಶೀಲನೆ ನಡೆಸುತ್ತಿದ್ದೇವೆ. ಜನರಿಗೆ ಅಗತ್ಯವಿರುವ ಎಲ್ಲಾ ಸಹಾಯವನ್ನು ಮಾಡಲು ಕೇಂದ್ರ ಸರ್ಕಾರವು ಸಿದ್ಧವಾಗಿದೆ. ರಕ್ಷಣಾ ಕಾರ್ಯಾಚರಣೆ ನಡೆಸಲು ಎನ್ಡಿಆರ್ಎಫ್ ತಂಡವನ್ನು ಕಳುಹಿಸಲಾಗಿದೆ. ಎಲ್ಲರ ಸುರಕ್ಷತೆಗಾಗಿ ಪ್ರಾರ್ಥಿಸುತ್ತಿದ್ದೇನೆ," ಎಂದು ಹೇಳಿದ್ದಾರೆ.
Video: ಕೇರಳದ 5 ಜಿಲ್ಲೆಗಳಲ್ಲಿ ರೆಡ್, 7 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್: ಹೇಗಿದೆ ಪರಿಸ್ಥಿತಿ?
ಇನ್ನು ತಾನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜೊತೆಗೆ ಮಾತುಕತೆ ನಡೆಸಿದ್ದೇನೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತನ್ನ ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, "ಕೇರಳ ಮುಖ್ಯಮಂತ್ರಿ ಜೊತೆ ಕೇರಳದಲ್ಲಿ ಭೂ ಕುಸಿತ ಹಾಗೂ ಮಳೆಯ ವಿಚಾರದಲ್ಲಿ ಮಾತುಕತೆ ನಡೆಸಿದೆ. ಸಂಬಂಧ ಪಟ್ಟ ಇಲಾಖೆಯು ರಕ್ಷಣಾ ಕಾರ್ಯಾಚರಣೆ, ಗಾಯಾಳುಗಳಿಗೆ ಚಿಕಿತ್ಸೆ ಮೊದಲಾದ ಕಾರ್ಯವನ್ನು ಮಾಡುತ್ತಿದೆ. ಎಲ್ಲರ ಸುರಕ್ಷತೆಗಾಗಿ ನಾನು ಪ್ರಾರ್ಥನೆ ಮಾಡುತ್ತೇನೆ. ಕೇರಳದಲ್ಲಿ ತೀವ್ರ ಮಳೆ ಹಾಗೂ ಭೂಕುಸಿತದಿಂದಾಗಿ ಕೆಲವು ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬೇಸರವಾಗಿದೆ. ಮೃತರ ಕುಟುಂಬಕ್ಕೆ ಸಂತಾಪವನ್ನು ತಿಳಿಸುತ್ತೇವೆ," ಎಂದಿದ್ದಾರೆ.
ಭಾರತೀಯ ಹವಾಮಾನ ಇಲಾಖೆಯು ಇಂದು ಕೇರಳದ ಹನ್ನೊಂದು ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ಘೋಷಣೆ ಮಾಡಿದೆ. ತಿರುವನಂತಪುರಂ, ಕೊಲ್ಲಂ, ಪಥನಂತಿಟ್ಟ, ಆಲಪ್ಪುಲ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ, ತ್ರಿಶೂರ್, ಪಾಲಕ್ಕಾಡ್, ಮಲಪುರಂ, ಕೋಝಿಕ್ಕೋಡಿನಲ್ಲಿ ಯೆಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ತಿಳಿಸಿದೆ. ಇನ್ನು ಈ ಎಲ್ಲಾ ಜಿಲ್ಲೆಗಳಲ್ಲೂ ಭಾರೀ ಮಳೆಯಾಗಲಿದೆ ಎಂದು ಕೂಡಾ ಭಾರತೀಯ ಹವಾಮಾನ ಇಲಾಖೆಯು ಮಾಹಿತಿ ನೀಡಿದೆ
(ಒನ್ಇಂಡಿಯಾ ಸುದ್ದಿ)